Politics Astrology: 'ಇದೇ ಪಕ್ಷ ಅಧಿಕಾರಕ್ಕೆ ಬರುತ್ತೆ' ನಿಜವಾಗಲಿಲ್ಲ ವೈಜ್ಞಾನಿಕ ಭವಿಷ್ಯ
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಪಕ್ಕಾ ಎಂದಿದ್ದ ಎಲ್ಲಾ ಜ್ಯೋತಿಷಿಗಳ ರಾಜಕೀಯ ಭವಿಷ್ಯ ಸುಳ್ಳಾಗಿದೆ. ಈ ಬಾರಿ ಒಂದು ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ. ಬಹುಮತದಿಂದ ಗೆಲ್ಲುತ್ತದೆ ಎಂದು ಹಲವಾರು ಜ್ಯೋತಿಷಿಗಳು ಭವಿಷ್ಯ ನುಡಿದ್ದರು. ಆದರೆ ಅವರ ಭವಿಷ್ಯ ಎಷ್ಟು ನಿಜವಾಗಿದೆ ಎಂದು ಅವಲೋಕಿಸಿದರೆ ಉತ್ತರ ಮಾತ್ರ ಶೂನ್ಯ.
ಮೊನ್ನೆಯಷ್ಟೇ ವೈಜ್ಞಾನಿಕ ಭವಿಷ್ಯದಲ್ಲಿ ಬಿಜೆಪಿಗೆ ಪಕ್ಕಾ ಗೆಲುವಾಗುತ್ತದೆ ಎಂದು ಹೇಳಲಾಗಿತ್ತು. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಜೊತೆಗೆ 2023ರ ಚುನಾವಣೆಯಲ್ಲಿ 130ಕ್ಕೂ ಹೆಚ್ಚು ಸ್ಥಾನವನ್ನು ಬಿಜೆಪಿ ಪಡೆಯುವುದು ಫಿಕ್ಸ್ ಎಂದು ಹೇಳಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಆದರೆ ಈ ಭವಿಷ್ಯ ಸದ್ಯ ಮಕಾಡೆ ಮಲಗಿದೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ 135, ಬಿಜೆಪಿ 65, ಜೆಡಿಎಸ್ 19 ಸ್ಥಾನಗಳನ್ನು ಪಡೆದುಕೊಂಡಿದೆ.

ಹಾಗಾದರೆ ವೈಜ್ಞಾನಿಕ ಭವಿಷ್ಯವನ್ನು ಏನೆಂದು ನುಡಿಯಲಾಗಿತ್ತು. ಅದರ ಒಂದು ದೃಶ್ಯದ ತುಣುಕು ಇಲ್ಲಿದೆ.
ಪ್ರಧಾನಿ ಮೋದಿ ರಾಜ್ಯಾದ್ಯಂತ 25ಕ್ಕೂ ಅಧಿಕ ರ್ಯಾಲಿ, ರೋಡ್ ಶೋ ನಡೆಸಿದರೂ ಬಿಜೆಪಿ ನೆಲೆ ಭದ್ರಗೊಳಿಸಲಾಗಲಿಲ್ಲ. ಆದರೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸಿದೆ. 135 ಕ್ಷೇತ್ರಗಳನ್ನು ಗೆದ್ದಿರುವ ಕಾಂಗ್ರೆಸ್ನ ದಿಗ್ವಿಜಯದ ಹಿಂದೆ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ದೊಡ್ಡ ಮಟ್ಟದ ಕೆಲಸ ಮಾಡಿದೆ. ಕರ್ನಾಟಕದಲ್ಲಿ ಭಾರತ್ ಜೋಡೋ ಸಾಗಿದ ಜಿಲ್ಲೆಗಳಲ್ಲಿ ಕಾಂಗ್ರೆಸ್ಗೆ ಒಳ್ಳೆಯ ಫಸಲು ಸಿಕ್ಕಿದ್ದು, 37ಕ್ಕೂ ಹೆಚ್ಚು ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.
ಈ ಹಿಂದೆ ಮೈಲಾರಲಿಂಗೇಶ್ವರ ಕ್ಷೇತ್ರದ ಗೊರವಯ್ಯ ಅವರು ಮುಂದಿನ ರಾಜಕೀಯ ಭವಿಷ್ಯ ನುಡಿದಿದ್ದರು. ಮುಂದಿನ ಸಿಎಂ ಯಾರಾಗಲಿದ್ದಾರೆಂದು ಗೊರವಯ್ಯ ಹೇಳಿದ್ದರು. ಹೆಚ್ಡಿ ಕುಮಾರಸ್ವಾಮಿ ಬಗ್ಗೆ ಗೊರವಯ್ಯ ರಾಜಕೀಯ ಭವಿಷ್ಯ ನುಡಿಯುವ ಮೂಲಕ ಭಾರೀ ಕುತೂಹಲವನ್ನು ಹುಟ್ಟುಹಾಕಿದ್ದರು. ಕೆಲ ದಿನಗಳ ಹಿಂದೆ ಚಿತ್ರದುರ್ಗದಲ್ಲಿ ಜೆಡಿಎಸ್ ಅಭ್ಯರ್ಥಿ ರಘು ಆಚಾರ್ ಮನೆಗೆ ಆಗಮಿಸಿದ ಗೊರವಯ್ಯ, 'ಹೆಚ್ಡಿ ಕುಮಾರಸ್ವಾಮಿ ಮತ್ತೆ ಸಿಎಂ ಆಗೇ ಆಗ್ತಾರೆ. ಚಿತ್ರದುರ್ಗದಲ್ಲಿ ರಘು ಆಚಾರ್ ಗೆದ್ದು ಬರ್ತಾರೆ' ಎಂದು ಭವಿಷ್ಯ ನುಡಿದಿದ್ದರು. ಜೊತೆಗೆ ಹೆಚ್ಡಿಕೆಗೆ ಮೈಲಾರಲಿಂಗೇಶ್ವರರ ಆಶೀರ್ವಾದ ಸಿಕ್ಕಿದೆ' ಎಂದು ಹೇಳಿದ್ದರು.
ಆದರೆ ಮೈಲಾರಲಿಂಗೇಶ್ವರ ನುಡಿದ ಭವಿಷ್ಯ ಸುಳ್ಳಾಗಿದೆ. ಈ ಬಾರಿ ಜೆಡಿಎಸ್ ಕಳೆದ ಬಾರಿಗಿಂತ ಕಡಿಮೆ ಸ್ಥಾನಗಳನ್ನು ಪಡೆದುಕೊಂಡಿದೆ. ಹೀಗಾಗಿ ಸ್ಪಷ್ಟಬಹುಮತ ಪಡೆದ ಕಾಂಗ್ರೆಸ್ ಈಗಾಗಲೇ ಸಿಎಂ ಅಭ್ಯರ್ಥಿಗಳ ಆಯ್ಕೆಯಲ್ಲಿ ನಿರತವಾಗಿದೆ.












Click it and Unblock the Notifications