ಉಡುಪಿ; ಟೋಲ್ ಕಂಪನಿಗೆ ಸೆಡ್ಡು, ಉಚಿತ ರಸ್ತೆ ನಿರ್ಮಾಣ!
ಉಡುಪಿ, ಏಪ್ರಿಲ್ 2; ಹೆಜಮಾಡಿ ಟೋಲ್ ಗೇಟ್ನ ವಿವಾದ ಮತ್ತೊಂದು ತಿರುವು ಪಡೆದುಕೊಂಡಿದೆ. ನವಯುಗ್ ಕಂಪನಿಯ ವಿರುದ್ಧ ತಿರುಗಿ ಬಿದ್ದಿರುವ ಗ್ರಾಮಸ್ಥರು ಉಚಿತ ರಸ್ತೆಯನ್ನು ನಿರ್ಮಾಣ ಮಾಡಿದ್ದಾರೆ.
ಸ್ಥಳೀಯ ವಾಹನಗಳಿಗೆ ಟೋಲ್ ವಿನಾಯಿತಿ ನೀಡಬೇಕು ಎಂಬ ಹೋರಾಟ ನಡೆಯುತ್ತಿತ್ತು. ಹೆಜಮಾಡಿ ಗ್ರಾಮ ಪಂಚಾಯಿತಿ ನವಯುಗ್ ಕಂಪನಿಗೆ ಸ್ಥಳೀಯ ಗುರುತಿನ ಚೀಟಿ ಇರುವ ವಾಹನಗಳಿಗೆ ವಿನಾಯಿತಿ ನೀಡುವಂತೆ ಮನವಿ ಮಾಡಿತ್ತು.
ಟೋಲ್ ಕಂಪನಿ ಇದಕ್ಕೆ ಸ್ಪಂದಿಸಲಿಲ್ಲ. ಇದರಿಂದ ರೊಚ್ಚಿಗೆದ್ದ ಜನರು ಟೋಲ್ ಗೇಟ್ ಪಕ್ಕದಲ್ಲಿದ್ದ ಖಾಸಗಿ ಜಮೀನಿನಲ್ಲಿ ಉಚಿತ ರಸ್ತೆಯನ್ನು ನಿರ್ಮಾಣ ಮಾಡಲು ಆರಂಭಿಸಿದರು. ಟೋಲ್ ಕಂಪನಿ ಇದರಿಂದ ಬೆಚ್ಚಿ ಬಿದ್ದಿದೆ.

ಹೆಜಮಾಡಿ ಸ್ಥಳೀಯ ವಿಳಾಸದ ಗುರುತಿನ ಚೀಟಿ ಇರುವ ವಾಹನಗಳಿಗೆ ಟೋಲ್ ಫ್ರೀ ಎಂದು ಲಿಖಿತವಾಗಿ ಹೋರಾಟ ನಡೆಸುತ್ತಿದ್ದವರಿಗೆ ಭರವಸೆ ಕೊಟ್ಟಿದೆ. ಗ್ರಾಮಸ್ಥರು ನಿರ್ಮಿಸಿದ ಉಚಿತ ರಸ್ತೆಯನ್ನು ಮುಚ್ಚಲು ಟೋಲ್ ಸಿಬ್ಬಂದಿ ಪ್ರಯತ್ನ ನಡೆಸಿದರು. ಗ್ರಾಮಸ್ಥರ ವಿರೋಧದಿಂದಾಗಿ ಸುಮ್ಮನಾದರು.
ಸ್ಥಳೀಯ ವಾಹನಗಳಿಗೆ ಟೋಲ್ ಫ್ರೀ ಎಂದು ಲಿಖಿತ ಉತ್ತರ ನೀಡುವ ತನಕ ರಸ್ತೆ ಬಂದ್ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು. ಇದರಿಂದಾಗಿ ನವಯುಗ್ ಕಂಪನಿ ವಾಹನಗಳಿಗೆ ವಿನಾಯಿತಿ ನೀಡುವುದಾಗಿ ಲಿಖಿತ ಭರವಸೆಯನ್ನು ನೀಡಿತು.
ಹೆಜಮಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಾಣೇಶ್ ಹೆಜಮಾಡಿ ನೇತೃತ್ವದಲ್ಲಿ ಎಲ್ಲಾ ಸದಸ್ಯರು ಟೋಲ್ ರಸ್ತೆಯ ಪಕ್ಕದಲ್ಲೇ ಉಚಿತ ರಸ್ತೆಯನ್ನು ನಿರ್ಮಾಣ ಮಾಡಿದರು. ಈ ಮೂಲಕ ಟೋಲ್ ಕಂಪನಿಗೆ ತಕ್ಕ ಪಾಠವನ್ನು ಕಲಿಸಿದರು.
ಟೋಲ್ ಉಸ್ತುವಾರಿ ನೋಡಿಕೊಳ್ಳುತ್ತಿರುವ ಶಿವಪ್ರಸಾದ್ ಮೇಲಾಧಿಕಾರಿಗಳ ಜೊತೆ ಮಾತನಾಡಿ ಸ್ಥಳೀಯ ವಾಹನಗಳಿಗೆ ಟೋಲ್ ಶುಲ್ಕದಿಂದ ವಿನಾಯಿತಿ ಕೊಡಿಸಿದ್ದಾರೆ. ಈ ಕುರಿತ ಪತ್ರವನ್ನು ಕಂಪನಿಯಿಂದ ನೀಡಲಾಗಿದೆ.
ಹೆಜಮಾಡಿ ಮತ್ತು ಸುರತ್ಕಲ್ ಟೋಲ್ಗಳನ್ನು ವಿಲೀನಗೊಳಿಸಬೇಕು ಎಂಬ ಬೇಡಿಕೆ ಹಾಗೆಯೇ ಇದೆ. ಸುರತ್ಕಲ್ ಟೋಲ್ ಬಗ್ಗೆ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಕೆಲವು ದಿನಗಳ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಜೊತೆ ಚರ್ಚೆ ನಡೆಸಿದ್ದರು.












Click it and Unblock the Notifications