ಮಡಿಕೇರಿ, ಏಪ್ರಿಲ್ 19; ಮೂರು ಹಸುಗಳನ್ನು ಅಮಾನುಷವಾಗಿ ಕೊಂದು ಹಾಕಿರುವ ಘಟನೆ ಗೋಣಿಕೊಪ್ಪ ವ್ಯಾಪ್ತಿಯ ಹೆಬ್ಬಾಲೆ ದೇವರಪುರದ ಎಸ್ಟೇಟ್ ವೊಂದರಲ್ಲಿ ನಡೆದಿದೆ. ಹಸುಗಳ ಮೌಲ್ಯ ಸುಮಾರು 50 ಸಾವಿರಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಹುದಿಕೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೂರು ಹಸುಗಳ ಮೃತದೇಹ ಸಿಕ್ಕಿದ್ದು, ಗುಂಡು ಹಾರಿಸಿ, ಕುತ್ತಿಗೆಯನ್ನು ಕತ್ತರಿಸಲಾಗಿದೆ. ಮಾಂಸಕ್ಕಾಗಿ ಈ ಕೃತ್ಯ ನಡೆಸಲಾಗಿದೆ ಎಂಬ ಸಂಶಯ ವ್ಯಕ್ತವಾಗಿದ್ದು, ಭಾನುವಾರ ರಾತ್ರಿ ಈ ಘಟನೆ ನಡೆದಿದೆ.
ಹಸುಗಳನ್ನು ಹತ್ಯೆ ಮಾಡಿದವರು ಮೃತ ದೇಹಗಳನ್ನು ಅಲ್ಲೇ ಬಿಟ್ಟು ಹೋಗಿದ್ದಾರೆ. ಈ ಹಸುಗಳು ಕಳ್ಳಿಚ್ಚಂಡ ರಮೇಶ್, ಕಳ್ಳಿಚ್ಚಂಡ ಸಾಬು ಗಣಪತಿ ಮತ್ತು ಎರವರ ಚುಬ್ರ ಎಂಬುವವರಿಗೆ ಸೇರಿದ್ದಾಗಿದೆ. ಹಸುವಿನ ಕುತ್ತಿಗೆಯನ್ನೂ ಕೊಯ್ಯಲಾಗಿದ್ದು ಇದನ್ನು ಹಲಾಲ್ ಮಾಡಿ ಸಾಗಿಸಲು ಸಾಧ್ಯವಾಗದೇ ಬಿಟ್ಟು ಹೋಗಿದ್ದಾರೆ ಎಂದು ಸಾಬು ಗಣಪತಿ ಆರೋಪಿಸಿದ್ದಾರೆ.