MS Dhoni: ಬಿಹಾರ-ಜಾರ್ಖಂಡ್ನಲ್ಲಿ ಅತಿ ಹೆಚ್ಚು ತೆರಿಗೆ ಕಟ್ಟಿದ 'ಕ್ಯಾಪ್ಟನ್ ಕೂಲ್'; 20,000 ಕೋಟಿ ತಲುಪಿದ ಒಟ್ಟು ಐಟಿ ಸಂಗ್ರಹ
ರಾಂಚಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಮೈದಾನದ ಹೊರಗೂ ತಮ್ಮ ಪ್ರಾಮಾಣಿಕತೆ ಮತ್ತು ಜವಾಬ್ದಾರಿಯನ್ನು ಮೆರೆದಿದ್ದಾರೆ. ಬಿಹಾರ ಮತ್ತು ಜಾರ್ಖಂಡ್ ಎರಡೂ ರಾಜ್ಯಗಳ ಪೈಕಿ ಅತಿ ಹೆಚ್ಚು ವೈಯಕ್ತಿಕ ತೆರಿಗೆ ಪಾವತಿಸಿದ ವ್ಯಕ್ತಿಯಾಗಿ ಎಂ.ಎಸ್ ಧೋನಿ ಹೊರಹೊಮ್ಮಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
2025-2026ನೇ ಸಾಲಿನ ಆರ್ಥಿಕ ವರ್ಷದಲ್ಲಿ ಬಿಹಾರ ಮತ್ತು ಜಾರ್ಖಂಡ್ ವಲಯದಿಂದ ಆದಾಯ ತೆರಿಗೆ ಇಲಾಖೆಯು ಒಟ್ಟು 20,000 ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸಿದೆ. ಈ ಪೈಕಿ ಜಾರ್ಖಂಡ್ ರಾಜ್ಯವೊಂದರಿಂದಲೇ 12,000 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಬಿಹಾರ-ಜಾರ್ಖಂಡ್ ವಲಯದ ಪ್ರಧಾನ ಮುಖ್ಯ ಆದಾಯ ತೆರಿಗೆ ಕಮಿಷನರ್ ಡಾ. ಡಿ ಸುಧಾಕರ ರಾವ್ ಅವರು ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುವಾಗ ಮಾಹಿತಿ ನೀಡಿದ್ದಾರೆ. ತೆರಿಗೆ ಸಂಗ್ರಹದ ಒಟ್ಟು ಮೊತ್ತದಲ್ಲಿ ಸುಮಾರು ಶೇಕಡಾ 70 ರಷ್ಟು ಹಣವು ಮೂಲದಲ್ಲೇ ತೆರಿಗೆ ಕಡಿತ (TDS) ಮೂಲಕ ಸಂಗ್ರಹವಾಗಿದೆ ಎಂಬುದು ವಿಶೇಷ.

ತೆರಿಗೆ ಪಾವತಿಯ ವಿವರಗಳನ್ನು ಹಂಚಿಕೊಂಡ ಡಾ. ರಾವ್, "ಕಳೆದ ಆರ್ಥಿಕ ವರ್ಷದಲ್ಲಿ ಬಿಹಾರ ಮತ್ತು ಜಾರ್ಖಂಡ್ ಎರಡೂ ರಾಜ್ಯಗಳನ್ನು ಒಟ್ಟಾಗಿ ಪರಿಗಣಿಸಿದರೆ, ಎಂ.ಎಸ್ ಧೋನಿ ಅವರು ಅತಿ ಹೆಚ್ಚು ವೈಯಕ್ತಿಕ ತೆರಿಗೆ ಪಾವತಿಸಿದ ವ್ಯಕ್ತಿಯಾಗಿದ್ದಾರೆ" ಎಂದು ಘೋಷಿಸಿದರು. ಆದರೆ, ನಿಯಮಗಳ ಪ್ರಕಾರ ಧೋನಿ ಪಾವತಿಸಿದ ನಿಖರವಾದ ತೆರಿಗೆ ಮೊತ್ತವನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದರು. ಇನ್ನು ಕಾರ್ಪೊರೇಟ್ ವಲಯದಲ್ಲಿ ಸೆಂಟ್ರಲ್ ಕೋಲ್ ಫೀಲ್ಡ್ಸ್ ಲಿಮಿಟೆಡ್ (CCL), ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್ (BCCL) ಮತ್ತು CMPDI ಸಂಸ್ಥೆಗಳು ಅತಿ ಹೆಚ್ಚು ತೆರಿಗೆ ಪಾವತಿಸಿದ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಕಳೆದ ವರ್ಷದ ತೆರಿಗೆ ಸಂಗ್ರಹದ ಕುರಿತು ಮಾತನಾಡಿದ ಅಧಿಕಾರಿಗಳು, ಭಾರೀ ಮಳೆಯಿಂದಾಗಿ ಗಣಿಗಾರಿಕೆ ಚಟುವಟಿಕೆಗಳಿಗೆ ಅಲ್ಪ ಮಟ್ಟದ ಅಡಚಣೆಯಾಗಿತ್ತು, ಇದು ತೆರಿಗೆ ಸಂಗ್ರಹದ ಮೇಲೆ ಸ್ವಲ್ಪ ಪರಿಣಾಮ ಬೀರಿದೆ. ಆದರೂ, ಪ್ರಸಕ್ತ ಹಣಕಾಸು ವರ್ಷದಲ್ಲಿ 20,000 ಕೋಟಿ ರೂಪಾಯಿಗಳ ಗಡಿಯನ್ನು ಮೀರುವ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಬಿಹಾರ ಮತ್ತು ಜಾರ್ಖಂಡ್ನಲ್ಲಿ ಸುಮಾರು 5.5 ಕೋಟಿ ಪಾನ್ ಕಾರ್ಡ್ ಹೊಂದಿರುವವರಿದ್ದರೂ, ಕೇವಲ 40 ಲಕ್ಷ ಜನರು ಮಾತ್ರ ತೆರಿಗೆ ರಿಟರ್ನ್ಸ್ ಸಲ್ಲಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ರಾವ್, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ತೆರಿಗೆ ಪಾವತಿಸಲು ಮುಂದೆ ಬರಬೇಕು ಎಂದು ಕೋರಿದರು.
ನೂತನ ಆದಾಯ ತೆರಿಗೆ ಕಾಯ್ದೆ 2025
ಇದೇ ಸಂದರ್ಭದಲ್ಲಿ ಹೊಸ ಆದಾಯ ತೆರಿಗೆ ಕಾಯ್ದೆ 2025 ರ ಕುರಿತು ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಾಯಿತು. ಈ "ಹೊಸ ಕಾಯ್ದೆಯು ಹೆಚ್ಚು ಸ್ಪಷ್ಟತೆ, ಸರಳ ಭಾಷೆ ಮತ್ತು ಸುಲಭವಾದ ರಚನೆಯನ್ನು ಹೊಂದಿದೆ. ಇದು ತೆರಿಗೆದಾರರಿಗೆ ನಿಯಮಗಳನ್ನು ಪಾಲಿಸಲು ಮತ್ತು ಅರ್ಥಮಾಡಿಕೊಳ್ಳಲು ಹೆಚ್ಚು ಪೂರಕವಾಗಲಿದೆ" ಎಂದು ಡಾ. ಸುಧಾಕರ ರಾವ್ ತಿಳಿಸಿದರು. ಈ ಕುರಿತು ಬ್ಯಾಂಕರ್ಸ್ ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಜಾಗೃತಿ ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.












Click it and Unblock the Notifications