ಕೊರೊನಾ: ಧಾರ್ಮಿಕ ಕೇಂದ್ರದಲ್ಲಿ ದೇವರು ಮೆಚ್ಚುವ ಕೆಲಸ ಮಾಡಿದ ಆಡಳಿತ ಮಂಡಳಿ
ವಡೋದರ, ಏಪ್ರಿಲ್ 17: ಕೊರೊನಾ ಎರಡನೇ ಅಲೆಯ ಆರ್ಭಟಕ್ಕೆ ಎಲ್ಲಡೆ ಆಕ್ಸಿಜನ್, ಲಸಿಕೆ, ಹಾಸಿಗೆ ಸಮಸ್ಯೆ ಎದುರಾಗಿರುವ ಸಂದರ್ಭದಲ್ಲಿ ಧಾರ್ಮಿಕ ಕೇಂದ್ರಗಳು ದೇವರು ಮೆಚ್ಚುವ ಕೆಲಸವನ್ನು ಮಾಡುತ್ತಿದೆ.
ನಗರದ ಐತಿಹಾಸಿಕ ಸ್ವಾಮಿ ನಾರಾಯಣ ದೇವಸ್ಥಾನ ಮತ್ತು ದರೂಲ್ ಉಲ್ಲಂ ತಂದಲ್ಜಾ ಮಸೀದಿಯ ಆಡಳಿತ ಮಂಡಳಿ, ತಮ್ಮತಮ್ಮ ಧಾರ್ಮಿಕ ಕೇಂದ್ರದ ಜಾಗದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲು ಅನುಮತಿ ನೀಡಿದೆ.
ನಗರದ ಶಾಸ್ತ್ರಿ ಯಗ್ನಪುರುಷದಾಸ ರಸ್ತೆ, ಅತ್ಲಾಧಾರಲ್ಲಿರುವ ಬಾಪ್ಸ್ ಸ್ವಾಮಿ ನಾರಾಯಣ ದೇವಸ್ಥಾನದ ಆವರಣದ ಮೂರುವರೆ ಎಕರೆ ಪ್ರದೇಶದಲ್ಲಿ ಮುನ್ನೂರು ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ.

"ಇಲ್ಲಿ ಅಡ್ಮಿಟ್ ಆಗಿರುವ ರೋಗಿಗಳಿಗೆ ವೈದ್ಯಕೇತರ ಸೌಲಭ್ಯಗಳನ್ನು ಒದಗಿಸಲಾಗಿದೆ. ಆಕ್ಸಿಜನ್, ವೆಂಟಿಲೇಟರ್ ನಾವೇ ನೀಡುತ್ತಿದ್ದೇವೆ. ಇನ್ನು, ಐಸಿಯು ರೂಮಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಜೊತೆಗೆ, ಫ್ಯಾನ್ ಮತ್ತು ಎಸಿ ವ್ಯವಸ್ಥೆಯನ್ನು ಒದಗಿಸಲಾಗಿದೆ. ಇನ್ನೂ, ಇನ್ನೂರು ಹಾಸಿಗೆ ಹಾಕಲು ಪೂರ್ವಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ"ಎಂದು ದೇವಾಲಯದ ಆಡಳಿತ ಮಂಡಳಿಯ ವತ್ಸಲ ಸ್ವಾಮಿ ಹೇಳಿದ್ದಾರೆ.
ಇದರ ಜೊತೆಗೆ ಮೆಡಿಕಲ್ ಶಾಪ್, ಶೌಚಾಲಯ ಮತ್ತು ಆರೋಗ್ಯ ಸಿಬ್ಬಂದಿಗಳಿಗೆ ಪ್ರತ್ಯೇಕ ರೂಮಿನ ವ್ಯವಸ್ಥೆಯನ್ನು ಸ್ವಾಮಿ ನಾರಾಯಣ ದೇವಸ್ಥಾನದ ಆವರಣದಲ್ಲಿ ಮಾಡಲಾಗಿದೆ.
ಇನ್ನು, ನಗರದ ಅತಿದೊಡ್ಡ ಮಸೀದಿಯಾಗಿರುವ ದರೂಲ್ ಉಲ್ಲಂನಲ್ಲಿ 142 ಬೆಡ್ ಸಾಮರ್ಥ್ಯದ ಕೋವಿಡ್ ಸೆಂಟರ್ ತೆರೆಯಲು ಮಸೀದಿಯ ಆಡಳಿತ ಮಂಡಳಿ ಅನುಮತಿ ನೀಡಿದೆ.
"ಕೊರೊನಾ ಸಮಸ್ಯೆ ತೀವ್ರವಾಗುತ್ತಿದೆ, ಜನರು ಬೆಡ್ ಸಿಗದೇ ಒದ್ದಾಡುತ್ತಿದ್ದಾರೆ. ಹಾಗಾಗಿ, ದರೂಲ್ ಮಸೀದಿಯವರ ಬಳಿ ಮಾತನಾಡಿದೆ. ಸರಕಾರ ಅನುಮತಿ ನೀಡಿದರೆ, ಇಲ್ಲಿ ಮುನ್ನೂರು ಹಾಸಿಗೆಯ ಕೋವಿಡ್ ಸೆಂಟರ್ ತೆರೆಯಲಾಗುವುದು"ಎಂದು ಸಾಮಾಜಿಕ ಕಾರ್ಯಕರ್ತ ಸಗೀರ್ ಅನ್ಸಾರಿ ಹೇಳಿದ್ದಾರೆ.












Click it and Unblock the Notifications