ರಾಜಕೀಯ ಸರಿಸಿ, ಹೊಸ ಪ್ರಯತ್ನಕ್ಕೆ ಇಳಿದಿದ್ದಾರೆ ಚಕ್ರವರ್ತಿ ಸೂಲಿಬೆಲೆ
ಬೆಂಗಳೂರು, ಜೂನ್ 15: ಯುವಾ ಬ್ರಿಗೇಡ್, ನಮೋ ಬ್ರಿಗೇಡ್ ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆ ಅವರು ರಾಜಕೀಯಕ್ಕೆ ಬರಬೇಕೆಂದು ಹಲವು ಒತ್ತಾಯ ಬಂದಿದ್ದರೂ ಸಹ ನಿರಾಕರಿಸುತ್ತಲೇ ಬಂದಿದ್ದರು, ತಮ್ಮ ಕನಸು ಬೇರೆ ಏನೋ ಇದೆ ಎಂದಿದ್ದರು. ಈಗ ತಮ್ಮ ಕನಸನ್ನು ನನಸು ಮಾಡಿಕೊಳ್ಳುವತ್ತ ಮೊದಲ ಹೆಜ್ಜೆ ಇಟ್ಟಿದ್ದಾರೆ.
ರಾಜಕೀಯದ ಅವಕಾಶ ಇದ್ದರೂ ಸಹ ಅದನ್ನು ನಿರಾಕರಿಸಿದ್ದ ಸೂಲಿಬೆಲೆ ಅವರು ಈಗ ಕೃಷಿಕರಾಗುವ ಪ್ರಯತ್ನ ಆರಂಭಿಸಿದ್ದಾರೆ. ಹೌದು, ಚಕ್ರವರ್ತಿ ಸೂಲಿಬೆಲೆ ಅವರು ತಮ್ಮ ಮೊದಲ ಪ್ರೀತಿ ಕೃಷಿಯತ್ತ ವಾಲಿದ್ದಾರೆ.
ಕನಕಪುರದ ಬಳಿಯ ದೊಡ್ಡಮುದವಾಡಿ ಎಂಬಲ್ಲಿ ತಮ್ಮ ಗೆಳೆಯ ಅಭಿ ಎಂಬುವರ ಜಾಗದಲ್ಲಿ ಮಾದರಿ ಕೃಷಿ ಪ್ರಯತ್ನಕ್ಕೆ ಚಕ್ರವರ್ತಿ ಸೂಲಿಬೆಲೆ ಕೈ ಹಾಕಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಫೇಸ್ಬುಕ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಕೃಷಿ ಮಾದರಿಯೊಂದನ್ನು ಸ್ಥಾಪಿಸುವ ಹಂಬಲ
ಕೃಷಿ ತಜ್ಞ ಸುಭಾಷ್ ಪಾಳೇಕರ್ ಅವರ ಮಾದರಿಯನ್ನು ಅನುಸರಿಸಿ ಕೃಷಿ ಮಾಡುವ ಯೋಜನೆಯನ್ನು ಸೂಲಿಬೆಲೆ ಅವರು ಹಾಕಿಕೊಂಡಿದ್ದು, ಕೃಷಿಯಲ್ಲಿ ಮಾದರಿಯೊಂದನ್ನು ಸ್ಥಾಪಿಸುವ ಹಂಬಲದಲ್ಲಿ ಈ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

'ಕೃಷಿಯ ಸವಾಲುಗಳು, ಸಮಸ್ಯೆಗಳ ಅರಿವಿದೆ'
ಕೃಷಿ ಮಾಡುವ ಸಮಸ್ಯೆಗಳು, ಸವಾಲುಗಳ ಬಗ್ಗೆ ಅರಿವಿದೆ ಎನ್ನುವ ಸೂಲಿಬೆಲೆ, ಅವನ್ನೆಲ್ಲಾ ಎದುರಿಸಿಯೇ ಪ್ರಯತ್ನವನ್ನು ಮಾಡುವ ಹುಮ್ಮಸ್ಸಿನಲ್ಲಿದ್ದಾರೆ. ಪೂರ್ಣ ಶ್ರಮದೊಂದಿಗೆ ಕೃಷಿ ಮಾಡುವ ಉಮೇದಿನಲ್ಲಿರುವ ಅವರು, ಯಶಸ್ಸು ದೇವರಿಗೆ ಬಿಟ್ಟದ್ದೆಂದು ವಿನಮ್ರವಾಗಿದ್ದಾರೆ.

ಜೀವಾಮೃತ ತಯಾರು ಮಾಡಿಟ್ಟುಕೊಂಡಿದ್ದಾರೆ
ಸುಭಾಷ್ ಪಾಳೇಕರ್ ಮಾದರಿಯಲ್ಲಿ ಶೂನ್ಯ ಬಂಡವಾಳದ, ಪ್ರಕೃತಿ ಸಹವರ್ತಿಯಾಗಿ ಮಾಡುವ ಕೃಷಿ ಪದ್ಧತಿಯನ್ನು ಚಕ್ರವರ್ತಿ ಸೂಲಿಬೆಲೆ ಅವರು ಆಯ್ಕೆ ಮಾಡಿಕೊಂಡಿದ್ದು, ಈಗಾಗಲೇ ಭೂಮಿಗೆ ಉಣಿಸಲು ಗಂಜಲ, ಸೆಗಣಿ, ಬೆಲ್ಲ, ಮಣ್ಣು ಕಡಲೇಹಿಟ್ಟು ಮಿಶ್ರಿತ ಜೀವಾಮೃತವನ್ನು ತಯಾರಾಗಿಟ್ಟುಕೊಂಡಿದ್ದಾರೆ.

ಅಭಿಮಾನಿಗಳ ಶುಭ ಹಾರೈಕೆ
ಹಾಳೆದಿದ್ದರುವ ಅರ್ಕಾವತಿ ನದಿ ತಟದಲ್ಲಿನ ಭೂಮಿಯನ್ನು ಚಕ್ರವರ್ತಿ ಸೂಲಿಬೆಲೆ ಅವರು ಕೃಷಿಗೆ ಆಯ್ಕೆ ಮಾಡಿಕೊಂಡಿದ್ದು, ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಅವರಿಗೆ ಶುಭ ಹಾರೈಸಿದ್ದಾರೆ.











Click it and Unblock the Notifications