ಸೊಗಸಾಗಿ ಬೆಳದ ಹೆಸರು,ಉದ್ದು ಬೆಳೆಗೆ ಹಳದಿ ರೋಗ, ರೈತರಲ್ಲಿ ಆತಂಕ
ಹುಬ್ಬಳ್ಳಿ, ಜೂನ್ 26: ಮಳೆಗಾಲ ಶುರುವಾಗಿ ನಂತರ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಇದೇ ಕುಷಿಯಲ್ಲಿ ರೈತರು ಬಿತ್ತನೆ ಮಾಡಿ ಬೆಳೆ ಬೆಳಸಲು ತಯಾರಾಗಿದ್ದಾರೆ, ಆದರೆ ಇದೀಗ ಬೆಳೆದ ಬೆಳೆಗೆ ರೋಗ ಬಾಧೆ ಶುರುವಾಗಿದ್ದು ರೈತರು ಕಂಗಾಲಾಗಿದ್ದಾರೆ,
ಧಾರವಾಡ ಜಿಲ್ಲೆಯಲ್ಲಿ ಹವಾಮಾನ ವೈಪರೀತ್ಯದಿಂದ ಹೆಸರು ಹಾಗೂ ಉದ್ದು ಬೆಳೆ ಬೆಳೆಗಳಿಗೆ ಹಳದಿ ನಂಜು ರೋಗ ಹಾಗೂ ಕೀಟಬಾಧೆಗೆ (ಎಲ್ಲೋಲವೆನ್ ಮೊಜಾಯಿಕ್) ಅಪ್ಪಳಿಸಿದೆ, ಈ ಬೆಳವಣಿಗೆ ರೈತ ವಲಯದಲ್ಲಿ ಆತಂಕ ಶುರುವಾಗಿದೆ. ಹೆಸರು ಹಾಗೂ ಉದ್ದು ಕಡಿಮೆ ವೆಚ್ಚದಲ್ಲಿ ಬೆಳೆದು, ಅಲ್ಪಾವಧಿಯಲ್ಲಿಯೇ ಹೆಚ್ಚು ಲಾಭ ತಂದುಕೊಡುವ ಬೆಳೆಯಾಗಿದ್ದರಿಂದ ಕೃಷಿಕರು ಹೆಚ್ಚಿನ ಪ್ರಮಾಣದಲ್ಲಿ ಮುಂಗಾರಿನ ಸಮಯದಲ್ಲಿ ಈ ಬೆಳೆಯನ್ನೇ ಬಿತ್ತನೆ ಮಾಡಿದ್ದಾರೆ.
ಈ ವರ್ಷ ಸರಿಯಾದ ಸಮಯಕ್ಕೆ ಮುಂಗಾರು ಪ್ರವೇಶ ಮಾಡಿದ್ದರಿಂದ ರೈತ ಬಾಂಧವರು ಖುಷಿಯಿಂದಲೇ ಬಿತ್ತನೆ ಮಾಡಿದ್ದರು. ಉತ್ತಮ ಮಳೆಯಿಂದಾಗಿ ಫಸಲು ಸಹ ಸಮೃದ್ಧಿಯಾಗಿ ಬೆಳೆದಿದೆ. ಆದರೆ ಈಗ ಹೂವು ಬಿಡುವ ಹಾಗೂ ಕಾಯಿಕಟ್ಟುವ ಸಮಯದಲ್ಲಿಯೇ ಹಳದಿ ರೋಗ ಕಾಟ ಶುರವಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಮಳೆಯಾಗಿದ್ದರಿಂದ ಮಣ್ಣಿನ ತೇವಾಂಶ ಹೆಚ್ಚಾಗಿ ಹೆಸರು ಮತ್ತು ಉದ್ದು ಬೆಳೆಗಳು ಹಾಳಾಗುತ್ತಿವೆ. ಅವಶ್ಯಕತೆಗಿಂತ ಜಾಸ್ತಿ ಪ್ರಮಾಣದ ಮಳೆ ಆಗಿದ್ದರಿಂದ ಹಾಗೂ ಮಣ್ಣಿನ ತೇವಾಂಶ ಹೆಚ್ಚಾದ ಕಾರಣ ಪ್ರಾರಂಭಿಕ ಹಂತದಲ್ಲಿ ಹಳದಿ ನಂಜು ರೋಗಕ್ಕೆ ಸಸಿಗಳು ತುತ್ತಾಗುತ್ತಿವೆ.

ಬಂಡವಾಳ ವಾಪಸ್ ಬರಲ್ಲ ಎಂಬ ಚಿಂತೆ
ಹೆಸರು ಹಾಗೂ ಉದ್ದು ಬೆಳೆಗೆ ಹಳದಿ ನಂಜು ರೋಗ ಹಾಗೂ ಕೀಟಬಾಧೆ ಒಕ್ಕರಿಸಿ ಬೆಳೆಗೆ ನಂಜು ರೋಗ ತಗುಲಿ ಬೆಳೆ ನೆಲಕಚ್ಚುವ ಪರಿಸ್ಥಿತಿ ಬಂದೊದಗಿದೆ. ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದ ಅನ್ನದಾತನ ಕನಸು ಕಮರುತ್ತಿದೆ. ಹಾಕಿದ ಬಂಡವಾಳ ವಾಪಸ್ ಬರುತ್ತೋ ಇಲ್ಲವೊ ಎಂಬ ಚಿಂತೆಯಾಗಿದೆ ಎಂದು ರೈತರು ಆತಂಕ ಪಡುತ್ತಿದ್ದಾರೆ. ಹುಬ್ಬಳ್ಳಿ, ಕುಂದಗೋಳ ನವಲಗುಂದ ತಾಲ್ಲೂಕು ಸೇರಿದಂತೆ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲೂ ಹಳದಿ ನಂಜು ರೋಗ ಬಾಧೆ ಕಾಣಿಸಿಕೊಂಡಿದೆ. ಹೀಗಾಗಿ ನಷ್ಟ ಅನುಭವಿಸುವ ಭಯ ರೈತರಲ್ಲಿ ಕಾಡುತ್ತಿದೆ.

ಯಾವ ಅಧಿಕಾರಿಗಳು ಭೇಟಿಯಾಗಿಲ್ಲ
ಮಹೇಶ್ ಎಂಬ ರೈತರೊಬ್ಬರು ಮಾತನಾಡಿ, "ನಾನು 10 ಎಕರೆಗೆ ಉದ್ದು ಬಿತ್ತನೆ ಮಾಡಿದ್ದೇನೆ. ಹೆಚ್ಚು ಮಳೆಯಾಗಿದ್ದರಿಂದ ತೇವಾಂಶ ಹೆಚ್ಚಾಗಿ ಈಗಾಗಿದಿಯೇ ಅಥವಾ ರೋಗ ಬಂದು ಹಳದಿ ಬಣ್ಣಕ್ಕೆ ತಿರುಗುತ್ತಿದಿಯೇ ಎನ್ನುವುದು ಎನ್ನುವುದು ಇನ್ನೂ ಗೊತ್ತಾಗಿಲ್ಲ. ಇದನ್ನು ಕೃಷಿ ಅಧಿಕಾರಿಗಳೇ ಹೇಳಬೇಕು ಆದರೆ ಇದುವರೆಗೆ ಯಾವುದೇ ಕೃಷಿ ಅಧಿಕಾರಿಗಳು ನಮ್ಮನ್ನು ಭೇಟಿಯಾಗಿಲ್ಲ," ಎಂದು ರೈತ ತನ್ನ ಆತಂಕವನ್ನು ಹೊರ ಹಾಕಿದ್ದಾರೆ.

ಕೃಷಿ ಇಲಾಖೆ ನೆರವಿಗೆ ಬರಬೇಕು
ಕೈಗೆ ಬಂದಿರುವ ತುತ್ತನ್ನು ಕಳೆದುಕೊಳ್ಳುವ ಆತಂತದಲ್ಲಿರುವ ರೈತರ ಹಳದಿ ನಂಜು ರೋಗಕ್ಕೆ ಯಾವ ಔಷಧ ಸಿಂಪರಣೆ ಮಾಡಬಹುದು ಎಂಬ ಹರಿವಿಲ್ಲದೆ ಕಂಗಾಲಾಗಿದ್ದಾರೆ. ಇತ್ತ ಕೃಷಿ ಅಧಿಕಾರಿಗಳು ಯಾವುದನ್ನು ಗಮನಿಸದೆ ಕಚೇರಿಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಈ ಬಗ್ಗೆ ತಜ್ಞರು ಕೂಡಲೇ ಪರಿಹಾರ ತಿಳಿಸಿಕೊಡಬೇಕು ಎನ್ನುವುದು ರೈತರ ಬೇಡಿಕೆಯಾಗಿದೆ.

ಹಳದಿ ರೋಗ ತಿಳಿಯುವುದೇಗೆ?
ಹಳದಿ ರೋಗ ಕಾಣಿಸಿಕೊಂಡರೆ, ಮೊದಲು ಎಲೆಯ ಮೇಲೆ ಹಳದಿ ಬಣ್ಣದ ಚುಕ್ಕೆ ಆಕಾರದ ಚಿಹ್ನೆಗಳು ಕಂಡುಬರುತ್ತವೆ, ನಂತರದಲ್ಲಿ ಒಂದಕ್ಕೊಂದು ಚುಕ್ಕೆಗಳು ಜೊತೆಯಾಗಿ ಸಂಪೂರ್ಣ ಎಲೆ ಹಳದಿ ಬಣ್ಣಕ್ಕೆ ತಿರುಗುತ್ತವೆ. ತದನಂತರ ಸಂಪೂರ್ಣವಾಗಿ ಕಂದು ಬಣ್ಣಕ್ಕೆ ತಿರುಗಿ ಒಣಗಿ ಹೋಗುತ್ತದೆ.. ಈ ನಂಜಾಣು ಬಿಳಿ ನೊಣದಿಂದ ಪ್ರಸರಣಗೊಳ್ಳುತ್ತದೆ.












Click it and Unblock the Notifications