ಶಿರಗುಪ್ಪದ ರೈತನಿಗೆ ಕುಮಾರಸ್ವಾಮಿ ಮೇಲೆ ಯಾಕೋ ಬೇಜಾರು!
ಬೆಂಗಳೂರು, ಮೇ 24 : "ನಮಗ ಭಾರೀ ಬೇಜಾರಾಗೇತಿ. ನಾವೆಲ್ಲ ಬಳ್ಳಾರಿ ಜಿಲ್ಲೆಯಿಂದ ಬಂದೇವಿ. ಮುಖ್ಯಮಂತ್ರಿ ಕುಮಾರಸ್ವಾಮೇರು ರೈತರ ಹೆಸರಲ್ಲಿ ಪ್ರಮಾಣ ಸ್ವೀಕರಿಸಲಿಲ್ಲ, ರೈತರ ಬಗ್ಗೆ ಪ್ರಸ್ತಾಪನೇ ಮಾಡಲಿಲ್ಲ!"
ಬಳ್ಳಾರಿ ಜಿಲ್ಲೆಯ ಶಿರಗುಪ್ಪ ತಾಲೂಕಿನ ಹಳ್ಳಿಯಿಂದ ಸ್ನೇಹಿತರೊಂದಿಗೆ ಬಂದಿದ್ದ ನಾಗಪ್ಪನ ಮಾತುಗಳಲ್ಲಿ ನಿರಾಶೆ ಎದ್ದು ಕಾಣುತ್ತಿತ್ತು. ರೈತರನ್ನು ಕಾಪಾಡುತ್ತೇನೆ, ಅವರ ಸಾಲ ಮನ್ನಾ ಮಾಡುತ್ತೇನೆ, ನೀರಾವರಿಗೆ ಅನುಕೂಲ ಮಾಡಿಕೊಡುತ್ತೇನೆ ಎನ್ನುವ ಕುಮಾರಸ್ವಾಮಿಯವರು ರೈತರ ಬಗ್ಗೆ ಹೆಚ್ಚು ಪ್ರಸ್ತಾಪಿಸಲಿಲ್ಲ ಎಂಬುದು ಅವರ ಆರೋಪವಾಗಿತ್ತು.
'ಸಾಲ ಮನ್ನ ವಿಷ್ಯದಲ್ಲಿ ಹುಡುಗಾಟವಾಡಿದ್ರೆ ಸರ್ಕಾರ ಉಳಿಯಲ್ಲ'
"ನೋಡಿ ಸ್ವಾಮೀ, ನಾನು ಕಟ್ಟಾ ಕಾಂಗ್ರೆಸ್ ಬೆಂಬಲಿಗ. ಆದರ, ರೈತನ ಮಗನಾಗಿರುವ ಕುಮಾರಸ್ವಾಮಿಯವರು ರೈತರನ್ನು ಕಾಪಾಡುತ್ತಾರೆಂಬ ನಂಬಿಕೆ ಐತಿ. ಆ ಕಾರಣಕ್ಕಾಗಿನ ಅಷ್ಟು ದೂರದಿಂದ ಇಲ್ಲಿಗೆ ಬಂದೇವಿ" ಎಂದು ಹೆಗಲ ಮೇಲಿನ ಟವೆಲ್ ಝಾಡಿಸಿಕೊಂಡು ಹೊರಟೇಬಿಟ್ಟರು.
ಕಾಂಗ್ರೆಸ್ ಬೆಂಬಲಿಗರನ್ನೂ ಮೀರಿ ರಾಮನಗರ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ, ತುಮಕೂರು ಮುಂತಾದ ಜಿಲ್ಲೆಗಳಿಂದ ಬಂದಿದ್ದ ಸಹಸ್ರಾರು ಕುಮಾರಸ್ವಾಮಿ ಅಭಿಮಾನಿಗಳ ಹರ್ಷೋದ್ಘಾರಗಳ ನಡುವೆ ಒಂದಿಷ್ಟು ರೈತರು ಅಸಮಾಧಾನಗೊಂಡಿದ್ದಂತೂ ಸುಳ್ಳಲ್ಲ. ಮಳೆ ಜಿನುಗುತ್ತಿದ್ದರೂ ಅವರ ಉತ್ಸಾಹ ಎಳ್ಳಷ್ಟೂ ಕಡಿಮೆಯಾಗಿರಲಿಲ್ಲ.
'ಸಾಂದರ್ಭಿಕ ಶಿಶು ನಾನು', ಮೈತ್ರಿ ಹಿಂದಿನ ಗುಟ್ಟು ಬಿಟ್ಟುಕೊಟ್ಟ ಎಚ್ಡಿಕೆ
ನಾಗಪ್ಪ ಹೇಳಿದ್ದರಲ್ಲಿ ಎಳ್ಳಷ್ಟೂ ತಪ್ಪಿಲ್ಲ. ಹಗಲಿರುಳು ರೈತರ ಬಗ್ಗೆ ಮಾತನಾಡುವ, ಅವರ ಸಾಲ ಮನ್ನಾ ಬಗ್ಗೆ ಘೋಷಣೆ ಹೇಳುವ ಕುಮಾರಸ್ವಾಮಿಯವರು ಕನಿಷ್ಠಪಕ್ಷ ರೈತರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸುತ್ತಾರೆ ಎಂದು ಅನೇಕರು ಊಹಿಸಿದ್ದರು. ಆದರೆ, ಕುಮಾರಸ್ವಾಮಿಯವರು ದೇವರು ಮತ್ತು ಕನ್ನಡ ಜನರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು. ಇದರಲ್ಲಿ ತಪ್ಪಿಲ್ಲ. ಆದರೆ, ವಿಧಾನಸೌಧಕ್ಕೆ ಬಂದಿದ್ದ ಜನರ ನಿರೀಕ್ಷೆ ಆಮಟ್ಟದ್ದಾಗಿತ್ತು.
ಹಿಂದೆ 2008ರಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ರೈತರ ಹೆಸರಿನಲ್ಲಿಯೇ ಪ್ರಮಾಣ ಸ್ವೀಕರಿಸಿದ್ದರು, ರೈತರಿಗಾಗಿ ಬಜೆಟ್ಟನ್ನೂ ಮಂಡಿಸಿದ್ದರು, ಅವರದೇ ಕಾಲದಲ್ಲಿ ರೈತರ ಮೇಲೆ ಗೋಳಿಬಾರ್ ಕೂಡ ಆಯಿತು... ಹೀಗಾಗಿ, ಅನಗತ್ಯ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿಲ್ಲದ ಕುಮಾರಸ್ವಾಮಿಯವರು ದೇವರ ಮತ್ತು ನಾಡಿನ ಜನರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ್ದಾರೆ.
ಜೆಡಿಎಸ್ ಪ್ರಣಾಳಿಕೆಯಲ್ಲಿ ಕುಮಾರಸ್ವಾಮಿಯವರು, ಸಹಕಾರಿ ಮತ್ತು ರಾಷ್ರ್ಟೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ 53,000 ಕೋಟಿ ರುಪಾಯಿ ಸಾಲ ಮನ್ನಾ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಇದನ್ನು ಮುಖ್ಯಮಂತ್ರಿಯಾಗಿ 24 ಗಂಟೆಗಳಲ್ಲಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಕಾಂಗ್ರೆಸ್ ಜೊತೆ ಮೈತ್ರಿ ಸರಕಾರ ರಚನೆಯಾಗಿರುವುದರಿಂದ ಅವರು ತಕ್ಷಣ ನಿರ್ಧಾರ ತೆಗೆದುಕೊಳ್ಳಲು ಹಿಂದೇಟು ಹಾಕಿದ್ದಾರೆ. ಜೊತೆಗೆ, ಯು-ಟರ್ನ್ ತೆಗೆದುಕೊಳ್ಳುವುದಿಲ್ಲ ಎಂದು ವಾಗ್ದಾನ ನೀಡಿದ್ದಾರೆ.
ಕುಮಾರಸ್ವಾಮಿಯವರು ತಮ್ಮ ಮಾತನ್ನು ಉಳಿಸಿಕೊಳ್ಳುತ್ತಾರೋ ಇಲ್ಲವೋ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಈ ಬಗ್ಗೆ ಪ್ರಮಾಣ ವಚನದ ಸಮಾರಂಭದಲ್ಲಿಯೂ ಕೆಲ ಮಾತುಗಳಿ ಕಿವಿಗೆ ಬಿದ್ದಿವೆ. ಆದರೂ, ಮುಂದೆ ತೆಗೆದುಕೊಳ್ಳಬಹುದಾದ ಆಶಾದಾಯಕ ನಿರ್ಧಾರಗಳ ಬಗ್ಗೆ ಆಶಾಭಾವನೆ ಇಟ್ಟುಕೊಂಡಿದ್ದಾರೆ. ಹನ್ನೊಂದು ವರ್ಷಗಳ ನಂತರ ಮತ್ತೆ ಅಧಿಕಾರಕ್ಕೆ ಮರಳಿರುವ ಕುಮಾರಸ್ವಾಮಿ ಅವರು ಕೊಟ್ಟ ಮಾತು ತಪ್ಪುವುದಿಲ್ಲ ಎಂಬ ನಂಬಿಕೆ ಜನರಲ್ಲಿದೆ.