ಮಂಡ್ಯ ರೈತ ಸಂಘದ ಒಂದೂವರೆ ಲಕ್ಷ ಮತಗಳು ಮೈತ್ರಿಗಾ, ಬಿಜೆಪಿಗಾ?
ಮಂಡ್ಯ, ಅಕ್ಟೋಬರ್ 30: ಮಂಡ್ಯ ಜಿಲ್ಲೆ ರೈತ ಸಂಘ ಇಂದು ಬಹು ಮುಖ್ಯ ಸಭೆ ಆಯೋಜಿಸಿದೆ. ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಬೇಕಾ ಅಥವಾ ಬಿಜೆಪಿಯನ್ನಾ ಎಂಬುದನ್ನು ಇಂದು ತೀರ್ಮಾನ ಮಾಡಲಾಗುತ್ತದೆ.
ಮಂಡ್ಯ ಜಿಲ್ಲೆಯಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಮತಗಳು ರೈತ ಸಂಘದ ಸದಸ್ಯರದ್ದಿದೆ ಹಾಗಾಗಿ ಎರಡೂ ಕಡೆಯ ಅಭ್ಯರ್ಥಿಗಳಿಗೆ ರೈತ ಸಂಘದ ಮತಗಳು ಬಹುಮುಖ್ಯವಾಗಿವೆ.
ರೈತ ಮುಖಂಡ ಪುಟ್ಟಣ್ಣಯ್ಯ ಅವರನ್ನು ಶಾಸಕರನ್ನಾಗಿ ಮಾಡಿದ ಶ್ರೇಯ ರೈತ ಸಂಘಕ್ಕಿದೆ. ರೈತ ಸಂಘದ ಮತಗಳ ಶಕ್ತಿ ಎಲ್ಲ ಪಕ್ಷಕ್ಕೂ ಗೊತ್ತಿದೆ. ಹಾಗಾಗಿ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ ಹಾಗೂ ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಇಬ್ಬರೂ ಸಹ ರೈತ ಸಂಘದ ಮತಗಳಿಗಾಗಿ ಕಸರತ್ತು ನಡೆಸಿದ್ದಾರೆ.

ಪುಟ್ಟಣ್ಣಯ್ಯ ಪತ್ನಿ ಬಳಿ ಬೆಂಬಲ ಕೇಳಿದ ಶಿವರಾಮೇಗೌಡ
ಮಾಜಿ ಶಾಸಕ, ರೈತ ಮುಖಂಡ ದಿವಂಗತ ಪುಟ್ಟಣ್ಣಯ್ಯ ಅವರ ಬೆಂಬಲವನ್ನು ಶೀವರಾಮೇಗೌಡ ಅವರು ಯಾಚಿಸಿದ್ದಾರೆ. ಆದರೆ ಅದಕ್ಕೆ ನಕಾರಾತ್ಮಕ ಉತ್ತರ ನೀಡಿರುವ ಪುಟ್ಟಣ್ಣಯ್ಯ ಪತ್ನಿ ಸುನೀತಾ, ಕುಮಾರಸ್ವಾಮಿ ಅವರು ಬಹಿರಂಗ ಕ್ಷಮೆ ಕೇಳಿದರೆ ಬೆಂಬಲ ನೀಡುತ್ತೇವೆ ಎಂದಿದ್ದಾರೆ. ವಿಧಾನಸಭೆ ಚುನಾವಣೆ ವೇಳೆ ಪುಟ್ಟಣ್ಣಯ್ಯ ಹಾಗೂ ಅವರ ಮಗ ದರ್ಶನ್ ಪುಟ್ಟಣ್ಣಯ್ಯ ಬಗ್ಗೆ ಕುಮಾರಸ್ವಾಮಿ ಅಗೌರವದಿಂದ ಮಾತನಾಡಿದ್ದಾರೆ ಎಂಬುದು ಅವರ ಆರೋಪ.

ಅಭ್ಯರ್ಥಿ ಕಣಕ್ಕಿರಿಸಿರಲಿಲ್ಲ ಕಾಂಗ್ರೆಸ್
ಕಳೆದ ವಿಧಾನಸಭೆ ಚುನಾವಣೆಯಲ್ಲಿ ರೈತ ಸಂಘದ ದರ್ಶನ್ ಪುಟ್ಟಣ್ಣಯ್ಯ ಅವರ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಕಾಂಗ್ರೆಸ್ ಪಕ್ಷವು ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ನೀಡಿತ್ತು. ಹಾಗಾಗಿ ಈ ಬಾರಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ರೈತ ಸಂಘ ಬೆಂಬಲ ನೀಡುತ್ತದೆಯೇ ನೋಡಬೇಕು.

ಜೆಡಿಎಸ್ನೊಂದಿಗೆ ವಿರಸ
ಅದೇ ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ರೈತ ಸಂಘದ ಅಭ್ಯರ್ಥಿ ದರ್ಶನ್ ವಿರುದ್ಧ ಹೋರಾಡಿತ್ತು. ಅದೇ ಸಮಯದಲ್ಲಿ ಪ್ರಚಾರಕ್ಕೆ ಬಂದಿದ್ದ ಕುಮಾರಸ್ವಾಮಿ ಅವರು ದಿವಂಗತ ಪುಟ್ಟಣ್ಣಯ್ಯ ಅವರ ಬಗ್ಗೆ ಟೀಕೆ ಮಾಡಿದ್ದರು. ಅಲ್ಲದೆ ದರ್ಶನ್ ಪುಟ್ಟಣ್ಣಯ್ಯ ಗೆದ್ದ ನಂತರ ಅಮೆರಿಕಕ್ಕೆ ವಾಪಸ್ ಹೋಗುತ್ತಾರೆ ಎಂದು ಹೇಳಿದ್ದರು. ಇದು ರೈತ ಸಂಘದ ಸದಸ್ಯರ ಸಿಟ್ಟಿಗೆ ಕಾರಣವಾಗಿತ್ತು.

ಬಿಜೆಪಿ ಕೂಡ ಬೆಂಬಲ ಕೇಳಿದೆ
ಬಿಜೆಪಿಯ ಡಾ.ಸಿದ್ದರಾಮಯ್ಯ ಅವರು ಸಹ ರೈತ ಸಂಘದ ಬೆಂಬಲ ಕೇಳಿದ್ದಾರೆ. ಬಿಜೆಪಿಯು ಕಳೆದ ಬಾರಿ ದರ್ಶನ್ ಪುಟ್ಟಣ್ಣಯ್ಯ ವಿರುದ್ಧ ಸ್ಪರ್ಧಿಸಿತ್ತು. ಆದರೆ ರೈತ ಸಂಘವು ಬಿಜೆಪಿಯ ಸಿದ್ಧಾಂತಗಳನ್ನು ಕಾಲ ಕಾಲಕ್ಕೆ ವಿರೋಧಿಸುತ್ತಾ ಬಂದಿದೆ. ಹಾಗಾಗಿ ಅದು ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುತ್ತದೆಯೇ ಕಾದು ನೋಡಬೇಕು.

ಇಂದು ನಿರ್ಣಯ
ಕಾಂಗ್ರೆಸ್ ಪಕ್ಷ ಕಳೆದ ಚುನಾವಣೆಯಲ್ಲಿ ರೈತ ಸಂಘಕ್ಕೆ ಬೆಂಬಲ ನೀಡಿದ್ದರೆ, ಜೆಡಿಎಸ್ ಪಕ್ಷವು ರೈತ ಸಂಘದ ವಿರೋಧ ಕಟ್ಟಿಕೊಂಡಿತ್ತು. ಹಾಗಾಗಿ ರೈತ ಸಂಘ ಈ ಬಾರಿ ಯಾರಿಗೆ ಬೆಂಬಲ ನೀಡಬೇಕು ಎಂಬ ಗೊಂದಲದಲ್ಲಿದೆ. ಆದರೆ ಇಂದು ಅದರ ನಿರ್ಣಯ ಹೊರಬೀಳುವ ಸಾಧ್ಯತೆ ಇದೆ.

ಮಂಡ್ಯ ಮತಗಳ ಲೆಕ್ಕಾಚಾರ
ಮಂಡ್ಯದಲ್ಲಿ ಬಿಜೆಪಿ ಮತ್ತು ಮೈತ್ರಿ ಪಕ್ಷಗಳ ನಡುವೆ ನೇರ ಸ್ಪರ್ಧೆ ಇದೆ. ಯಾರೇ ಗೆದ್ದರು ಅಲ್ಪ ಮತಗಳ ಅಂತರದಿಂದಲೇ ಗೆಲ್ಲುತ್ತಾರೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಹಾಗಾಗಿ ರೈತ ಸಂಘದ ಮತಗಳು ಅತ್ಯಂತ ಅವಶ್ಯಕವಾಗಿವೆ. 2014 ರ ಲೋಕಸಭೆ ಚುನಾವಣೆ ಅಂಕಿ-ಅಂಶದ ಪ್ರಕಾರ ಮಂಡ್ಯ ಲೋಕಸಭೆ ವ್ಯಾಪ್ತಿಯಲ್ಲಿ ಒಟ್ಟು 16.69 ಲಕ್ಷ ಮತದಾರರಿದ್ದರು ನಾಲ್ಕುವರೆ ವರ್ಷದಲ್ಲಿ ಈ ಸಂಖ್ಯೆ ಇನ್ನಷ್ಟು ಹೆಚ್ಚಿರುತ್ತದೆ.












Click it and Unblock the Notifications