ಎತ್ತು ಖರೀದಿಸಲು ತೆರಳಿದ ವಿರಾಜಪೇಟೆ ವ್ಯಕ್ತಿ ಹೆಣವಾಗಿ ಪತ್ತೆ
ಮಡಿಕೇರಿ, ಏಪ್ರಿಲ್ 11: ಎತ್ತೊಂದನ್ನು ಖರೀದಿಸಲು ತೆರಳಿದ್ದ ವ್ಯಕ್ತಿಯೊಬ್ಬರು ಕಳೆದ ನಾಲ್ಕು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದು, ಇಂದು ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ .
ವಿರಾಜಪೇಟೆ ಸಮೀಪದ ಬೇಟೋಳಿ ಗುಂಡಿಕೆರೆ ನಿವಾಸಿಯಾಗಿದ್ದ, 65 ವರ್ಷದ ಎಂ.ಎಂ.ಮೂಸ ಎಂಬುವರು ನಾಲ್ಕು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು. ಇವರು ಕಾಣೆಯಾಗಿರುವ ಕುರಿತು ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಾಪತ್ತೆಯಾಗಿದ್ದ ಅಪ್ಪ ಮಗನ ಶವ ಕಟಪಾಡಿ ಸಮುದ್ರ ಕಿನಾರೆಯಲ್ಲಿ ಪತ್ತೆ
ಕೃಷಿಕರಾಗಿದ್ದ ಎಂ.ಎಂ.ಮೂಸ ಅವರು ಇದೇ ತಿಂಗಳ 7ರಂದು ಮಂಗಳವಾರ ಬೆಳಿಗ್ಗೆ ಗುಂಡಿಕೆರೆಯ ತಮ್ಮ ಮನೆಯಿಂದ ಹೊರಟಿದ್ದಾರೆ. ಮಧ್ಯಾಹ್ನ ನಂತರ ಬಿಟ್ಟಂಗಾಲ ಸಮೀಪದ ಕೊಳತ್ತೋಡು ಗ್ರಾಮದ ಮುರುವಂಡ ರಾಜ ಎಂಬುವರಿಗೆ ಸೇರಿದ್ದ ಎತ್ತೊಂದನ್ನು ರೂ.18000 ಹಣಕ್ಕೆ ಖರೀದಿಸಿ ಅದೇ ಎತ್ತಿನೊಂದಿಗೆ ಕಾಲ್ನಡಿಗೆಯಲ್ಲಿ ಮರಳಿದ್ದಾರೆ ಎನ್ನಲಾಗಿದೆ.
ಕೊಳತ್ತೋಡಿನಿಂದ ಹೊರಟ ಇವರು ರಾತ್ರಿಯಾದರೂ ಮನೆಗೆ ತಲುಪಲಿಲ್ಲ. ಕಾಲ್ನಡಿಗೆಯಲ್ಲೇ ಬರುವುದರಿಂದ ತಡರಾತ್ರಿಯಾದರೂ ಮನೆಗೆ ಬರುತ್ತಾರೆಂಬ ಭರವಸೆಯೊಂದಿಗೆ ಕಾದು ಕುಳಿತ ಮನೆಯವರಿಗೆ, ಬುಧವಾರ ಬೆಳಗಿನ ಜಾವದವರೆಗೂ ಮನೆ ಸೇರದಿರುವುದು ಸಂಶಯ ಮೂಡಿಸಿದೆ. ಇದರಿಂದ ಆತಂಕಗೊಂಡ ಮನೆಯವರು, ಸಂಬಂಧಿಕರಿಗೆ ವಿಷಯ ತಿಳಿಸಿದಾಗ ಹುಡುಕಾಟ ಆರಂಭಿಸಿದ್ದಾರೆ. ಎಷ್ಟೇ ಹುಡುಕಾಡಿದರೂ ಸುಳಿವು ದೊರೆಯದಿದ್ದಾಗ ದೂರು ನೀಡಲಾಗಿತ್ತು.
ದೂರು ದಾಖಲಿಸಿಕೊಂಡ ಪೊಲೀಸರು, ಎತ್ತು ಮಾರಾಟ ಮಾಡಿದವರನ್ನು ವಿಚಾರಿಸಿದಾಗ, ಎತ್ತು ಖರೀದಿಸಿ ಹಿಂದಿರುಗಿದ್ದಾಗಿ ತಿಳಿಸಿದ್ದಾರೆ. ಆದರೆ ಇಂದು ಬೆಳಿಗ್ಗೆ ಎತ್ತು ಹಾಗೂ ಮೂಸ ಅವರ ಶವ ಬಿಟ್ಟಂಗಾಲ ಸಮೀಪ ಪೆಗ್ಗರಿ ಕಾಡು ಎಂಬಲ್ಲಿ ಪತ್ತೆಯಾಗಿದೆ. ಇದು ಕೊಲೆ ಎಂಬ ಸಂಶಯ ವ್ಯಕ್ತಪಡಿಸಿದ್ದು, ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.