ರಾಮಪ್ಪನೆಂಬ ಹಳ್ಳಿ ಮನುಷ್ಯನ ಇರುಳ ಕೊಳಲ ನಾದ, ಹಗಲಿನ ಗೇಯ್ಮೆ
ಹಳ್ಳಿಗಳಲ್ಲಿ ಅಜ್ಞಾತ ನಟ, ಗಾಯಕ, ವಾದಕ ಕಲಾವಿದರಿಗೆ ಬರವಿಲ್ಲ. ದುಡಿಮೆಯ ನಡುವೆ ಬಿಡುವು ಸಿಕ್ಕಿದಾಗಲೆಲ್ಲ ಇವರೊಳಗಿನ 'ಹಂಸಧ್ವನಿ'ಗೆ ರೆಕ್ಕೆ ಮೂಡಿಬಿಡುತ್ತದೆ. ರಾತ್ರಿಯಾದರಂತೂ ಅದರ ತಂಪಿಗೆ ಇಂಪು ತುಂಬಿಬಿಡುತ್ತಾರೆ.
ಮನೆಯಂಗಳ, ಜಗುಲಿ, ದೇವಸ್ಥಾನದ ಮುಂಭಾಗ ಇವರ ಪ್ರದರ್ಶನ ಶಾಲೆ. ನಿದ್ರಾದೇವಿ ಬಂದು ಮಲಗೆನ್ನುವವರೆಗೆ ಇವರ ಧ್ವನಿಯದೇ ದರಬಾರು. ನಾಟಕ, ಕೇಳಿಕೆಯ ಮಟ್ಟುಗಳೋ, ವಾದ್ಯಗಳ ಮಧುರ ನಾದವೋ ನಿದ್ದೆ ಹತ್ತದವರಿಗೆ, ನಿದ್ದೆಗೆ ಜಾರುವವರಿಗೆ ಜೋಗುಳ. ಇರುಳಮ್ಮನಿಗೆ ನಾದದ ಔತಣ. ಕಾಸಿಲ್ಲ, ಜಿ.ಎಸ್.ಟಿ. ಇಲ್ಲವೇ ಇಲ್ಲ.. ಇಂತಹವರು ಅನೇಕ ಮಂದಿ. ಇವರಿಂದ ಸಂಗೀತದ ನಿತ್ಯ ರಾಮೋತ್ಸವ.
ಇಂತಹ ಕಲಾವಿದರಲ್ಲಿ ಕಶೆಟ್ಟಿಪಲ್ಲಿಯ ದೊಡ್ಡಪ್ಪಗಾರಿ ರಾಮಪ್ಪ ಒಬ್ಬರು. ಈತ ಕೊಳಲು ವಾದಕ. ಕಳೆದ ಏಪ್ಪಿಲ್ ನಲ್ಲಿ ತೀರಿಕೊಂಡಾಗ ವಯಸ್ಸು ತೊಂಬತ್ತಾರು ವರ್ಷ. ಸಣ್ಣ ರೈತ. ತನ್ನೊಂದಿಗೆ ದುಡಿವ ಜೋಡೆತ್ತುಗಳೆಂದರೆ ಭಕ್ತಿ, ಪ್ರೀತಿ. ಮಧ್ಯಾಹ್ನ ಹೊಲದಲ್ಲಿ ಊಟ ಮಾಡುವ ಮುಂಚೆ ಮುದ್ದೆಯಲ್ಲಿ ಅರ್ಧ ಮುರಿದು ಕಣ್ಣಿಗೊತ್ತಿಕೊಂಡು ತಣಿಗೆ(ತಟ್ಟೆ) ಅಂಚಿಗಿಟ್ಟು ಉಣ್ಣುತ್ತಿದ್ದ.
ಊಟ ಮುಗಿದ ಮೇಲೆ ಆ ಮುರಿದ ಮುದ್ದೆಯನ್ನು ಎರಡು ತುತ್ತು ಮಾಡಿ ಎತ್ತುಗಳ ಬಾಯಿಗೆ ಕೊಡುತ್ತಿದ್ದ. ರಾತ್ರಿ ಮನೆಯಲ್ಲಿ ಊಟ ಮಾಡುವಾಗಲೂ ಅಷ್ಟೆ. ಕಾಗೆ, ನಾಯಿಯೇನಾದರು ಇದ್ದರೆ ಅದಕ್ಕೂ ಒಂದು ತುತ್ತು ಉಳಿಸಿ ಕೊಡುತ್ತಿದ್ದ. ಭೂದೇವಿ ಕೊಟ್ಟದ್ದು ಅವಳೆಲ್ಲ ಮಕ್ಕಳಿಗೂ ಸೇರಬೇಕೆಂಬ ಆದರ್ಶವಂತ ರೈತರಲ್ಲಿ ಆತನೂ ಒಬ್ಬ.
ನಿಜವಾದ ರೈತ ಅನ್ನದಾತ ಮಾತ್ರವಲ್ಲ, ಅವನಲ್ಲಿ ಜೀವಿಕರುಣೆಯೂ ಇರುತ್ತದೆ. ಕುವೆಂಪು 'ನೇಗಿಲಯೋಗಿ' ಅಂದದ್ದು ಸಾರ್ವಕಾಲಿಕ ಪವಿತ್ರತೆಯ ಮಾತು. ಹಾಗಾಗಿಯೇ ಇಂಥ ಪೆಮ್ಮಣ್ಣರು ಸ್ಮರಣಾರ್ಹರು.

ರಾತ್ರಿ ಹತ್ತರ ನಂತರ ಬಿಡುವು
ರಾಮಪ್ಪನವರಿಗೆ ಬಿಡುವು, ವಿಶ್ರಾಂತಿಯ ವೇಳೆಯೆಂದರೆ ರಾತ್ರಿಯೇ. ಊಟ ಮಾಡಿ, ದನಗಳಿಗೆ ಮೇವು ನೋಡುವಾಗ್ಗೆ ರಾತ್ರಿ ಹತ್ತು ಗಂಟೆ ಆಗಿಬಿಡುತ್ತಿತ್ತು. ಆಗ ತಿರುಪತಿ ತಿಮ್ಮಪ್ಪನ ಫೋಟೋದ ಮುಂದಿರಿಸಿದ್ದ ಕೊಳಲನ್ನು ಕೈಗೆತ್ತಿಕೊಂಡು ಎರಡು ಕಣ್ಣಿಗೂ ಒತ್ತಿ, ತಿಮಪ್ಪ್ಮನಿಗೆ ನಮಸ್ಕಾರ ಮಾಡಿ, ಅಂಗಳಕ್ಕೆ ಬಂದು ಕುಳಿತರೆಂದರೆ ಕೊಳಲಿಗೆ ಜೀವ ಬಂದು ಬಿಡುತ್ತಿತ್ತು.

ಮಧ್ಯರಾತ್ರಿವರೆಗೆ ನಾದ ಲಹರಿ
ಸರಿ ಸುಮಾರು ಮಧ್ಯರಾತ್ರಿಯವರೆಗೂ ನುಡಿಕೆ. ಈತನ ಕೊಳಲ ಗಾನವನ್ನು ಚುಕ್ಕಿ ಚಂದರಾಮರು ಆಲಿಸಿ ಸುಖಿಸಿದಂತೆಯೇ ಅಮಾಸ್ಯೆಯ ಕತ್ತಲೂ ಆಲಿಸಿ ಸುಖಿಸುತ್ತಿತ್ತು. ಬಾನಲ್ಲಿ ಇರುಳು ಸಂಚಾರಿಗಳಾದ ಬಾವಲಿ, ಗೂಬೆ, ತಿತ್ತಿರಿ ಹಕ್ಕಿಗಳೂ ಅಷ್ಟೇ. ಆಗಾಗ ಜೀರುಂಡೆಗಳು ಮೌನ ವಹಿಸುತ್ತಿದ್ದುದು ಇವನ ಕೊಳಲ ನಾದದ ಇಂಪನ್ನು ಕೇಳಲೇನೋ ಅನಿಸುತ್ತಿತ್ತು. ಅಂದ ಮೇಲೆ ನಾದಪ್ರಿಯರಾದ ಜನ ಕೇಳದಿರುವರೆ!

ಸ್ವಯಂ ಕಲಿಕೆ
ರಾಮಪ್ಪ ಶಾಸ್ತ್ರೀಯವಾಗಿ ಕೊಳಲು ನುಡಿಸುವುದನ್ನು ಕಲಿತವನಲ್ಲ. ಆದರೂ ಕಲಿತಿದ್ದ. ಇವನದು 'ಏಕಲವ್ಯ ಕಲಿಕೆ'. ಗೊರವಯ್ಯ, ಹಾವಾಡಿಗ, ಸಂತೆ - ಪರಿಷೆಗಳಲ್ಲಿ ಕೊಳಲುಗಳ ಮಾರಾಟಗಾರರು ಊದುವುದನ್ನು ಕೇಳಿ, ಆಸಕ್ತಿ ತಳೆದು ಕಲಿತ ಕಲಿಕೆ ಮತ್ತು ಅದನ್ನು ಅನುಕರಿಸಿದ ಸ್ವಯಂ ಕಲಿಕೆ.

ಎನ್.ಟಿ.ರಾಮರಾವ್ ಹಾಡುಗಳಿಗೆ ಸೊಗಸಾಗಿ ನುಡಿಸುತ್ತಿದ್ದ
ಕರ್ನಾಟಕ-ಆಂಧ್ರದ ಗಡಿಯ ಹಳ್ಳಿಯವನಾದ ರಾಮಪ್ಪ ಕೇಳುತ್ತಿದ್ದುದು ತೆಲುಗು ಹಾಡುಗಳನ್ನು. ಅವನ್ನೇ ನುಡಿಸುತ್ತಿದ್ದರು. ಎನ್.ಟಿ.ರಾಮರಾವ್ ರ ಪೌರಾಣಿಕ ಸಿನಿಮಾಗಳ ಹಾಡುಗಳನ್ನಂತೂ ಬಲು ಸೊಗಸಾಗಿ ನುಡಿಸುತ್ತಿದ್ದರು. 'ಘಂಟಸಾಲ, ಪಿ.ಸುಶೀಲ ಪಾಟಲು ಚಾಲಾ ಬಾಗ ಪಿಳ್ಳಂಗೋವಿಲೋ ಪಲುಕುತಾಯಿ' (ಘಂಟಸಾಲ, ಪಿ.ಸುಶೀಲರ ಹಾಡುಗಳು ಕೊಳಲಲ್ಲಿ ಚೆನ್ನಾಗಿ ನುಡಿಯುತ್ತವೆ) ಎಂಬುದು ಅವರ ಅಭಿಪ್ರಾಯವಾಗಿತ್ತು.

ಕನ್ನಡ ಹಾಡು ನುಡಿಸಲು ಬೇಡಿಕೆ
'ರಾಗಮಯೀ ರಾವೆ, ಅನುರಾಗಮಯೀ ರಾವೆ.' 'ಶ್ರೀರಾಮ ನಾಮಾಲು ಶತಕೋಟಿ, ಒಕ್ಕೊಕ್ಕ ಪೇರು ಬಹು ತೀಪಿ.' 'ರಾಗಾಲ ಸರಾಗಲ.' 'ನರವರ ಕುರುವರ' ಮುಂತಾದ ಹಾಡುಗಳನ್ನು ಸೊಗಸಾಗಿ ನುಡಿಸುತ್ತಿದ್ದರು. ಅವರನ್ನು ಒಮ್ಮೆ ಶಾಲೆಗೆ ಕರೆಸಿಕೊಂಡು, ಸನ್ಮಾನಿಸಿ, ಕನ್ನಡ ಹಾಡುಗಳನ್ನು ನುಡಿಸುವುದನ್ನು ಕಲಿಯಲು ಎಂದು ಕೇಳಿಕೊಂಡೆ.
'ಪಾಟ ವಿನಿಪಿಸ್ತೆ ವಾಂಚುತಾ' (ಹಾಡನ್ನು ಕೇಳಿಸಿದರೆ ನುಡಿಸುತ್ತೇನೆ) ಅಂದರು. ನನಗೆ ಸಂಗೀತವೆಲ್ಲಿ ಬರುತ್ತೆ? ಆದರೆ ಶಾಲೆಯಲ್ಲಿ ಟೇಪ್ ರೆಕಾರ್ಡರ್ ಇತ್ತು. ಅದರಿಂದ 'ಕೃಷ್ಣಾ ನೀ ಬೇಗನೆ ಬಾರೋ, ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ, ಭಾಗ್ಯದ ಲಕ್ಷ್ಮೀ ಬಾರಮ್ಮ' ಇವನ್ನು ಕೇಳಿಸಿದೆ. ಒಂದೊಂದನ್ನೂ ನಾಕಾರು ಬಾರಿ ಆಲಿಸುತ್ತಿದ್ದರು. ರಾತ್ರಿಹೊತ್ತು ನುಡಿಸಿ ನುಡಿಸಿ ಕಲಿತು ಮರುದಿನ ವಿಧೇಯ ವಿದ್ಯಾರ್ಥಿಯಂತೆ ಬಂದು ಶಾಲಾ ಮಕ್ಕಳೂ ಕೇಳುವಂತೆ ನುಡಿಸುತ್ತಿದ್ದರು.

ನಾಕಾರು ಸ್ಪರ್ಧೆಗಳಲ್ಲಿ ಬಹುಮಾನ
ಅವರಿಂದ ಪ್ರೇರಿತರಾದ ಒಂದಿಬ್ಬರು ವಿದ್ಯಾರ್ಥಿಗಳು ಅವರಿಂದಲೇ ಹೇಳಿಸಿಕೊಂಡು, ನಾಕಾರು ಸ್ಪರ್ಧೆಗಳಲ್ಲಿ ಬಹುಮಾನ ಪಡೆದು ಶಾಲೆಗೆ ಹೆಸರು ತಂದದ್ದೂ ಆಯಿತು. ಗುರು ಕಾಣಿಕೆಯಾಗಿ ಆತನಿಗೆ ನೀಡಿದ್ದು ಒಂದು ಹೂವಿನ ಹಾರ ಮತ್ತು ನಾಲ್ಕು ಬಾಳೆಹಣ್ಣು. ಅದನ್ನೇ ದೊಡ್ಡ ನಿಧಿಯೆಂಬಂತೆ ಕಣ್ಣಿಗೊತ್ತಿಕೊಂಡು ಸ್ವೀಕರಿಸಿದ್ದ ಆ ಮಹಾನುಭಾವ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications