ರಸ್ತೆಯಲ್ಲಿ ತೊಗರಿ ಒಣಹಾಕಿದ್ದ ರೈತರಿಗೆ ಬಿಸಿ ಮುಟ್ಟಿಸಲು ಪಿಎಸ್ಐ ಮಾಡಿದ್ದೇನು?
Recommended Video
ಬಳ್ಳಾರಿ, ಜನವರಿ 14: ಹಳ್ಳಿ ಕಡೆಗಳಲ್ಲೀಗ ಒಕ್ಕಣೆ ಸಮಯ. ರೈತರು ತಾವು ಬೆಳೆದ ತೊಗರಿ, ಅವರೆ, ಗೋಧಿ ಸೇರಿದಂತೆ ಹಲವು ಬೆಳೆಗಳನ್ನು ರಸ್ತೆಗಳಲ್ಲಿ ಹಾಕಿ ಒಣಗಿಸುವ ದೃಶ್ಯವೂ ಗ್ರಾಮಗಳಲ್ಲಿ ಕಂಡುಬರುತ್ತದೆ. ಆದರೆ ಹೀಗೆ ರಸ್ತೆ ಮೇಲೆ ಒಣಗಿ ಹಾಕುವುದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು, ಕೆಲವೊಮ್ಮೆ ಅಪಘಾತಕ್ಕೂ ಎಡೆ ಮಾಡಿಕೊಡುತ್ತಿದೆ. ಈ ಕುರಿತು ಎಷ್ಟೇ ತಿಳಿ ಹೇಳಿದರೂ ಯಾರೂ ತಲೆಗೆ ಹಾಕಿಕೊಳ್ಳುವುದಿಲ್ಲ.
ಹೀಗೆ ಸಾಕಷ್ಟು ಬಾರಿ ಹೇಳಿದ್ದರೂ ಎಚ್ಚೆತ್ತುಕೊಳ್ಳದ ರೈತರಿಗೆ ಪಿಎಸ್ ಐ ಒಬ್ಬರು ಬಿಸಿ ಮುಟ್ಟಿಸಿದ್ದಾರೆ.

ಸಾಕಷ್ಟು ಬಾರಿ ಬುದ್ಧಿ ಹೇಳಿದ್ದ ಪಿಎಸ್ ಐ
ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ಹಡಗಲಿ ರಸ್ತೆಯಲ್ಲಿ ರೈತರು ಲೋಡ್ ಗಟ್ಟಲೆ ತೊಗರಿ ಬೆಳೆಯನ್ನು ಕಟಾವು ಮಾಡಿ ಹಾಕಿಕೊಳ್ಳುತ್ತಾರೆ. ರಸ್ತೆಯಲ್ಲಿ ಹೋಗುವವರಿಗೆ ಇದರಿಂದ ಸಾಕಷ್ಟು ತೊಂದರೆಯಾಗುತ್ತಿತ್ತು. ರೈತರಿಗೆ ಹರಪ್ಪನಹಳ್ಳಿ ಪಿಎಸ್ಐ ಶ್ರೀಧರ್ ಸಾಕಷ್ಟು ಬಾರಿ ಈ ಕುರಿತು ಬುದ್ಧಿ ಹೇಳಿದರು. ಆದರೆ ಆ ಮಾತನ್ನೂ ಲೆಕ್ಕಿಸದೆ ರಸ್ತೆಯಲ್ಲಿ ಮತ್ತೆ ತೊಗರಿಯನ್ನು ಒಣಗಿ ಹಾಕಿದ್ದರು. ಇದರಿಂದ ರೋಸಿಹೋದ ಪಿಎಸ್ಐ ರಸ್ತೆಯಲ್ಲಿ ಹಾಕಿದ್ದ ತೊಗರಿಗೆ ಬೆಂಕಿ ಇಡುವಂತೆ ಹೆದರಿಸಲು ಮುಂದಾಗಿದ್ದಾರೆ.

ಮತ್ತೆ ಹೀಗೆ ಮಾಡಲ್ಲ ಎಂದು ಮನವಿ ಮಾಡಿದ ರೈತರು
ಪಿಎಸ್ ಐ ಬೆಂಕಿ ಹಚ್ಚುವಂತೆ ಮಾಡಿ ಹೆದರಿಸುತ್ತಿದ್ದಂತೆ, ಅದನ್ನು ನೋಡಿದ ರೈತರು ಅಂಗಲಾಚಿ ಬೇಡಿಕೊಂಡಿದ್ದಾರೆ. ಮತ್ತೆ ಎಂದೂ ಹೀಗೆ ಬೆಳೆಯನ್ನು ರಸ್ತೆಯಲ್ಲಿ ಹರಡುವುದಿಲ್ಲ ಎಂದು ಕೇಳಿಕೊಂಡಿದ್ದಾರೆ. ಪಿಎಸ್ಐ ಬೆಂಕಿ ಹಚ್ಚಲು ಹೋದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಗುಂಡ್ಲುಪೇಟೆಯಲ್ಲೂ ಘಟನೆ; ಒಕ್ಕಣೆಯಿಂದ ಕಾರಿಗೆ ಬೆಂಕಿ
ಹೀಗೆ ರಸ್ತೆ ಮೇಲೆ ಒಕ್ಕಣೆ ಮಾಡುವುದರಿಂದ ತೊಂದರೆಯಾಗುತ್ತಿರುವುದು ಹೊಸ ಸಂಗತಿಯೇನಲ್ಲ. ಅಪಘಾತಕ್ಕೆ ಎಡೆಮಾಡಿಕೊಡುವ ಈ ಒಕ್ಕಣೆ ಕೆಲಸದಿಂದ ಈಚೆಗೆ ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಕಾರೊಂದು ಹೊತ್ತಿ ಉರಿದಿತ್ತು. ಒಕ್ಕಣೆಯಿಂದಾಗಿ ಕಾರಿಗೆ ಬೆಂಕಿ ಹಿಡಿದು ಹೊತ್ತಿಕೊಳ್ಳಲು ಆರಂಭಿಸಿತ್ತು. ಅಲ್ಲೇ ಸಮೀಪ ಕೆರೆಯಿದ್ದ ಕಾರಣ ಬೆಂಕಿ ನಂದಿಸಿ ಹಾನಿ ತಪ್ಪಿಸಿದ ಘಟನೆ ಇದೇ ಜನವರಿ ಐದರಂದು ನಡೆದಿತ್ತು.
|
ಮೈಸೂರಿನಲ್ಲೂ ಒಕ್ಕಣೆಯದ್ದೇ ಸಮಸ್ಯೆ
ಮೈಸೂರಿನಲ್ಲೂ ಎಷ್ಟು ಹೇಳಿದರೂ ರೈತರು ಒಕ್ಕಣೆ ನಿಲ್ಲಿಸುತ್ತಿಲ್ಲ. ಈ ನಡುವೆ ಇಲ್ಲಿನ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ನಾಗರಾಜು ಅವರು ರಸ್ತೆಯಲ್ಲಿ ಯಾವುದೇ ರೀತಿಯ ಒಕ್ಕಣೆ ಮಾಡಬಾರದು ಎಂದು ಎಚ್ಚರಿಕೆಯನ್ನು ನೀಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿತ್ತು.












Click it and Unblock the Notifications