ರೈತರ ಪ್ರತಿಭಟನೆ ಹಿಂದೆ ಪಾಕಿಸ್ತಾನ, ಚೀನಾ ಕೈವಾಡ: ಕೇಂದ್ರ ಸಚಿವರ ಆರೋಪ
ನವದೆಹಲಿ, ಡಿಸೆಂಬರ್ 9: ರಾಜಧಾನಿ ದೆಹಲಿ ಮತ್ತು ಇತರೆ ರಾಜ್ಯಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಹಿಂದೆ ಪಾಕಿಸ್ತಾನ ಮತ್ತು ಚೀನಾಗಳ ಕುಮ್ಮಕ್ಕು ಇದೆ ಎಂದು ಬಿಜೆಪಿ ಸಂಸದ ಹಾಗೂ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ಹಂಚಿಕೆ ರಾಜ್ಯ ಖಾತೆ ಸಚಿವ ರಾವ್ ಸಾಹೇಬ್ ದಾನ್ವೆ ಹೇಳಿದ್ದಾರೆ.
'ಇದು ರೈತರ ಪ್ರತಿಭಟನೆಯಲ್ಲ. ಈ ಪ್ರತಿಭಟನೆಯ ಹಿಂದೆ ಚೀನಾ ಮತ್ತು ಪಾಕಿಸ್ತಾನಗಳ ಪಾತ್ರವಿದೆ' ಎಂದು ಮರಾಠಿ ದಿನಪತ್ರಿಕೆಗೆ ಅವರು ಹೇಳಿಕೆ ನೀಡಿದ್ದಾರೆ.
'ಈ ವಿದೇಶಿಶಕ್ತಿಗಳು ಇದಕ್ಕೂ ಮುಂಚೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಂಗೀಕಾರವಾದಾಗ ಮುಸ್ಲಿಂ ಸಮುದಾಯವನ್ನು ಕೆರಳಿಸಿದ್ದವು. ಸಿಎಎ ಮತ್ತು ಎನ್ಆರ್ಸಿ ಜಾರಿಯಾದರೆ ದೇಶವನ್ನು ತೊರೆದು ಹೋಗಬೇಕಾಗುತ್ತದೆ ಎಂದು ಮುಸ್ಲಿಮರ ಮನಸ್ಸಿನಲ್ಲಿ ಬಿತ್ತಿದ್ದರು. ಆದರೆ ಒಬ್ಬನೇ ಒಬ್ಬ ಮುಸಲ್ಮಾನನಿಗೆ ಹೊರ ಹೋಗುವಂತೆ ಹೇಳಲಾಗಿದೆಯೇ?' ಎಂದು ಅವರು ಪ್ರಶ್ನಿಸಿದ್ದಾರೆ.

'ಈಗ ಆ ವಿದೇಶಿ ಶಕ್ತಿಗಳು ಸರ್ಕಾರವು ನಿಮ್ಮನ್ನು ನಷ್ಟದಲ್ಲಿ ನೂಕಲಿವೆ ಎಂದು ರೈತರಿಗೆ ಹೇಳುತ್ತಿವೆ. ಇದು ವಿದೇಶಿ ಸಂಚು. ನಮ್ಮ ದೇಶದ ರೈತರು ಇದರ ಬಗ್ಗೆ ಯೋಚಿಸಬಾರದು' ಎಂದು ದಾನ್ವೆ ಸಲಹೆ ನೀಡಿದ್ದಾರೆ.
ಅಮಿತ್ ಶಾ ಸಭೆ:
ಗೃಹ ಸಚಿವ ಅಮಿತ್ ಶಾ ಮತ್ತು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ನಡೆಸಿದ ಸಭೆ ಸುಮಾರು ಎರಡು ಗಂಟೆ ಮುಂದುವರಿಯಿತು. ಕೃಷಿ ಕಾಯ್ದೆಗಳ ಕುರಿತಾದ ಸರ್ಕಾರದ ಪ್ರಸ್ತಾವವನ್ನು ರೈತರು ತಿರಸ್ಕರಿಸಿದ ಕೂಡಲೇ ಈ ಮಾತುಕತೆ ನಡೆದಿದೆ.












Click it and Unblock the Notifications