ಮಾವು ಬೆಳೆಗೆ ನೀಡಬೇಕಾದ ಪೋಷಕಾಂಶಗಳ ವಿವರಗಳು
ಬೆಂಗಳೂರು, ಆಗಸ್ಟ್ 12 : ಮಾವು ಬೆಳೆಯುವ ರೈತರು ಕಾಲ ಕಾಲಕ್ಕೆ ಗಿಡಗಳಿಗೆ ನೀಡಬೇಕಾದ ಪೋಷಕಾಂಶಗಳ ಬಗ್ಗೆಯೂ ಮಾಹಿತಿ ತಿಳಿದಿರಬೇಕು. ಕೃಷಿ ಇಲಾಖೆ ಪ್ರಸ್ತುತ ನೀಡಬೇಕಿರುವ ಪೋಷಕಾಂಶಗಳ ಕುರಿತು ರೈತರಿಗೆ ಸಲಹೆಯನ್ನು ನೀಡಿದೆ.
ಹಸಿರು ಎಲೆ ಗೊಬ್ಬರ ಬೆಳೆಗಳಾದ ಸೆಣಬು, ಹುರುಳಿ ಇತ್ಯಾದಿಗಳನ್ನು ಪ್ರಸಕ್ತ ಹಂಗಾಮಿನಲ್ಲಿ ಬಿತ್ತನೆ ಮಾಡಿ ಅವು ಹೂ ಬಿಡುವ ಹಂತ ತಲುಪುವ ಮೊದಲು ಅವುಗಳನ್ನು ಮಣ್ಣಿನಲ್ಲಿ ಉಳುಮೆ ಮಾಡಿ ಸೇರಿಸಬೇಕು.
ಇದರಿಂದ ಮುಖ್ಯವಾಗಿ ಸಾರಜನಕ ಮತ್ತು ಸೇಂದ್ರಿಯ ಪದಾರ್ಥಗಳನ್ನು ಒದಗಿಸಲು ಸಹಾಯಕವಾಗುತ್ತದೆ ಹಾಗೂ ಕಳೆ ನಿಯಂತ್ರಣಕ್ಕೆ ಬರುತ್ತದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಮಾವು ಬೆಳೆಗೆ ನೀಡುವ ಸೇಂದ್ರಿಯ ಗೊಬ್ಬರಗಳಲ್ಲಿ ಬೇವಿನ ಹಿಂಡಿ, ತಿಪ್ಪೆಗೊಬ್ಬರ, ಕಾಂಪೋಸ್ಟ್ ಪ್ರಮುಖವಾದವು. ಬೇವಿನ ಹಿಂಡಿಯನ್ನು ಪ್ರತಿ ವಯಸ್ಕ ಮರಕ್ಕೆ ಒಂದು ಕೆಜಿ ಪ್ರಮಾಣದಲ್ಲಿ ನೀಡುವುದರಿಂದ ಪೋಷಕಾಂಶಗಳ ಜೊತೆಗೆ ಹಣ್ಣಿನ ನೊಣಗಳ ಕೋಶ, ಗೆದ್ದಲು, ಗೊಣ್ಣೆಹುಳು ಮುಂತಾದವುಗಳು ಸಹ ನಿವಾರಣೆ ಆಗುತ್ತದೆ. ಕಾಂಪೋಸ್ಟ್ ಅನ್ನು ಲಭ್ಯತೆಗೆ ಅನುಗುಣವಾಗಿ 20-50 ಕೆಜಿ ಪ್ರಮಾಣದಲ್ಲಿ ಪ್ರಸಕ್ತ ಹಂಗಾಮಿನಲ್ಲಿ ನೀಡಬೇಕು.

ರಾಸಾಯನಿಕ ಗೊಬ್ಬರಗಳು : ಅಧಿಕ ಫಸಲು ನೀಡಿ ಬಸವಳಿದ ಮರಗಳಿಗೆ ಸಾರಜನಕ, ರಂಜಕ, ಪೊಟ್ಯಾಷ್ ಮತ್ತು ಲಘು ಪೋಷಕಾಂಶಗಳನ್ನು ನೀಡುವುದರ ಅವಶ್ಯಕತೆ ಇದೆ. ಇದಕ್ಕಾಗಿ ಪ್ರತಿ ವಯಸ್ಕ ಗಿಡಕ್ಕೆ 15:15:15 ಅಥವಾ 19:19:19 ಸಂಯುಕ್ತ ಗೊಬ್ಬರಗಳನ್ನು 2 ರಿಂದ 3 ಕೆಜಿ ಪ್ರಮಾಣದಲ್ಲಿ ಜುಲೈ-ಆಗಸ್ಟ್ ತಿಂಗಳಿನಲ್ಲಿ ನೀಡಬೇಕು.
ಬಯಲುಸೀಮೆ ಅಥವಾ ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಪೊಟ್ಯಾಷಿಯಂ ನೈಟ್ರೇಟ್ (30-0-45) 20 ಗ್ರಾಂ ಅನ್ನು 30 ಗ್ರಾಂ ಯೂರಿಯಾವನ್ನು (ಎನ್ 46%)ಒಂದು ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಎಲೆಗಳಿಗೆ ಸಿಂಪಡಿಸಬೇಕು.
ಇದೇ ಮಿಶ್ರಣವನ್ನು ಹೂ ಬಿಡುವ ಮುನ್ನ ಅಂದರೆ ನವೆಂಬರ್-ಡಿಸೆಂಬರ್ ತಿಂಗಳಿನಲ್ಲಿ ಸಹ ಮತ್ತೊಮ್ಮೆ ನೀಡುವುದರಿಂದ ಹೂಗಳು ಚೆನ್ನಾಗಿ ಕಾಣಿಸಿಕೊಳ್ಳುತ್ತವೆ ಹಾಗೂ ಕಾಯಿ ಕಚ್ಚುವ ಪ್ರಮಾಣ ಅಧಿಕಗೊಳ್ಳುತ್ತದೆ.
ರೈತರು ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ, ಹಾರ್ಟಿಕ್ಲಿನಿಕ್, ಕೋಲಾರ ಅಥವಾ ದೂರವಾಣಿ ಸಂಖ್ಯೆ 7829512236 ಸಂಪರ್ಕಿಸಬಹುದು.












Click it and Unblock the Notifications