ಶುಂಠಿ ಬೆಳೆಯುವ ರೈತರಿಗೆ ವೈಜ್ಞಾನಿಕ ಸಲಹೆಗಳು
ಬೆಂಗಳೂರು, ಆಗಸ್ಟ್ 19 : " ರೈತರು ವೈಜ್ಞಾನಿಕ ಶುಂಠಿ ಬೇಸಾಯ ಕ್ರಮವನ್ನು ಸುಧಾರಿತ ಪದ್ಧತಿಯಿಂದ ಕೈಗೊಂಡರೆ ರೋಗರಹಿತ ಸಸಿಗಳನ್ನು ಪಡೆಯಬಹುದು" ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಜ್ಯೋತಿ ಕಟ್ಟೇಗೌಡರ ಹೇಳಿದರು.
ಕೋಲಾರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ 'ವೈಜ್ಞಾನಿಕ ಶುಂಠಿ ಬೇಸಾಯ ಕ್ರಮಗಳು' ಎಂಬ ಅಂತರ್ಜಾಲ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶುಂಠಿ ಬೆಳೆ ಬೆಳೆಯುವ ರೈತರಿಗೆ ಹಲವು ಸಲಹೆಗಳನ್ನು ನೀಡಿದರು.
ರೈತ ಬೆಳೆ ಸಮೀಕ್ಷೆ ಅಪ್ಲಿಕೇಶನ್ಗೆ ಮಾಹಿತಿ ತುಂಬುವುದು ಹೇಗೆ?
"ಸುಧಾರಿತ ತಳಿಗಳನ್ನು ಉಪಯೋಗಿಸುವುದರಿಂದ ಹೆಚ್ಚಿನ ಇಳುವರಿ ಮತ್ತು ಬಹಳ ದಿನಗಳವರೆಗೆ ಗಡ್ಡೆಗಳನ್ನು ಶೇಖರಿಸಲು ಸಹಾಯವಾಗುತ್ತದೆ. ಸುಧಾರಿತ ತಳಿಗಳು, ಬಿತ್ತನೆ ಗಡ್ಡೆಗಳ ಆಯ್ಕೆ, ಸುಧಾರಿತ ನಾಟಿ ಪದ್ಧತಿ, ಹೊದಿಕೆ ಮತ್ತು 40-60 ದಿನಗಳ ನಂತರ ಮಣ್ಣು ಏರಿಸುವುದರ ಬಗ್ಗೆ" ರೈತರಿಗೆ ಮಾಹಿತಿ ನೀಡಿದರು.
ರೈತರ ಸಹಾಯಕ್ಕಾಗಿ 'ರೈತ ಬೆಳೆ ಸಮೀಕ್ಷೆ ಅಪ್ಲಿಕೇಶನ್' ಬಿಡುಗಡೆ
ಶುಂಠಿ ಬೆಳೆಯ ಮುಖ್ಯ ರೋಗಗಳಾದ ಗಡ್ಡೆಕೊಳೆ, ಎಲೆ ಚುಕ್ಕೆ, ದುಂಡಾಣುವಿನಲ್ಲಿ ಬರುವಂತಹ ಸೊರಗು ರೋಗ, ಜಂತುಹುಳುವಿನಿಂದ ಆಗುವ ಹಾನಿ, ಕಾಂಡ ಕೊರೆಯುವ ಹುಳುವಿನ ಬಾಧೆ ಬಗ್ಗೆ ರೈತರಿಗೆ ವಿವರಣೆಗಳನ್ನು ನೀಡಿದರು.
ಬಾಳೆ ಬೆಳೆದು ಬಂಪರ್ ಲಾಭ ಪಡೆದ ಕೊಪ್ಪಳದ ರೈತ
ಸುಧಾರಿತ ನಾಟಿ ಪದ್ಧತಿ ಅನುಸರಿಸಿ
ಸಾಂಪ್ರದಾಯಿಕವಾಗಿ ಗಡ್ಡೆಗಳನ್ನು ಬಿತ್ತಿದಾಗ 1500-2000 ಕೆ.ಜಿ. ಪ್ರತಿ ಹೆಕ್ಟೇರ್ ಬಿತ್ತನೆ ಗಡ್ಡೆಗಳು ಬೇಕಾಗುತ್ತವೆ. ಅದೇ ಸುಧಾರಿತ ನಾಟಿ ಪದ್ಧತಿಯಲ್ಲಿ 400-500 ಕೆ.ಜಿ. ಪ್ರತಿ ಹೆಕ್ಟೇರ್ ಬಿತ್ತನೆ ಗಡ್ಡೆಗಳು ಸಾಕಾಗುತ್ತವೆ. ಅಲ್ಲದೇ, ಹೊದಿಕೆಯನ್ನು ಸಾವಯವ ಹಸಿರು ಎಲೆಗಳಿಂದ ಮಾಡುವದರಿಂದ ಬೆಳೆ ಅವಧಿಯಲ್ಲಿ ಮಣ್ಣಿನ ಉಷ್ಣಾಂಶ ಕಾಪಾಡಲು ಹಾಗೂ ಕಳೆಗಳನ್ನು ತಡೆಯಲು ಸಹಾಯವಾಗುತ್ತದೆ.
ಪೋಷಕಾಂಶಗಳ ಕೊರತೆ
ಮಣ್ಣು ವಿಜ್ಞಾನಿ ಡಾ. ಅನಿಲ್ಕುಮಾರ್ ಮಾತನಾಡಿ, "ಕೊಟ್ಟಿಗೆ ಗೊಬ್ಬರ 25 ಟನ್ ಮತ್ತು 217 ಕಿ. ಗ್ರಾಂ ಯೂರಿಯಾ, 312 ಕೆ. ಜಿ. ಎಸ್. ಎಸ್. ಪಿ ಮತ್ತು 83 ಕೆ. ಜಿ. ಎಮ್. ಒ. ಪಿ ಜೊತೆಗೆ ಹಸಿರೆಲೆ ಗೊಬ್ಬರವನ್ನು ಹಾಕಿದಾಗ ಶುಂಠಿ ಬೆಳೆಗೆ ಪೋಷಕಾಂಶಗಳ ಕೊರತೆ ನೀಗಿಸಬಹುದು. ಲಘು ಪೋಷಕಾಂಶಗಳಾದ ಕಬ್ಬಿಣ, ತಾಮ್ರ ಮತ್ತು ಇತರೆ ಪೋಷಕಾಂಶಗಳನ್ನು ಜಿಂಜರ್ ರಿಜ್ (ಮಣ್ಣಿನ ರಸಸಾರ 7ಕ್ಕಿಂತ ಹೆಚ್ಚು ಇದ್ದಲ್ಲಿ) ಮತ್ತು ಜಿಂಜರ್ ಸ್ಪೇಷಲ್ (ಮಣ್ಣಿನ ರಸಸಾರ 7ಕ್ಕಿಂತ ಕಡಿಮೆ ಇದ್ದಲ್ಲಿ) ಬಳಸಬೇಕು" ಎಂದರು.
ಬೆಳೆಯ ಪ್ರಮುಖ ರೋಗಗಳು
ಶುಂಠಿಗೆ ಗಡ್ಡೆಕೊಳೆ ರೋಗ, ಎಲೆ ಚುಕ್ಕೆ ರೋಗ, ದುಂಡಾಣುವಿನಲ್ಲಿ ಬರುವಂತಹ ಸೊರಗು ರೋಗ, ಜಂತುಹುಳುವಿನಿಂದ ಆಗುವ ಹಾನಿ, ಕಾಂಡ ಕೊರೆಯುವ ಹುಳುವಿನ ಬಾಧೆ ಹೆಚ್ಚು. ಇವುಗಳ ಕಾರಣ ಅವುಗಳ ಹರಡುವಿಕೆ ಮತ್ತು ಅವುಗಳ ಬೆಳವಣಿಗೆಗೆ ಬೇಕಾಗುವಂತಹ ಪೂರಕ ವಾತಾವರಣದ ಬಗ್ಗೆ ಹಾಗೂ ಜೈವಿಕ ಪೀಡೆನಾಶಕಗಳಾದ ಟ್ರೈಕೋಡರ್ಮಾ ಮತ್ತು ಸುಡೊಮೊನಾಸ್, ಉಪಚರಿಸಿದ ಕೊಟ್ಟಿಗೆ ಗೊಬ್ಬರ ಬಳಸುವುದು ಮತ್ತು ಜೈವಿಕ ಪೀಡೆನಾಶಕಗಳ ಕಾರ್ಯವೈಖರಿಯ ಬಗ್ಗೆ ಮಾಹಿತಿ ತಿಳಿಸಲಾಯಿತು.
ಬೇವಿನ ಹಿಂಡಿಯ ಬಳಕೆ
ಬೇವಿನ ಹಿಂಡಿಯನ್ನು ಮಣ್ಣಿಗೆ ಸೇರಿಸುವುದರಿಂದ ಕೂಡ ಜಂತುಹುಳುಗಳ ಬಾಧೆ ಕಡಿಮೆ ಮಾಡಬಹುದು. ಶುಂಠಿ ಬಿತ್ತನೆಯ ಪೂರ್ವದಲ್ಲಿ ಏರು ಸಸಿಮಡಿ ತಯಾರಿಕೆ, ಬಿತ್ತನೆಯ 40-45 ದಿನಗಳ ಮುಂಚೆ ಮಡಿಗಳಿಗೆ ಪ್ಲಾಸ್ಟಿಕ್ ಹೊದಿಕೆ ಹೊದಿಸಿ ಸೌರ್ಯಿಕರಣ ಮಾಡುವುದರಿಂದ ಭೂಮಿಯಲ್ಲಿರುವ ರೋಗಾಣುಗಳನ್ನು ಹತೋಟಿ ಮಾಡಬಹುದು. ಆರೋಗ್ಯವಂತ ತೋಟದಿಂದ ಬಿತ್ತನೆ ಗಡ್ಡೆಗಳನ್ನು ಆಯ್ಕೆ ಮಾಡಿಕೊಂಡು ಬೀಜೋಪಚಾರ ಮಾಡಬೇಕು ಎಂದು ಮಾಹಿತಿ ನೀಡಲಾಯಿತು.