ರಾಯಚೂರು: ಕಟಾವಿಗೂ ಮುನ್ನವೇ ಭತ್ತಕ್ಕೆ ಬಂಗಾರದ ಬೆಲೆ, ರೈತರು ಫುಲ್ ಖುಷ್
ರಾಯಚೂರು ನವೆಂಬರ್ 18 : ಮಳೆಯ ಅಭಾವದ ನಡುವೆಯೂ ರೈತರು ಪ್ರಯಾಸಪಟ್ಟು ಬೆಳೆದ ಭತ್ತಕ್ಕೆ ಕಟಾವಿಗೆ ಮುನ್ನವೇ ಉತ್ತಮ ಬೇಡಿಕೆ ಬಂದಿದೆ. ವಿವಿಧ ತಳಿಯ 75 ಕೆ.ಜಿ. ಭತ್ತದ ದರ ₹1,900ರಿಂದ ₹ 2,100ರವರೆಗೂ ತಲುಪಿದೆ. ಕಳೆದ ವರ್ಷ ₹1,750 ಇತ್ತು.
ಮುಂಗಾರು ಹಂಗಾಮಿನಲ್ಲಿ ಸಿಂಧನೂರು ತಾಲೂಕಿನಲ್ಲಿ 56,413 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ತುಂಗಭದ್ರಾ ಕಾಲುವೆಯ ಮೇಲ್ಭಾಗದಲ್ಲಿ ಈಗಾಗಲೇ ಭತ್ತದ ಕಟಾವು ಪ್ರಾರಂಭವಾಗಿದೆ. ಆದರೆ, ಮಧ್ಯ ಹಾಗೂ ಕೆಳ ಭಾಗದಲ್ಲಿ ತೆನೆ ಕೆಂಪಗಾಗಿದ್ದು, ತಿಂಗಳಲ್ಲಿ ಕಟಾವು ಶುರುವಾಗಲಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

'ಕಳೆದ ವರ್ಷ ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲೂ ಭತ್ತ ಬೆಳೆಯ ಇಳುವರಿ ಚೆನ್ನಾಗಿತ್ತು. ಭತ್ತ ಅಧಿಕ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದ ಕಾರಣ ಬೇಡಿಕೆ ಕಡಿಮೆ ಇತ್ತು. ಈ ಬಾರಿ ಬರ ಇರುವ ಕಾರಣ ಭತ್ತದ ಇಳುವರಿಯೂ ಕಡಿಮೆಯಾಗಿದೆ. ಕಳೆದ ವರ್ಷ 75 ಕೆಜಿ ಭತ್ತ ₹1750ರವರೆಗೆ ಮಾರಾಟವಾಗಿದೆ. ಈ ಬಾರಿ ಸೋನಾಮಸೂರಿ ₹1,900, ಆರ್ಎನ್ಆರ್ ₹2,100 ದರ ಇದೆ' ಎಂದು ಸಿಂಧನೂರಿನ ವರ್ತಕರ ಸಂಘದ ಅಧ್ಯಕ್ಷ ಮಲ್ಲನಗೌಡ ಕಾನಿಹಾಳ ವಿವರಿಸುತ್ತಾರೆ.
ಬೆಲೆ ಇನ್ನಷ್ಟು ಏರುವ ಸಂಭವ..!
ನೀರಿನ ಅಭಾವದಿಂದ ಹಿಂಗಾರಿನಲ್ಲಿ ಭತ್ತ ಬಿತ್ತನೆಗೆ ರೈತರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಸಹಜವಾಗಿಯೇ ಡಿಸೆಂಬರ್ ವೇಳೆಗೆ ಭತ್ತದ ಬೆಲೆ ಗಗನಕ್ಕೆ ಏರಿದರೂ ಅಚ್ಚರಿ ಇಲ್ಲ ಎಂದು ವರ್ತಕರು ಹೇಳುತ್ತಿದ್ದಾರೆ.

ಈ ಬಾರಿ ಹಿಂಗಾರು ಭತ್ತ ಬಿತ್ತನೆ ಮಾಡುತ್ತಿಲ್ಲ. ರೈತರು ಬೆಳೆದ ಭತ್ತಕ್ಕೆ ಒಳ್ಳೆಯ ಬೆಲೆ ಇದೆ. ಈಗಲೇ ಮಾರಾಟ ಮಾಡಿದರೆ ಹೆಚ್ಚು ಲಾಭ ಸಿಗದು. ವರ್ತಕರು ಭತ್ತ ಸಂಗ್ರಹ ಮಾಡಿಕೊಂಡು ಹೆಚ್ಚಿನ ಲಾಭ ಪಡೆಯಲಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮರಳಿ ಹೇಳಿದ್ದಾರೆ.
'ಮುಂಗಾರು ಹಂಗಾಮಿನಲ್ಲಿ ಮಳೆ ಕೈಕೊಟ್ಟಿದೆ. ಜಲಾಶಯದಲ್ಲಿ ನೀರಿಲ್ಲದೆ ಎರಡನೇ ಬೆಳೆ ಬೆಳೆಸಲು ಸಾಧ್ಯವಾಗುತ್ತಿಲ್ಲ. ಅಕಾಲಿಕ ಮಳೆಯಿಂದ ಕೈಗೆ ಬಂದ ಭತ್ತವೂ ಕೆಲವೆಡೆ ನೆಲಕ್ಕುರುಳಿದೆ. ಇದರಿಂದ ರೈತರು ಸಾಲದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥ ಸಂದರ್ಭದಲ್ಲಿ ಭತ್ತಕ್ಕೆ ಅಧಿಕ ಬೆಲೆ ಸಿಕ್ಕರೆ ಅನುಕೂಲವಾಗಲಿದೆ' ಎಂದು ರೈತ ಮಹಿಳೆ ಮಲ್ಲಮ್ಮ ಚಿರತ್ನಾಳ ಹೇಳಿದ್ದಾರೆ.












Click it and Unblock the Notifications