ತೈವಾನ್ ಚೇಪೆಕಾಯಿ ಬೇಸಾಯ; ಕಡಿಮೆ ಖರ್ಚು, ಹೆಚ್ಚು ಆದಾಯ
ಕೋಲಾರ, ಜನವರಿ 13: ಕೋಲಾರ ಜಿಲ್ಲೆ ಬರದ ನಾಡು. 2000 ಅಡಿಗೆ ಅಂತರ್ಜಲ ಮಟ್ಟ ಕುಸಿದಿದ್ದರು ಇಲ್ಲಿನ ರೈತರು ಮಾತ್ರ ಬಂಗಾರದ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಸಮಗ್ರ ಕೃಷಿಗೆ ಒತ್ತು ನೀಡಿ, ಅಲ್ಪ ಪ್ರಮಾಣದ ಜಮೀನಿನಲ್ಲಿ ಲಾಭ ಪಡೆಯುತ್ತಾ ಮಾದರಿಯಾಗುತ್ತಿದ್ದಾರೆ.
ಕೋಲಾರದ ರೈತರು ವ್ಯವಸಾಯದಲ್ಲಿ ಹೊಸ-ಹೊಸ ವೈಜ್ಞಾನಿಕ ಮಾದರಿಗಳನ್ನು ಅಳವಡಿಸಿಕೊಂಡಿದ್ದಾರೆ. ಕೃಷಿ ಸಚಿವ ಬಿ. ಸಿ. ಪಾಟೀಲ್ ಅವರಿಂದಲೂ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ರೈತರು ಎಲ್ಲಾ ರೀತಿಯ ಬೆಳೆ ಬೆಳೆದು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಬೆಳೆಗಳಿಗೆ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಇದೆ ರೀತಿಯ ಒಬ್ಬರು ಮಾದರಿ ರೈತರ ಯಶೋಗಾಧೆ ಇಲ್ಲಿದೆ.
ಬರಪೀಡಿತ ಕೋಲಾರ ಜಿಲ್ಲೆ ರೈತರು ತೈವಾನ್ ಪಿಂಕ್ ಸೀಬೆ ಅಥವಾ ಚೇಪೆಕಾಯಿ ಕೃಷಿಯನ್ನು ಮಾಡುತ್ತಿದ್ದಾರೆ. ಇದು ಕಡಿಮೆ ಖರ್ಚಿನ, ಹೆಚ್ಚು ಆದಾಯ ತಂದುಕೊಡುವ ಬೆಳೆಯಾಗಿದೆ. ಕೋಲಾರ ತಾಲೂಕಿನ ಉರಟ ಅಗ್ರಹಾರ ಗ್ರಾಮದ ರೈತ ಅಂಬರೀಷ್ ಈ ಬೆಳೆಯಲ್ಲಿ ಲಾಭವನ್ನು ಕಂಡಿದ್ದಾರೆ.
ತೈವಾನ್ ಚೇಪೆಕಾಯಿಗೆ ಅಪಾರವಾದ ಬೇಡಿಕೆಯಿದೆ. ಕಿತ್ತಳೆ ಹಣ್ಣಿಗಿಂತ ಹೆಚ್ಚು ವಿಟಮಿನ್ 'ಸಿ' ಅಂಶ ಇದರಲ್ಲಿದೆ. ಇದರಲ್ಲಿರುವ ಅಧಿಕ ಫೈಬರ್ ಅಂಶ ದೇಹದ ಜೀರ್ಣ ಕ್ರಿಯೆಗೆ ಸಹಕಾರಿಯಾಗಿದೆ. ಕ್ಯಾನ್ಸರ್ ಮತ್ತು ಹೃದಯ ಕಾಯಿಲೆಗಳನ್ನು ದೂರವಿಡಲು ಇದು ಸಹಾಯ ಮಾಡುತ್ತದೆ. ಮಧುಮೇಹ ಕಾಯಿಲೆಯಿಂದ ಬಳಲುತ್ತಿರುವವರಿಗೆ ಇದು ರಾಮಬಾಣ. ಪಾನಿಯಗಳ ಉತ್ಪಾದನೆಗೆ ಸಹ ಇದನ್ನು ಬಳಕೆ ಮಾಡುವುದರಿಂದ ಬೇಡಿಕೆ ಹೆಚ್ಚು.

ಎರಡು ಬಾರಿ ಫಸಲು ನೀಡುತ್ತದೆ
ಕೋಲಾರದಲ್ಲಿ ತೈವಾನ್ ಚೇಪೆಕಾಯಿ ಕೃಷಿಯನ್ನು ರೈತರು ಮಾಡುತ್ತಿದ್ದಾರೆ. ಟೊಮೊಟೊ, ಆಲೂಗಡ್ಡೆ, ರೇಷ್ಮೆ ಮತ್ತಿತರ ಬೆಳೆ ಬೆಳೆಯುತ್ತಿದ್ದವರು ಈಗ ತೈವಾನ್ ಚೇಪೆಕಾಯಿ ಬೆಳೆ ಬೆಳೆಯುವತ್ತ ಆಸಕ್ತಿ ತೋರಿಸುತ್ತಿದ್ದಾರೆ. ಕಡಿಮೆ ಪ್ರಮಾಣದ ನೀರಿನಲ್ಲಿ ಇದನ್ನು ಬೆಳೆಯಬಹುದಾಗಿದೆ. ವರ್ಷಕ್ಕೆ ಎರಡು ಬಾರಿ ಫಸಲು ನೀಡುವ ತೈವಾನ್ ಚೇಪೆ ಬೆಳೆಗೆ ವಾರಕ್ಕೆ 2 ಬಾರಿಯಷ್ಟೇ ನೀರು ಹರಿಸಬೇಕು. ಯಾವುದೇ ಬೆಳೆ ಬೆಳೆದರೂ ರೈತರು ಎದುರಿಸುವ ಸಮಸ್ಯೆಗಳಲ್ಲಿ ಕೂಲಿಕಾರರ ಕೊರತೆಯು ಸಹ ಒಂದಾಗಿದೆ ಇದಕ್ಕೂ ಅದರ ಬಿಸಿ ತಟ್ಟಿದೆ.

ಕಡಿಮೆ ಖರ್ಚು, ಹೆಚ್ಚು ಆದಾಯಗಳಿಕೆ
ಒಂದು ತೈವಾನ್ ಚೇಪೆಕಾಯಿ 800 ರಿಂದ 900 ಗ್ರಾಂ ತೂಕವಿರಲಿದೆ. ಒಂದು ಕಾಯಿಗೆ ರೈತರಿಂದಲೇ 85 ರಿಂದ 90 ರೂಪಾಯಿವರೆಗೂ ಖರೀದಿ ಮಾಡಲಾಗುತ್ತದೆ. 300 ಗ್ರಾಂ ತೂಕಕ್ಕಿಂತ ಕಡಿಮೆ ಇದ್ದರೆ 35 ರಿಂದ 40 ರೂ.ಗೆ ಖರೀದಿ ಮಾಡಲಾಗುತ್ತದೆ. ಕೋಲಾರ ಮಾತ್ರವಲ್ಲ ಪಕ್ಕದ ಚಿಕ್ಕಬಳ್ಳಾಪುರದಲ್ಲಿಯೂ ಕೆಲವು ಕಡೆ ತೈವಾನ್ ಪಿಂಕ್ ಚೇಪೆ ಬೆಳೆಯಲಾಗುತ್ತಿದೆ.

ಸೂಪರ್ ಮಾರ್ಕೆಟ್ನವರ ಖರೀದಿ
ಕೋವಿಡ್ ಪರಿಸ್ಥಿತಿಗೂ ಮೊದಲು ಚೈನ್ನೈನಿಂದ ಬಂದು ಒಂದು ಕೆಜಿ 120 ರೂ. ನೀಡಿ ಚೇಪೆಕಾಯಿ ಖರೀದಿ ಮಾಡುತ್ತಿದ್ದರು. ಈಗ ಚೆನ್ನೈನವರು ಬರುತ್ತಿಲ್ಲ. ಆದರೆ, ರಿಲಯನ್ಸ್, ಬಿಗ್ ಬಾಸ್ಕೆಟ್, ಮೋರ್ ಮುಂತಾದ ಸೂಪರ್ ಮಾರ್ಕೆಟ್ನವರು ಒಂದು ಕೆಜಿಗೆ 85 ರಿಂದ 90 ರೂ. ನೀಡಿದ ಖರೀದಿ ಮಾಡುತ್ತಿದ್ದಾರೆ. ಹಣವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡುತ್ತಿದ್ದಾರೆ.

ಚೇಪೆ ಬೆಲೆಯಲು ಎಷ್ಟು ವೆಚ್ಚವಾಗಲಿದೆ?
ಒಂದು ಎಕರೆ ಪ್ರದೇಶದಲ್ಲಿ ತೈವಾನ್ ಚೇಪೆ ಬೆಳೆಯಲು ಸುಮಾರು ಎರಡೂವರೆ ಲಕ್ಷ ರೂಪಾಯಿ ವೆಚ್ಚವಾಗಲಿದೆ. ಕಡಿಮೆ ಪ್ರಮಾಣದ ನೀರಿನಲ್ಲಿ ಬೆಳೆ ಬೆಳೆದು, ಹೆಚ್ಚು ಆದಾಯ ಗಳಿಸಲು ಸಹಕಾರಿಯಾಗಿದೆ. ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಸಹ ಇದೆ. ಅನೇಕ ಕಾಯಿಲೆಗೆ, ಆರೋಗ್ಯ ವೃದ್ಧಿಗೂ ತೈವಾನ್ ಚೇಪೆಕಾಯಿ ಸಹಕಾರಿಯಾಗಿದೆ. ಕಡಿಮೆ ಕ್ಯಾಲರಿ, ಹೆಚ್ಚು ವಿಟಮಿನ್ ಒದಗಿಸುವ ಮತ್ತು ದೇಹದಲ್ಲಿ ಕೊಬ್ಬಿನಾಂಶ ಕಡಿಮೆ ಮಾಡಲು ಇದು ಸಹಾಯಕವಾಗಿದೆ.

1,500 ಸಸಿಗಳನ್ನು ಹಾಕಿದ್ದಾರೆ
ಕೋಲಾರ ತಾಲೂಕಿನ ಉರಟ ಅಗ್ರಹಾರ ಗ್ರಾಮದ ರೈತ ಅಂಬರೀಷ್ ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ಸುಮಾರು 1,500 ಸಸಿಗಳನ್ನು ಹಾಕಿ ಲಕ್ಷ ಗಟ್ಟಲೇ ಆದಾಯಗಳಿಸುತ್ತಿದ್ದಾರೆ. ಬೇರೆಯವರಿಗೆ ಈ ಬೆಳೆಯನ್ನು ಪರಿಚಯ ಮಾಡಿಕೊಡುತ್ತಿದ್ದಾರೆ. ಹಿಂದೆ ಟೊಮೆಟೊ, ರೇಷ್ಮೆ, ಆಲೂಗಡ್ಡೆ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದ ಅಂಬರೀಷ್, ಇದೇ ಮೊದಲ ಬಾರಿ ತೈವಾನ್ ಪಿಂಕ್ ಚೇಪೆಕಾಯಿ ಬೆಳೆದು ಈಗಾಗಲೇ ಹಾಕಿರುವ ಬಂಡವಾಳ ಸಹ ವಾಪಸ್ ಪಡೆದಿದ್ದಾರೆ. ಇನ್ನು ಉತ್ತಮ ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದಾರೆ.












Click it and Unblock the Notifications