ರಾಯಚೂರು ಜಿಲ್ಲೆಯಲ್ಲಿ ದಿಢೀರ್ ಬದಲಾದ ವಾತಾವರಣ
ರಾಯಚೂರು, ಜನವರಿ, 02: ಕಳೆದೊಂದು ವಾರದಿಂದ ತಾಲೂಕಿನಾದ್ಯಂತ ಮುಂಜಾನೆ ದಟ್ಟನೆಯ ಮಂಜು, ಮಧ್ಯಾಹ್ನ ಬಿಸಿಲು, ಸಂಜೆ ಇಬ್ಬನಿ ಮುಚ್ಚಿದ ವಾತಾವರಣವು ಜನರ ಮೈಮನ ತಣಿಸುತ್ತಿದೆ. ಈ ಚುಮುಚುಮು ಚಳಿಯಿಂದ ಜನರು ಮನೆಯಿಂದ ಹೊರಬರಲು ಭಯಪಡುವಂತಾಗಿದೆ. ಹಾಗೆಯೇ ಮಂಜಿನ ಹನಿಗಳು ಬೆಳೆಗಳಿಗೆ ಪೂರಕವಾದರೆ, ಮತ್ತೊಂದೆಡೆ ಹೊಗೆಯಂತಹ ಮಂಜು ಮುಚ್ಚಿದ ವಾತಾವರಣ ಬೆಳೆಗಳ ಮೇಲೆ ತುಂಬಾ ಪ್ರಭಾವ ಬೀರಲಿದೆ ಎಂದು ಇಲ್ಲಿನ ರೈತರು ಹೇಳುತ್ತಿದ್ದಾರೆ.
ಮಂಜು ಮುಸುಕಿದ ವಾತಾವರಣದಿಂದ ವಾಹನಗಳ ಚಾಲನೆ ಮತ್ತು ವಾಯು ವಿಹಾರಕ್ಕೆ ಕೊಂಚ ಅಡ್ಡಿಯಾಗಿದೆ. ನಿತ್ಯ ವಾಯು ವಿಹಾರಕ್ಕೆ ಹೋಗುತ್ತಿದ್ದ ನಾಗರಿಕರು ಕೂಡ ಈ ಮಂಜು ಮುಸುಕಿದ ವಾತಾವರಣವನ್ನು ನೋಡಿ ಕಂಗಾಲಾಗಿದ್ದಾರೆ. ಇಬ್ಬನಿ ಕೊಂಚ ಕಡಿಮೆ ಆದಮೇಲೆ ತಡವಾಗಿ ವಿಹಾರಕ್ಕೆ ತೆರಳುವಂತಹ ವಾತಾವರಣ ನಿರ್ಮಾಣವಾಗಿದೆ. ಬೆಳಗಿನ ಜಾವ ಮತ್ತು ಸಂಜೆ ಮಂಜು ಮುಸುಕಿದ ವಾತಾವರಣ ನಿರ್ಮಾಣ ಆಗುತ್ತಿದ್ದು, ರಸ್ತೆಗಳ ಮೇಲೆ ಸಂಚರಿಸುವ ದ್ವಿಚಕ್ರ ಹಾಗೂ ಲಘು ವಾಹನ ಸವಾರರು ಲೈಟ್ ಹಾಕಿಕೊಂಡೇ ಸಂಚರಿಸುವ ಅನಿವಾರ್ಯತೆ ಎದುರಾಗಿದೆ.
ಆತಂಕ ವ್ಯಕ್ತಪಡಿಸಿದ ರೈತರು
ಹಾಗೆಯೇ ಮತ್ತೊಂದೆಡೆ ಹಿಂಗಾರು ಬೆಳೆಗಳಾದ ಜೋಳ, ಕಡಲೆ ಇತರೆ ಬೆಳೆಗಳು ಉತ್ತಮವಾಗಿ ಬೆಳೆದು ಇಳುವರಿಗೆ ಬರಲು ಮಂಜು ಮುಸುಕಿದ ವಾತಾವರಣ ಸಹಕಾರಿ ಆಗಲಿದೆ ಎಂಬುದು ರೈತರ ಅಭಿಪ್ರಾಯವಾಗಿದೆ. ಈ ಮಂಜಿನ ಹನಿಗಳ ವಾತಾವರಣ ಬೆಳೆಗೆ ಶಕ್ತಿ ನೀಡಲಿದೆ. ಇನ್ನು ಹೊಗೆ ಮಂಜು ಆವರಿಸಿಕೊಂಡರೆ ಮಾತ್ರ ಬೆಳೆಗಳ ಇಳುವರಿ ಕುಂಠಿತಗೊಳ್ಳುತ್ತದೆ ಎಂದು ರೈತ ಸದ್ಯೋಜಾತಪ್ಪ ಸಜ್ಜನ ಆತಂಕ ವ್ಯಕ್ತಪಡಿಸಿದರು.

ಪ್ರದೇಶವಾರು ಬಿತ್ತನೆ ವಿವರ
ಲಿಂಗಸೂಗೂರು ತಾಲೂಕಿನಾದ್ಯಂತ ಮುಂಗಾರು ಹಂಗಾಮಿನಲ್ಲಿ 60,776 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಜೋಳ 55,25 ಹೆಕ್ಟೇರ್, ಕಡಲೆ 40,560, ಶೇಂಗಾವನ್ನು 14,566 ಹೆಕ್ಟೇರ್ನಲ್ಲಿ ಬಿತ್ತನೆ ಮಾಡಲಾಗಿದೆ. ಹಿಂಗಾರು ಮಳೆಗೆ ಹೆಚ್ಚು ಚಳಿ ಮತ್ತು ಮಂಜು ಆವರಿಸಿಕೊಂಡರೆ ಮಾತ್ರ ನಿರೀಕ್ಷಿತ ಬೆಳೆ ಸಾಧ್ಯ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಆರೀಫಾ ಅತ್ತಾರ ಹೇಳಿದರು. ಹಿಂಗಾರು ಬೆಳೆಗೆ ನೀರು ಮಂಜು (ಇಬ್ಬನಿ) ಮತ್ತು ಚಳಿ ವಾತಾವರಣ ಹೆಚ್ಚು ಸಹಕಾರಿ ಆಗಲಿದೆ. ಹೊಗೆ ಮಂಜು ಆವರಿಸಿಕೊಂಡರೆ ಬೆಳೆ ಕುಂಠಿತಗೊಂಡು ಹೂವು ಮತ್ತು ಕಾಯಿ ಉದುರಿ ಬೆಳೆ ನಷ್ಟಕ್ಕೆ ಒಳಗಾಗುತ್ತವೆ.

ಇನ್ನು ನೀರು ಮಂಜು ವಾತಾವರಣ ಹಿಂಗಾರು ಬೆಳೆಗೆ ರೈತ ಮಿತ್ರ ಇದ್ದಂತೆ ಎಂದು ಕೃಷಿ ವಿಜ್ಞಾನಿ ಅರವಿಂದ ರಾಠೋಡ ಹೇಳಿದರು. ಈ ದಿನಗಳಲ್ಲಿ ಮಂಜು ಕವಿದ ವಾತಾವರಣ ಸಹಜವಾಗಿರುತ್ತದೆ. ವಾಯುಮಾಲಿನ್ಯದ ಪ್ರದೇಶದಲ್ಲಿ ಮಂಜು ಕವಿದ ವಾತಾವರಣ ಇದ್ದಲ್ಲಿ ಜನರ ಆರೋಗ್ಯಕ್ಕೆ ಹಾನಿಕರವಾಗುತ್ತದೆ. ಹೆಚ್ಚು ಮಂಜು ಮುಚ್ಚಿದ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸಬೇಕು ಎಂದು ರಾಯಚೂರು ಕೃಷಿ ವಿಶ್ವ ವಿದ್ಯಾಲಯ ವಾತಾವರಣ ವಿಭಾಗದ ತಜ್ಞರಾದ ಡಾ. ಶಾಂತಪ್ಪ ಹೇಳಿದರು.












Click it and Unblock the Notifications