ಮಲ್ಲಿಗೆ ಕೃಷಿ ಮಾಡಿ ಶಿಕ್ಷಕರಿಗೆ ಸಂಬಳ ನೀಡುವ ವಿದ್ಯಾರ್ಥಿಗಳು
ಮಂಗಳೂರು, ಜುಲೈ 9: ಪ್ರಸ್ತುತ ಸನ್ನಿವೇಶದಲ್ಲಿ ಸರಕಾರಿ ಶಾಲೆಗಳನ್ನು ಉಳಿಸುವುದೇ ದೊಡ್ಡ ಸವಾಲಾಗಿದೆ. ಒಂದೆಡೆ ವಿದ್ಯಾರ್ಥಿಗಳ ಕೊರತೆಯಿದ್ದರೆ, ಮತ್ತೊಂದೆಡೆ ಶಿಕ್ಷಕರ ಸಮಸ್ಯೆ ಕಾಡುತ್ತಿದೆ. ಈ ಪರಿಣಾಮ ಹಲವಾರು ಗ್ರಾಮಾಂತರ ಪ್ರದೇಶಗಳ ಶಾಲೆಗಳು ಮುಚ್ಚುವ ಹಂತದಲ್ಲಿವೆ. ಪೂರಕ ವಿದ್ಯಾರ್ಥಿಗಳಿರುವ ಕೆಲವು ಶಾಲೆಗಳಲ್ಲಿ ಗೌರವ ಶಿಕ್ಷಕರನ್ನು ನೇಮಿಸಿದರೂ ಅವರಿಗೆ ವೇತನ ನೀಡಲಾಗದ ಪರಿಸ್ಥಿತಿ ಇದೆ. ಇಂತಹ ಸಮಸ್ಯೆಗೆ ದಕ್ಷಿಣ ಕನ್ನಡ ಜಿಲ್ಲೆಯ ಶಾಲೆಯೊಂದರಲ್ಲಿ ಹೊಸ ಸ್ಯಾಲರಿ ಪ್ಲಾನ್ ಮಾಡಿಕೊಳ್ಳಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕುಳ ಗ್ರಾಮದ ಸರಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕರಿಗೆ ವೇತನ ನೀಡುವುದಕ್ಕೆ ವಿದ್ಯಾರ್ಥಿಗಳೇ ಹೊಸ ಉಪಾಯ ಕಂಡುಕೊಂಡಿದ್ದಾರೆ. ಅದುವೇ ಮಲ್ಲಿಗೆ ಕೃಷಿ. ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳೇ ಮಲ್ಲಿಗೆ ಕೃಷಿ ಮಾಡುತ್ತಿದ್ದು, ತಮ್ಮ ಶಾಲೆಯ ಉಳಿವಿಗಾಗಿ ಕೃಷಿ ಕಾಯಕವನ್ನು ಕೈಗೊಂಡಿದ್ದಾರೆ. ಆ ಮಲ್ಲಿಗೆಯ ಮಾರಾಟದಿಂದ ಬರುವ ಆದಾಯದಿಂದ ಅತಿಥಿ ಶಿಕ್ಷಕರ ವೇತನ ನೀಡುತ್ತಿದ್ದಾರೆ ಈ ವಿದ್ಯಾರ್ಥಿಗಳು.
ಅಂದ ಹಾಗೆ, ಗ್ರಾಮಾಂತರ ಪ್ರದೇಶಕ್ಕೆ ಬರುವ ಶಿಕ್ಷಕರು ಕೆಲವೇ ವರ್ಷಗಳಲ್ಲಿ ವರ್ಗಾವಣೆಯಾಗಿ ಪಟ್ಟಣದ ಶಾಲೆ ಸೇರಿಕೊಳ್ಳುತ್ತಾರೆ. ಇದು ಇಲ್ಲಿನ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಲ್ಲದೇ, ಪೋಷಕರು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳನ್ನು ಸೇರಿಸುವ ಪರಿಪಾಠವೂ ಹೆಚ್ಚಿದೆ. ಹೀಗಾಗಿ ಇದನ್ನು ತಡೆಗಟ್ಟಲು ಕುಳ ಗ್ರಾಮದ ಸರಕಾರಿ ಶಾಲೆಯಲ್ಲಿ ಈ ಹೊಸ ಕ್ರಾಂತಿಯೇ ಆರಂಭಗೊಂಡಿದೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರದಿಂದ ಮಲ್ಲಿಗೆ ಕೃಷಿ ಮಾಡಿ ಅದರಿಂದ ಬರುವ ಆದಾಯವನ್ನು ಅತಿಥಿ ಶಿಕ್ಷಕರಿಗೆ ನೀಡಲಾಗುತ್ತಿದೆ. ಮಲ್ಲಿಗೆ ಕೃಷಿ ನಿರ್ವಹಣೆಯನ್ನು ಶಾಲೆಯ ಮಕ್ಕಳೇ ಮಾಡುತ್ತಿದ್ದು, ಬೆಳಿಗ್ಗೆ ಬೇಗ ಶಾಲೆಗೆ ಬರುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಗಿಡಗಳಿಗೆ ನೀರುಣಿಸುವ, ಮಲ್ಲಿಗೆ ಆಯ್ದು ತರುವ ಕೆಲಸ ಮಾಡುತ್ತಾರೆ.
ನಂತರ ಶಾಲೆಯ ಸಿಬ್ಬಂದಿ ಅದನ್ನು ಪೋಣಿಸುತ್ತಾರೆ. ಅದನ್ನು ಹತ್ತಿರದ ಕಬಕ ಪೇಟೆಗೆ ಮಾರಾಟಕ್ಕೆಂದು ಕಳುಹಿಸಿ ಕೊಡುತ್ತಾರೆ. ಮಲ್ಲಿಗೆ ಕೃಷಿಯಿಂದ ದಿನಕ್ಕೆ 40 ರಿಂದ 50 ಸಾವಿರ ರೂಪಾಯಿ ಆದಾಯ ಗಳಿಸಲಾಗುತ್ತಿದ್ದು, ಇದರ ಮೂಲಕ ಇಬ್ಬರು ಶಿಕ್ಷಕರಿಗೆ ಸಂಬಳ ನೀಡುತ್ತಿದ್ದಾರೆ.
ಸರಕಾರಿ ಶಾಲೆಯನ್ನು ಉಳಿಸುವಲ್ಲಿ ಸ್ವತಃ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸೇರಿ ಈ ರೀತಿಯ ಕಾರ್ಯ ಕೈಗೊಂಡು ಮುಚ್ಚುತ್ತಿರುವ ಶಾಲೆಯನ್ನು ಮತ್ತೆ ನಡೆಯುವಂತೆ ಮಾಡುತ್ತಿರುವುದು ಮಾದರಿಯೇ ಸರಿ.












Click it and Unblock the Notifications