ರೈತರಿಗೆ ಒಂದು ಅಜೆಂಡಾ ಎಂಬುದೇ ಇಲ್ಲ; ಹೇಮಾ ಮಾಲಿನಿ
ನವದೆಹಲಿ, ಜನವರಿ 13: ದೆಹಲಿ ಗಡಿಗಳಲ್ಲಿ ಸಾವಿರಾರು ರೈತರು ಕೇಂದ್ರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಅವರಿಗೇ ತಮಗೆ ಏನು ಬೇಕು, ಈ ಹೊಸ ಕಾಯ್ದೆಗಳಲ್ಲಿ ಏನು ದೋಷವಿದೆ ಎಂಬುದು ತಿಳಿದಿಲ್ಲ ಎಂದು ಬಾಲಿವುಡ್ ನಟಿ ಹಾಗೂ ಮಥುರಾ ಸಂಸದೆ ಹೇಮಾ ಮಾಲಿನಿ ಹೇಳಿದ್ದಾರೆ.
ದೆಹಲಿಯಲ್ಲಿ ರೈತರ ಹೋರಾಟಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಈ ಹೇಳಿಕೆ ನೀಡಿದ ಅವರು, ಕೃಷಿ ಕಾಯ್ದೆಗಳನ್ನು ತಡೆ ಹಿಡಿದಿರುವ ಸುಪ್ರೀಂ ಕೋರ್ಟ್ ಆದೇಶವನ್ನೂ ಸ್ವಾಗತಿಸಿದ್ದಾರೆ. ಈ ಒಂದು ನಡೆ ಆಕ್ರೋಶವನ್ನು ತಣ್ಣಗಾಗಿಸಬಹುದು ಎಂದು ಹೇಳಿದ್ದಾರೆ. ಮುಂದೆ ಓದಿ...

"ತಮಗೆ ಏನು ಬೇಕು ಎಂಬುದು ರೈತರಿಗೇ ತಿಳಿದಿಲ್ಲ"
ಮಂಗಳವಾರ ಕೇಂದ್ರದ ಕೃಷಿ ಕಾಯ್ದೆಗಳಿಗೆ ಸುಪ್ರೀಂ ಕೋರ್ಟ್ ತಡೆ ನೀಡಿರುವುದು ಒಳ್ಳೆಯದೇ ಆಗಿದೆ. ಈ ಆದೇಶ ಪರಿಸ್ಥಿತಿಯನ್ನು ನಿಯಂತ್ರಿಸಲು ಸಹಕರಿಸುತ್ತದೆ. ಹಲವು ಸುತ್ತಿನ ಮಾತುಕತೆ ನಂತರವೂ ರೈತರು ಒಂದು ಒಪ್ಪಂದಕ್ಕೆ ಬರಲು ಸಿದ್ಧರಿಲ್ಲ. ಅವರಿಗೆ ಏನು ಬೇಕು ಎಂಬುದು ಅವರಿಗೇ ತಿಳಿದಿಲ್ಲ" ಎಂದಿದ್ದಾರೆ.

"ಕಾಯ್ದೆಗಳಲ್ಲಿ ದೋಷವೇನಿದೆ?"
ಕೇಂದ್ರ ಪರಿಚಯಿಸಿರುವ ಈ ನೂತನ ಕೃಷಿ ಕಾಯ್ದೆಗಳಲ್ಲಿ ಏನು ತಪ್ಪಿದೆ, ಯಾವ ದೋಷವಿದೆ ಎಂಬುದು ರೈತರಿಗೆ ತಿಳಿದಿಲ್ಲ. ಸುಮ್ಮನೆ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಇದರರ್ಥ, ಅವರಿಂದ ಬೇರೆ ಯಾರೋ ಈ ಕೆಲಸ ಮಾಡಿಸುತ್ತಿದ್ದಾರೆ ಎಂಬುದು. ಬೇರೆಯವರು ಹೇಳಿಕೊಟ್ಟು ಮಾಡಿಸುತ್ತಿರುವ ಪ್ರತಿಭಟನೆ ಇದು. ರೈತರ ಮೂಲಕ ಬೇರೆಯವರು ಪರಿಸ್ಥಿತಿಯ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.

ಮೊಬೈಲ್ ಟವರ್ ಧ್ವಂಸಗೊಳಿಸಿದ್ದಕ್ಕೆ ಆಕ್ರೋಶ
ಪಂಜಾಬ್ ನಲ್ಲಿ ರೈತರು ಮೊಬೈಲ್ ಟವರ್ ಗಳನ್ನು ಧ್ವಂಸಗೊಳಿಸಿದ್ದು ಸರಿಯಲ್ಲ. ಇದರಿಂದ ಪಂಜಾಬ್ ನಲ್ಲಿ ಸಾಕಷ್ಟು ನಷ್ಟವಾಗಿದೆ. ಸರ್ಕಾರ ಪದೇ ಪದೇ ಮಾತುಕತೆಗೆ ಕರೆಯುತ್ತಿದ್ದರೂ ಹೀಗೆ ವಿನಾಕಾರಣ ಪ್ರತಿಭಟನೆ ಕೈಗೊಳ್ಳುತ್ತಿದ್ದಾರೆ. ಇದರಿಂದ ಯಾರಿಗೆ ಲಾಭ ಎಂದು ಪ್ರಶ್ನಿಸಿದ್ದಾರೆ.

"ರೈತರಿಗೆ ಅಜೆಂಡಾ ಎಂಬುದೇ ಇಲ್ಲ"
ಸುಮ್ಮನೆ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರಿಗೆ ಅಜೆಂಡಾ ಎಂಬುದೇ ಇಲ್ಲ. ಸರ್ಕಾರ ಮಾತುಕತೆಗೆ ಕರೆಯುತ್ತಿದ್ದರೂ ಅದನ್ನು ನಿರಾಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಯಾವ ಅರ್ಥವೂ ಇಲ್ಲ ಎಂದಿದ್ದಾರೆ.












Click it and Unblock the Notifications