ಕೃಷಿ ಕಾಯ್ದೆ ರದ್ದತಿಗೆ ಮೋದಿ ಸರ್ಕಾರಕ್ಕೆ ಅರ್ಥಶಾಸ್ತ್ರಜ್ಞರ ಪತ್ರ: ತಜ್ಞರು ನೀಡಿದ 5 ಕಾರಣ
ನವದೆಹಲಿ, ಡಿಸೆಂಬರ್ 18: ಕೃಷಿಗೆ ಸಂಬಂಧಿಸಿದಂತೆ ರಚಿಸಲಾಗಿರುವ ಮೂರು ವಿವಾದಾತ್ಮಕ ಕಾಯ್ದೆಗಳನ್ನು ರದ್ದುಗೊಳಿಸುವಂತೆ ದೇಶದ ಹತ್ತು ಹಿರಿಯ ಅರ್ಥಶಾಸ್ತ್ರಜ್ಞರು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಪತ್ರ ಬರೆದಿದ್ದಾರೆ. ಕೃಷಿ ಕಾಯ್ದೆಗಳ ವಿರುದ್ಧದ ರೈತರ ಪ್ರತಿಭಟನೆ ಮೂರು ವಾರಗಳಿಂದ ನಡೆಯುತ್ತಿದ್ದು, ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಸಹಮತ ವ್ಯಕ್ತವಾಗದ ನಡುವೆ ಅರ್ಥಶಾಸ್ತ್ರಜ್ಞರು ಕೂಡ ರೈತರ ಬೇಡಿಕೆಗೆ ಧ್ವನಿಗೂಡಿಸಿದ್ದಾರೆ.
ಕೃಷಿ ಕಾಯ್ದೆಗಳು ಸಣ್ಣ ಮತ್ತು ಅತಿಸಣ್ಣ ರೈತರ ಹಿತಾಸಕ್ತಿಗಳಿಗೆ ಅನುಗುಣವಾಗಿಲ್ಲ. ಹೀಗಾಗಿ ಅವುಗಳನ್ನು ಹಿಂದಕ್ಕೆ ಪಡೆದುಕೊಳ್ಳುವ ಅಗತ್ಯವಿದೆ ಎಂದು ಪತ್ರದಲ್ಲಿ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅದಕ್ಕೆ ಅವರು ಐದು ಕಾರಣಗಳನ್ನು ಕೂಡ ವಿವರಿಸಿದ್ದಾರೆ.
'ಇತ್ತೀಚಿನ ಕೃಷಿ ಕಾಯ್ದೆಗಳು ದೇಶದ ಸಣ್ಣ ಮತ್ತು ಅತಿ ಸಣ್ಣ ರೈತರ ಹಿತಾಸಕ್ತಿಗಳಿಗೆ ಅನುಕೂಲಕರವಾಗಿಲ್ಲ. ಅಲ್ಲದೆ ಈ ಬಗ್ಗೆ ಕೃಷಿ ಸಂಘಟನೆಗಳ ಬಹು ದೊಡ್ಡ ವರ್ಗ ಗಂಭೀರ ಆಕ್ಷೇಪಣೆಗಳನ್ನು ವ್ಯಕ್ತಪಡಿಸಿದೆ. ಹೀಗಾಗಿ ಈ ಕಾಯ್ದೆಗಳನ್ನು ಭಾರತ ಸರ್ಕಾರ ವಾಪಸ್ ಪಡೆಯಬೇಕು' ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ. ಮುಂದೆ ಓದಿ.

ಹಿಂದಿನ ಕಾಯ್ದೆಗಳ ಬಗ್ಗೆ ತಪ್ಪು ಕಲ್ಪನೆಗಳು
ಕೃಷಿ ಮಾರುಕಟ್ಟೆಗಳನ್ನು ಮೊದಲು ಸುಧಾರಣೆ ಮಾಡುವ ಅಗತ್ಯವಿದೆ. ಆದರೆ ಈ ಕಾಯ್ದೆಗಳು ಆ ಉದ್ದೇಶವನ್ನು ಈಡೇರಿಸುವುದಿಲ್ಲ. ರೈತರಿಗೆ ಏಕೆ ಸೂಕ್ತ ಬೆಲೆ ಸಿಗುತ್ತಿಲ್ಲ ಎಂಬ ಬಗ್ಗೆ, ಈ ಹಿಂದಿನ ಕಾಯ್ದೆಗಳ ಅಡಿ ರೈತರು ಎಲ್ಲಿ ಬೇಕಾದರೂ ಬೆಳೆ ಮಾರಾಟ ಮಾಡಲು ಅವಕಾಶ ಇರಲಿಲ್ಲ, ಮಾರುಕಟ್ಟೆಗಳು ರೈತರ ಹಿತಾಸಕ್ತಿಗಳಿಗೆ ಅನುಗುಣವಾಗಿ ಇರಲಿಲ್ಲ ಎಂಬ ತಪ್ಪು ಕಲ್ಪನೆಗಳು ಮತ್ತು ಹೇಳಿಕೆಗಳಿವೆ ಎಂದು ಅವರು ಹೇಳಿದ್ದಾರೆ. ಅವರು ಪ್ರಸ್ತಾಪಿಸಿದ ಐದು ಕಾರಣಗಳು ಇಲ್ಲಿವೆ.

ರಾಜ್ಯ ಸರ್ಕಾರದ ಪಾತ್ರ ಅವಗಣನೆ
* ಈ ಕಾನೂನುಗಳು ರಾಜ್ಯ ಸರ್ಕಾರದ ಪಾತ್ರವನ್ನು ಕಡೆಗಣಿಸುತ್ತದೆ. ಆದರೆ ರೈತರ ಹಿತಾಸಕ್ತಿಗಳನ್ನು ಪೂರೈಸುವಲ್ಲಿ ಮತ್ತು ಜವಾಬ್ದಾರಿಗಳನ್ನು ಹೊರುವುದರಲ್ಲಿ ಕೇಂದ್ರ ಸರ್ಕಾರಕ್ಕಿಂತ ರೈತರಿಗೆ ಹೆಚ್ಚು ಸುಲಭವಾಗಿ ಸಿಗುವುದು ರಾಜ್ಯ ಸರ್ಕಾರಗಳು.

ಎರಡು ನಿಯಮ, ಎರಡು ಮಾರುಕಟ್ಟೆ
* ಈ ಕಾಯ್ದೆಗಳು ಎರಡು ನಿಯಮಗಳೊಂದಿಗೆ ಎರಡು ಮಾರುಕಟ್ಟೆಗಳನ್ನು ಕೂಡ ಸೃಷ್ಟಿಸಲಿದೆ- ಎರಡು ವಿಭಿನ್ನ ಕಾಯ್ದೆಗಳಿಗೆ, ಮಾರುಕಟ್ಟೆ ಶುಲ್ಕದ ಎರಡು ಆಡಳಿತಗಳೊಂದಿಗೆ ಮತ್ತು ವಿಭಿನ್ನ ನಿಯಮಗಳೊಂದಿಗೆ ಎಪಿಎಂಸಿ ಮಾರುಕಟ್ಟೆ ಅಂಕಣಗಳಲ್ಲಿ ನಿಯಂತ್ರಿಕ ಮಾರುಕಟ್ಟೆಗಳ ಜತೆ ಜತೆಯೇ ವ್ಯಾಪಾರ ಪ್ರದೇಶದಲ್ಲಿ ಅನಿಯಂತ್ರಿತ ಮಾರುಕಟ್ಟೆಯೂ ಇರುತ್ತದೆ.

ಬಿಹಾರದಲ್ಲಿ ಏನಾಗಿತ್ತು ನೋಡಿ
* ಈ ಕಾನೂನುಗಳು ಛಿದ್ರಗೊಂಡ ಮಾರುಕಟ್ಟೆಗಳನ್ನು ರಚಿಸುತ್ತದೆ. ಬಿಹಾರದಲ್ಲಿನ ಅನುಭವ (2006ರಲ್ಲಿ ಎಪಿಎಂಸಿ ಕಾಯ್ದೆ ರದ್ದುಗೊಳಿಸಿರುವುದು) ರೈತರಿಗೆ ಖರೀದಿದಾರರ ಅವಕಾಶವನ್ನು ಕಡಿಮೆಯಾಗಿಸುವುದು ಚೌಕಾಸಿ ಶಕ್ತಿಯನ್ನು ಕುಂದಿಸಿರುವುದು ಮತ್ತು ಇತರೆ ರಾಜ್ಯಗಳಿಗೆ ಹೋಲಿಸಿದರೆ ತೀವ್ರ ಕಡಿಮೆ ದರದಲ್ಲಿ ಬೆಳೆ ಮಾರಾಟ ಮಾಡುವಂತಾಗಿರುವುದನ್ನು ತೋರಿಸುತ್ತದೆ.

ಉದ್ಯಮಿಗಳ ಕೈಗೆ ರೈತರು
* ಈ ಕಾನೂನುಗಳು ಒಪ್ಪಂದ ಕೃಷಿಯಲ್ಲಿ ಅಸಮಾನ ಲಾಭಕೋರರನ್ನು ತರುತ್ತದೆ. ಇದರಿಂದ ರೈತರ ಹಿತಾಸಕ್ತಿಗಳ ರಕ್ಷಣೆ ಸಾಧ್ಯವಾಗುವುದಿಲ್ಲ.
* ಅಂತಿಮವಾಗಿ ಈ ಕೃಷಿ ಕಾಯ್ದೆಗಳು ಬೃಹತ್ ಕೃಷಿ ಉದ್ಯಮಗಳ ಕಪಿಮುಷ್ಠಿಯೊಳಗೆ ರೈತರು ಸಿಲುಕಿಕೊಳ್ಳುವ ಭೀತಿ ಇದೆ.

ತಿದ್ದುಪಡಿಯಿಂದ ಪ್ರಯೋಜನವಿಲ್ಲ
ಹೀಗಾಗಿ ಕೃಷಿ ಕಾಯ್ದೆಗಳ ನಿಯಮಗಳಿಗೆ ತಿದ್ದುಪಡಿ ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ. ಕಾಯ್ದೆಗಳನ್ನು ರದ್ದುಗೊಳಿಸುವುದೊಂದೇ ಮಾರ್ಗ. ರೈತರ ನೈಜವಾದ ಆತಂಕಗಳನ್ನು ಅವರನ್ನು 'ತಪ್ಪುದಾರಿಗೆ' ಎಳೆಯಲಾಗಿದೆ ಎಂದು ಬಿಂಬಿಸುವುದು ಬೇಡ ಎಂದು ಅರ್ಥತಜ್ಞರು ಒತ್ತಾಯಿಸಿದ್ದಾರೆ.

ಪತ್ರ ಬರೆದವರು ಯಾರು?
ಹೈದರಾಬಾದ್ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್ ಡಾ. ನರಸಿಂಹ ರೆಡ್ಡಿ, ನವದೆಹಲಿಯ ಸಾಮಾಜಿಕ ವಿಜ್ಞಾನಗಳ ಸಂಸ್ಥೆಯ ನಿವೃತ್ತ ಪ್ರೊಫೆಸರ್ ಕಮಲ್ ನಯನ್ ಕಬ್ರಾ ಮತ್ತು ಪ್ರೊ. ಅರುಣ್ ಕುಮಾರ್, ತಿರುವನಂತಪುರಂ ಅಭಿವೃದ್ಧಿ ಅಧ್ಯಯನಗಳ ಕೇಂದ್ರದ ಪ್ರೊಫೆಸರ್ ಕೆಎನ್ ಹರಿಲಾಲ್, ರೋಹ್ಟಕ್ ವಿಶ್ವವಿದ್ಯಾಲಯದ ಪ್ರೊಫೆಸರ್ ರಾಜಿಂದರ್ ಚೌಧರಿ, ಚಂಡಿಗಡದ ಸಿಆರ್ಆರ್ ಐಡಿಯ ಪ್ರೊ. ಸುರಿಂದರ್ ಕುಮಾರ್ ಮತ್ತು ಪ್ರೊ. ರಂಜಿತ್ ಸಿಂಗ್ ಘುಮನ್, ಮುಂಬೈನ ಟಾಟಾ ಸಾಮಾಜಿಕ ವಿಜ್ಞಾನ ಸಂಸ್ಥೆಯ ನಬಾರ್ಡ್ ಛೇರ್ ಪ್ರೊಫೆಸರ್ ಆರ್ ರಾಮಕುಮಾರ್, ಜೆಎನ್ಯುದ ಸಿಇಎಸ್ಪಿ ಕೇಂದ್ರದ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರೊಫೆಸರ್ಗಳಾದ ವಿಕಾಸ್ ರಾವಲ್ ಮತ್ತು ಹಿಮಾಂಶು ಈ ಪತ್ರ ಬರೆದಿದ್ದಾರೆ.












Click it and Unblock the Notifications