ರೈತರ ಪ್ರತಿಭಟನೆ; ಮೂರು ವಿವಾದಿತ ಕೃಷಿ ಕಾಯ್ದೆ ಕುರಿತು ವರದಿ ನೀಡಿದ ಸುಪ್ರೀಂ ನಿಯೋಜಿತ ಸಮಿತಿ
ನವದೆಹಲಿ, ಮಾರ್ಚ್ 31: ಕೇಂದ್ರ ಸರ್ಕಾರ ಪರಿಚಯಿಸಿದ್ದ ಮೂರು ಕೃಷಿ ಕಾಯ್ದೆಗಳ ಕುರಿತು ಸುಪ್ರೀಂ ಕೋರ್ಟ್ ರಚಿಸಿದ್ದ ತ್ರಿಸದಸ್ಯ ಸಮಿತಿಯು ಬುಧವಾರ ವರದಿ ಸಲ್ಲಿಸಿದೆ. ಸುಮಾರು 85 ರೈತ ಸಂಘಗಳೊಂದಿಗೆ ಸಂವಾದ ನಡೆಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿರುವುದಾಗಿ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ನ್ಯಾಯಪೀಠವು ವಿಚಾರಣೆ ನಡೆಸುವವರೆಗೂ ವರದಿಯನ್ನು ಬಹಿರಂಗಪಡಿಸುವುದಿಲ್ಲ ಎನ್ನಲಾಗಿದೆ. ಹೋಳಿ ರಜಾದಿಂದ ವಾಪಸ್ಸಾದ ನಂತರ, ಅಂದರೆ ಏಪ್ರಿಲ್ 5ರ ನಂತರ ವರದಿ ಕುರಿತ ವಿಚಾರಣೆ ನಡೆಯುವ ನಿರೀಕ್ಷೆಯಿದೆ.
ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ಎರಡು ತಿಂಗಳ ಕಾಲ ತಡೆ ಹಿಡಿದು ಜನವರಿ 12ರಂದು ಆದೇಶಿಸಿತ್ತು. ಎರಡು ತಿಂಗಳೊಳಗೆ ವರದಿ ಸಲ್ಲಿಸುವಂತೆ ಮೂವರು ಸದಸ್ಯರ ಸಮಿತಿಗೆ ಸೂಚಿಸಿತ್ತು. ಡಾ. ಅಶೋಕ್ ಗುಲಾಟಿ, ಡಾ. ಪ್ರಮೋದ್ ಜೋಶಿ ಹಾಗೂ ಶೆಟ್ಕರಿ ಸಂಘಟನೆಯ ಅನಿಲ್ ಘನವತ್ ಅವರನ್ನು ಸಮಿತಿ ಒಳಗೊಂಡಿತ್ತು.

ಕೇಂದ್ರ ಪರಿಚಯಿಸಿದ್ದ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ಕಳೆದ ನವೆಂಬರ್ 26 ರಿಂದಲೂ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪಂಜಾಬ್, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶದ ರೈತರು ಹೋರಾಟದಲ್ಲಿ ಭಾಗಿಯಾಗಿದ್ದಾರೆ.












Click it and Unblock the Notifications