ಉತ್ತರ ಪ್ರದೇಶ; ಲಖಿಂಪುರ ಖೇರಿಯ ರೈತರ ಮಾರಣಹೋಮಕ್ಕೆ ವ್ಯಾಪಕ ಖಂಡನೆ
ಲಖ್ನೋ, ಅಕ್ಟೋಬರ್ 04: ಭಾನುವಾರ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದಿರುವ ರೈತರ ಮೇಲಿನ ದಾಳಿ ಮತ್ತು ಮಾರಣಹೋಮಕ್ಕೆ ಕಾರಣರಾದ ಕೇಂದ್ರ ಸಚಿವ ಅಜಯ್ ಮಿಶ್ರಾ ತೆನಿ ಮತ್ತು ಈ ಘಟನೆಯ ವಿಚಾರದಲ್ಲಿ ನಿರ್ಲಕ್ಷ್ಯ ಮತ್ತು ಕರ್ತವ್ಯ ಲೋಪ ಎಸಗಿರುವ ಉತ್ತರ ಪ್ರದೇಶ ಸರ್ಕಾರದ ಮೇಲೆ ರಾಷ್ಟ್ರಪತಿಗಳು ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಸಂಯುಕ್ತ ಹೋರಾಟ-ಕರ್ನಾಟಕ ಪತ್ರ ಬರೆದಿದೆ. ಈ ಘಟನೆಯನ್ನು ಸಂಯುಕ್ತ ಹೋರಾಟ ತೀವ್ರವಾಗಿ ಖಂಡಿಸಿದೆ.
ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಮಿಶ್ರಾ ತೆನಿ ಅವರ ಬೆಂಗಾವಲು ವಾಹನ ಹರಿಸಿ ರೈತರನ್ನು ಹತ್ಯೆಗೈದು ಹಲವಾರು ರೈತರಿಗೆ ಗಂಭೀರ ಸ್ವರೂಪದ ಗಾಯಗಳಾಗಿರುವುದಕ್ಕೆ ಕಾರಣರಾದದ್ದು ಅತ್ಯಂತ ಘೋರ ಹಾಗೂ ಅಮಾನವೀಯ ಕೃತ್ಯ. ಇಂಥ ದುಷ್ಕೃತ್ಯ ಹಿಂದೆಂದೂ ನಡೆದಿರಲಿಲ್ಲ. ಈ ಕೃತ್ಯಕ್ಕೆ ಕಾರಣರಾದ ಸಚಿವರ ಮೇಲೆ ಮತ್ತು ಅವರ ಬೆಂಗಾವಲು ಪಡೆ ಮೇಲೆ ಉತ್ತರ ಪ್ರದೇಶ ಸರ್ಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಆಗ್ರಹಿಸುವುದಾಗಿ ಸಂಯುಕ್ತ ಹೋರಾಟ ತಿಳಿಸಿದೆ.
ಈ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಒಟ್ಟು ಎಂಟು ಮಂದಿ ಸಾವನ್ನಪ್ಪಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.

ಸಚಿವ ಅಜಯ್ ಮಿಶ್ರಾ ತೆನಿ ಈಚೆಗೆ ರೈತರ ಪ್ರತಿಭಟನೆಯ ಕುರಿತು ಕಟುವಾದ ಹೇಳಿಕೆ ನೀಡಿದ್ದಲ್ಲದೆ ಪ್ರತಿಭಟಿಸುವವರ ಮೇಲೆ ಕ್ರಮ ಕೈಗೊಳ್ಳುವ ಬಹಿರಂಗ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಅವರ ತವರು ಕ್ಷೇತ್ರವಾದ ಲಖಿಂಪುರ ಖೇರಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ರೈತರು ಸಚಿವರ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದರು. ಇದೇ ಸಂದರ್ಭ ರಸ್ತಾ ರೋಖೋ ನಡೆಸುತ್ತಿದ್ದ ರೈತರ ಮೇಲೆ ಬೆಂಗಾವಲು ವಾಹನ ಹರಿಸುವ ಮೂಲಕ ತಮ್ಮ ಬೆದರಿಕೆಯನ್ನು ಸಚಿವರು ಸತ್ಯಮಾಡಿದ್ದಾರೆ. ಈ ಕೃತ್ಯ ಭಾರತದ ನಾಗರೀಕರಿಗೆ ಸಂವಿಧಾನ ಕೊಡಮಾಡಿರುವ ಪ್ರತಿಭಟನೆಯ ಹಕ್ಕಿನ ಉಲ್ಲಂಘನೆಯಾಗಿದೆ.
ಇಂಥದೊಂದು ಘೋರ ಘಟನೆ ನಡೆದಾಗ್ಯೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಸ್ವಾಮಿ ಆದಿತ್ಯನಾಥ್ ಅಥವಾ ಯಾವುದೇ ಉನ್ನತಾಧಿಕಾರಿಗಳು ಜವಾಬ್ದಾರಿಯುತ ವರ್ತನೆ ತೋರಿಲ್ಲ. ಗಾಯಗೊಂಡ ರೈತರನ್ನು ಮತ್ತು ಅವರ ಕುಟುಂಬದವರನ್ನು ಸಂಪರ್ಕಿಸುವುದಾಗಲೀ, ಘಟನೆಗೆ ಕಾರಣರಾದವರ ಮೇಲೆ ಕ್ರಮ ಜರುಗಿಸುವ ಭರವಸೆಯನ್ನಾಗಲಿ ನೀಡಿಲ್ಲ. ಇದು ಹಾಡಹಗಲೇ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿರುವ ಸ್ಪಷ್ಟ ಸೂಚನೆ. ಇಂತಹ ಗಂಭೀರ ಪ್ರಕರಣದ ಸಂದರ್ಭ ದೇಶದ ಅತ್ಯುನ್ನತ ಸ್ಥಾನದಲ್ಲಿರುವ ರಾಷ್ಟ್ರಪತಿಗಳು ಕೂಡ ಮಧ್ಯ ಪ್ರವೇಶಿಸಬೇಕಿರುವುದು ದೇಶದ ಶಾಂತಿ ಮತ್ತು ಸುವ್ಯವಸ್ಥೆ ದೃಷ್ಟಿಯಿಂದ ತುರ್ತು ಅಗತ್ಯವಾಗಿದೆ. ಆದ್ದರಿಂದ ಸಂಯುಕ್ತ ಹೋರಾಟ- ಕರ್ನಾಟಕ ಈ ಪ್ರತಿಭಟನೆಯ ಮೂಲಕ ಇಂಥ ಗಂಭೀರ ಕೃತ್ಯಕ್ಕೆ ತನ್ನ ವಿರೋಧ ದಾಖಲಿಸುತ್ತಿದೆ.

ಈ ಹಕ್ಕೊತ್ತಾಯ ಪತ್ರದ ಮೂಲಕ ಕೇಂದ್ರ ಸರ್ಕಾರ ಮತ್ತು ರಾಷ್ಟ್ರಪತಿ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ ಉತ್ತರ ಪ್ರದೇಶ ಸರ್ಕಾರ ಮತ್ತು ಇದಕ್ಕೆ ಕಾರಣರಾದ ಸಚಿವರ ಮೇಲೆ ಕೂಡಲೇ ಕ್ರಮ ಕೈಗೊಳ್ಳುವ ಭರವಸೆ ನೀಡಬೇಕೆಂದು ಆಗ್ರಹಿಸುತ್ತೇವೆ. ಈ ಘಟನೆಯನ್ನು ಕರ್ನಾಟಕ ಸರ್ಕಾರವೂ ಖಂಡಿಸಿ ಉತ್ತರ ಪ್ರದೇಶ ಸರ್ಕಾರಕ್ಕೆ ಖಂಡನಾ ಪತ್ರ ಬರೆಯಬೇಕೆಂದು ಒತ್ತಾಯಿಸುತ್ತೇವೆ ಎಂದಿದೆ.
ರೈತರ ನ್ಯಾಯಯುತ ಹಕ್ಕೊತ್ತಾಯವನ್ನು ಪರಿಗಣಿಸಿ ಭಾರತದ ಕೃಷಿಗೆ ಮಾರಣಾಂತಿಕವಾಗಿರುವ ಮೂರು ಕೃಷಿ ಕಾಯಿದೆಗಳನ್ನು ಹಿಂಪಡೆದು ಒಂದು ವರ್ಷದಿಂದ ಬೀದಿಗಿಳಿದು ಹೋರಾಟ ಮಾಡುತ್ತಿರುವ ರೈತರನ್ನು ಅವರ ದಿನನಿತ್ಯದ ಬದುಕಿಗೆ ಮರಳಿ ಕಳುಹಿಸುವ ಬದಲು ಅವರನ್ನು ಮಾರಣ ಹೋಮ ಮಾಡುತ್ತಿರುವ ಸರ್ಕಾರಗಳ ನೀತಿಯನ್ನು ಪ್ರತಿಭಟಿಸಬೇಕೆಂದು ಸಾರ್ವಜನಿಕರಲ್ಲಿ ಸಂಯುಕ್ತ ಹೋರಾಟ ಮನವಿ ಮಾಡಿದೆ.












Click it and Unblock the Notifications