ಜಮೀನುಗಳಲ್ಲಿ ಸೈನಿಕ ಹುಳು ಕಾಟ, ಹತೋಟಿಗೆ ಸಲಹೆಗಳು
ಧಾರವಾಡ, ಆಗಸ್ಟ್ 18: ರೈತರು ಸದಾ ಒಂದಿಲ್ಲೊಂದು ಕೀಟ ಬಾಧೆಯನ್ನು ಜಮೀನುಗಳಲ್ಲಿ ಎದುರಿಸುತ್ತಿರುತ್ತಾರೆ. ಧಾರವಾಡ ಜಿಲ್ಲೆಯ ಕಲಘಟಗಿ ಹಾಗೂ ಅಳ್ನಾವರ ತಾಲೂಕಿನ ಅರಣ್ಯ, ಗುಡ್ಡಗಾಡಿನ ಸುತ್ತಮುತ್ತಲಿನ ಜಮೀನುಗಳಲ್ಲಿ ಬೆಳೆದಂತಹ ಬೆಳೆಗಳಲ್ಲಿ ಸೈನಿಕ ಹುಳುವಿನ ಭಾದೆ ಕಂಡುಬರುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಬೆಳೆಗಳಲ್ಲಿ ಸೈನಿಕ ಹುಳುವಿನ ಬಾಧೆ ಕಂಡು ಬಂದರೆ ಅದರ ಹಾನಿಯ ಪ್ರಮಾಣ ತೀವ್ರವಾಗಿರುತ್ತದೆ ಎಂದು ತಿಳಿಸಲಾಗಿದೆ. ಆದ್ದರಿಂದ ಸೈನಿಕ ಹುಳು ಕೀಟದ ಹತೋಟಿ ಅಗತ್ಯವಿದೆ ಎಂದು ರೈತರಿಗೆ ಮಾಹಿತಿ ನೀಡಲಾಗಿದೆ. ರೈತರು ಜಮೀನುಗಳಲ್ಲಿ ಹಾನಿಯ ಲಕ್ಷಣಗಳನ್ನು ಗಮನಿಸಿ, ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕೆಂದು ಸಲಹೆಗಳನ್ನು ನೀಡಲಾಗಿದೆ.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಕಿರಣ ಕುಮಾರ ಬೆಳೆಗಳಲ್ಲಿ ಸೈನಿಕ ಹುಳು ಕೀಟದ ಹತೋಟಿಗೆ ರೈತರಿಗೆ ಸಲಹೆಗಳನ್ನು ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೈನಿಕ ಹುಳು ಹತೋಟಿಗೆ ಸಲಹೆಗಳು; ಈ ಹುಳುಗಳು ಹಗಲು ಹೊತ್ತಿನಲ್ಲಿ ಸುಳಿಯಲ್ಲಿ ಅಡಗಿಕೊಂಡು ರಾತ್ರಿ ಎಲೆಗಳನ್ನು ತೀವ್ರಗತಿಯಲ್ಲಿ ತಿಂದು ಹಾನಿ ಮಾಡುತ್ತದೆ. ಇವುಗಳ ಸಂಖ್ಯೆ ಹೆಚ್ಚಾದಾಗ ಹಾನಿಯ ಪ್ರಮಾಣವು ಹೆಚ್ಚುತ್ತದೆ. ಎಲೆಯ ಮಧ್ಯ ನರವೊಂದನ್ನು ಬಿಟ್ಟು ಉಳಿದೆಲ್ಲ ಭಾಗವನ್ನು ತಿಂದು ಹಾಕುತ್ತದೆ.
ಈ ಹುಳುವಿನ ನಿಯಂತ್ರಣಕ್ಕಾಗಿ ಕಳಿತ ವಿಷಪಾಷಾಣ ಬಳಕೆ ಮಾಡಬೇಕು. 5-8 ಲೀಟರ್ ನೀರಿನಲ್ಲಿ 250 ಮಿ. ಲೀ ಮೊನೊಕ್ರೋಟೊಫಾನ್ 36 ಎಮ್.ಎಲ್ ಕೀಟನಾಶಕವನ್ನು 4 ಕಿ.ಗ್ರಾಂ ಬೆಲ್ಲದೊಂದಿಗೆ ಬೆರೆಸಿ 50 ಕಿ.ಗ್ರಾಂ ಅಕ್ಕಿ ಅಥವಾ ಗೋಧಿ ತೌಡಿನಲ್ಲಿ ಸರಿಯಾಗಿ ಕೂಡಿಸಿ, ನಂತರ 2 ದಿನಗಳವರೆಗೆ ಪ್ಲಾಸ್ಟಿಕ್ ಚೀಲದಲ್ಲಿ ಕಳೆಯಲು ಬಿಡಬೇಕು.
ಸಾಯಂಕಾಲದ ಸಮಯದಲ್ಲಿ ಎಕರೆಗೆ 20 ಕಿ. ಗ್ರಾಂ ಪ್ರಮಾಣದಲ್ಲಿ ವಿಷಪಾಷಾಣವನ್ನು ಸುಳಿ ಮತ್ತು ಎಲೆಗಳ ಮೇಲೆ ಬೀಳುವಂತೆ ಎರಚಬೇಕು. ಹುಳುಗಳು ವಿಷಪಾಷಾಣಕ್ಕೆ ಆಕರ್ಷಿತಗೊಂಡು ತಿಂದು ಸಾಯುತ್ತವೆ ಎಂದು ಸಲಹೆ ನೀಡಲಾಗಿದೆ.












Click it and Unblock the Notifications