ಹಿಂಗಾರು ಬೆಳೆಗಳಿಗೆ ಸೈನಿಕ ಹುಳುವಿನ ಕಾಟ, ರೈತರಿಗೆ ಸಲಹೆಗಳು
ಬೆಂಗಳೂರು, ನವೆಂಬರ್ 28; ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆ ಕಾರಣ ರೈತರು ಬೆಳೆ ನಷ್ಟ ಅನುಭವಿಸಿದ್ದರು. ಆದರೆ ಹಿಂಗಾರು ಹಂಗಾಮಿನಲ್ಲಿನ ಬೆಳೆಗಳಿಗೆ ಸೈನಿಕ ಹುಳುವಿನ ಬಾಧೆ ಕಂಡುಬಂದಿದೆ. ಇದರಿಂದಾಗಿ ಬೆಳೆ ಹಾನಿಯಾಗುತ್ತಿದೆ.
ಧಾರವಾಡ ಜಿಲ್ಲೆಯಲ್ಲಿ 2023-24ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಏಕದಳ ಧಾನ್ಯ 33,463 ಹೆಕ್ಟೇರ್, (ಜೋಳ 21720 ಹೆಕ್ಟೇರ್) ಪ್ರದೇಶಗಳಲ್ಲಿ ಬಿತ್ತನೆಯಾಗಿದ್ದು, ಗೋ.ಜೋಳ, ಜೋಳ ಬೆಳೆಗಳಲ್ಲಿ ಫಾಲ್ ಸೈನಿಕ ಹುಳುವಿನ ಭಾದೆ ಕಂಡುಬಂದಿದೆ.

ಈ ಹುಳದ ಹಾನಿಯ ಪ್ರಮಾಣ ತೀವ್ರವಾಗಿರುತ್ತದೆ. ಆದ ಕಾರಣ ಈ ಕೀಟದ ಹತೋಟಿ ಅಗತ್ಯವಿರುವುದರಿಂದ ರೈತರು ಹಾನಿ ಲಕ್ಷಣಗಳನ್ನು ಗಮನಿಸಿ ನಿರ್ವಹಣಾ ಕ್ರಮಗಳನ್ನು ಅನುಸರಿಸಬೇಕು ಎಂದು ಕರೆ ನೀಡಲಾಗಿದೆ. ನಿರ್ವಹಣಾ ಕ್ರಮಗಳನ್ನು ಸಹ ಸೂಚಿಸಲಾಗಿದೆ.
ಹಾನಿಯ ಲಕ್ಷಣಗಳು ಗುರುತಿಸುವುದು ಹೇಗೆ?
ಕೀಟಗಳು ಪ್ರಮುಖವಾಗಿ ಎಲೆಗಳನ್ನು ಸೇವಿಸುತ್ತವೆ. ಸಣ್ಣ ಕೀಟಗಳು ಆರಂಭದಲ್ಲಿ ಎಲೆಯ ಅಂಗಾಂಶವನ್ನು ಒಂದು ಬದಿಯಿಂದ ಕೊರೆದು ತಿನ್ನುತ್ತವೆ. ಪ್ರಥಮ ಹಂತದ ಮರಿ ಹುಳುಗಳು ಸಾಮೂಹಿಕವಾಗಿದ್ದು ಎಲೆಯ ಹರಿತ್ತನ್ನು ಕೊರೆದು ತಿನ್ನುವುದರಿಂದ ಎಲೆಗಳ ಮೇಲೆ ಪಾರದರ್ಶಕವಾದ ಪದರಿನ ಕಿಂಡಿಗಳನ್ನು ಕಾಣಬಹುದು.
2ನೇ ಮತ್ತು 3ನೇ ಹಂತದ ಕೀಟಗಳು ಸುಳಿಯಲ್ಲಿರುವ ಎಲೆಗಳಲ್ಲಿ ರಂಧ್ರಗಳನ್ನು ಮಾಡುತ್ತವೆ. ಕೀಟದ ಬಾಧೆಯು ತೀವ್ರವಾದಲ್ಲಿ ಸುಳಿಯನ್ನೇ ತಿಂದು ಅಧಿಕ ಪ್ರಮಾಣದಲ್ಲಿ ಹಿಕ್ಕೆಗಳನ್ನು ಹಾಕುತ್ತವೆ. ಒಣಗಿದ ಈ ಹಿಕ್ಕೆಗಳು ತೌಡನ್ನು ಹೋಲುವುದರಿಂದ ಗಿಡದ ಮೇಲೆಲ್ಲಾ ತೌಡು ಬಿದ್ದಿರುವಂತೆ ಕಾಣಿಸುತ್ತದೆ.
ಗೋವಿನಜೋಳ, ಜೋಳದಲ್ಲಿ ಚುಕ್ಕೆ ಲದ್ದಿ ಹುಳುವಿನ ಬಾಧೆ ಕಂಡುಬಂದಲ್ಲಿ ಪ್ರತಿ ಲೀಟರ್ ನೀರಿಗೆ 1 ಗ್ರಾಂ. ನ್ಯುಮೋರಿಯಾ ರಿಲೈ ಜೈವಿಕ ಪೀಡೆನಾಶಕವನ್ನು ಬೆರೆಸಿ ಸುಳಿಗೆ ಬೀಳುವಂತೆ ಸಿಂಪಡಿಸಬೇಕು ಅಥವಾ 0.2 ಗ್ರಾಂ. ಇಮಾಮೆಕ್ಟಿನ್ ಬೆಂಝಯೇಟ್ 5 ಎಸ್.ಜಿ ಅಥವಾ 0.2 ಮಿ.ಲೀ. ಸ್ಟೈನೋಸ್ಯಾಡ್ 45 ಎಸ್.ಸಿ ಅಥವಾ 0.5 ಮಿ.ಲೀ. ಸೈನೊಟೊರಾಮ್ 12 ಎಸ್.ಸಿ ಅಥವಾ 0.2 ಮಿ.ಲೀ. ಕ್ಲೋರಾಂಟ್ರಿನಿಲಿಪೆÇ್ರೀಲ್ 18.5 ಎಸ್.ಸಿ ಯನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸುಳಿಯಲ್ಲಿ ಬೀಳುವಂತೆ ಸಿಂಪರಣೆ ಮಾಡಬೇಕು.
ರೈತರು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೆಂದ್ರವನ್ನು ಸಂಪರ್ಕಿಸಬಹುದೆಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ನೈಋತ್ಯ ಮುಂಗಾರು ಮಳೆ ವಿಫಲವಾಗಿದೆ. ಹಿಂಗಾರು ಬಿತ್ತನೆ, ಬೆಳೆಗಳು ಅಷ್ಟು ಹಿತಕರವಾಗಿಲ್ಲ. ರೈತರಿಗೆ, ಗ್ರಾಮೀಣ ಜನರಿಗೆ ಬರಗಾಲ ಬಹಳಷ್ಟು ಹಾನಿ ಮಾಡಿದೆ. ಇಂತಹ ಸಂದರ್ಭದಲ್ಲಿ ಸರ್ಕಾರದ ಯೋಜನೆಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಮತ್ತು ಕೂಲಿ ಕಾರ್ಮಿಕರಿಗೆ, ರೈತರಿಗೆ ಅವರಿದ್ದಲ್ಲಿಯೇ ನರೇಗಾ ಯೋಜನೆಯ ಮೂಲಕ ಉದ್ಯೋಗ ಕಲ್ಪಿಸಬೇಕಾಗಿದೆ ಎಂದು ಒತ್ತಾಯಿಸಲಾಗುತ್ತಿದೆ.












Click it and Unblock the Notifications