ಏಕದಳ ಧಾನ್ಯ ಬೆಳೆಗೆ ಹೊಸ ಕೀಟ ಪೀಡೆ; ಹತೋಟಿಗೆ ರೈತರಿಗೆ ಸಲಹೆಗಳು
ಬೆಂಗಳೂರು, ಆಗಸ್ಟ್ 02; ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿದೆ. ಮಳೆಯ ಪರಿಣಾಮ ಏಕದಳ ಧಾನ್ಯ ಬೆಳೆಯಲ್ಲಿ ಹಲವು ಕೀಟ ಬಾಧೆಗಳು ಕಂಡು ಬಂದಿವೆ. ಕೆಲವು ಕೀಟಗಳು ಬೆಳೆಗಳಿಗೆ ಕಂಟಕಪ್ರಾಯವಾಗುವ ಸಾಧ್ಯತೆ ಇದೆ. ಆದ್ದರಿಂದ ಕೃಷಿ ಇಲಾಖೆ ರೈತರಿಗೆ ಕೀಟ ಹತೋಟಿಗೆ ಸಲಹೆಗಳನ್ನು ನೀಡಿದೆ.
ಏಕದಳ ಧಾನ್ಯ ಬೆಳೆಗೆ ಕಂಟಕವಾಗಬಹುದಾದ ಹೊಸ ಕೀಟ ಪೀಡೆ, ಸೈನಿಕ ಹುಳುವಿನ ನಿರ್ವಹಣಾ ಕ್ರಮಗಳನ್ನು ರೈತರು ಸಾಮೂಹಿಕವಾಗಿ ಕೈಗೊಳ್ಳಬೇಕು ಎಂದು ಕೃಷಿ ಇಲಾಖೆ ಸಲಹೆ ಮಾಡಿದೆ. ಕೊಪ್ಪಳದ ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ. ಎಸ್. ಹತೋಟಿ ಕ್ರಮಗಳನ್ನು ತಿಳಿಸಿದ್ದಾರೆ.

ರೈತರಿಗೆ ಸಲಹೆಗಳು; ಮುಂಗಾರು ಹಂಗಾಮಿನಲ್ಲಿ ತಡವಾಗಿ ಬಿತ್ತನೆ ಮಾಡಿದ ಮೆಕ್ಕೆಜೋಳದ ಮೇಲೆ ಹೊಸಕೀಟ ಒಂದು ಕಾಣಿಸಿಕೊಂಡಿತ್ತು. ಈ ಕೀಟವನ್ನು ವಿಜ್ಞಾನಿಗಳು ಫಾಲ್ ಆರ್ಮಿವಾರ್ಮ್ ಎಂದು ವೈಜ್ಞಾನಿಕವಾಗಿ 'ಸ್ಪೋಡಾಪ್ಟೆರಾ ಫ್ರುಗಿಫರ್ಡಾ' ಎಂದು ಹೆಸರಿಸಿದ್ದಾರೆ.
ಮುಂಗಾರಿನಲ್ಲಿ ಈ ಕೀಟದ ಬಾಧೆಯೂ ಇತರೆ ಏಕದಳ ದಾನ್ಯ ಬೆಳೆಗೆ ಕಂಟಕವಾಗುವ ಸಾಧ್ಯೆತೆ ಇರುತ್ತದೆ. ಕಾರಣ ರೈತರು ಸಾಮೂಹಿಕ ಹತೋಟಿ ಕ್ರಮ ಕೈಗೊಳ್ಳಲು ಸಲಹೆಗಳನ್ನು ಕೊಡಲಾಗಿದೆ.
ಈ ಕೀಟವು ಕಂದು ಬಣ್ಣದ ಪತಂಗವಾಗಿದ್ದು ರೆಕ್ಕೆಯ ಅಂಚಿನಲ್ಲಿ ಬಿಳಿಯ ಪಟ್ಟಿಗಳನ್ನು ಹೊಂದಿರುತ್ತದೆ. ಕೀಟದ ಜೀವನ ಚಕ್ರವು 30 ರಿಂದ 40 ದಿನಗಳನ್ನು ಹೊಂದಿದ್ದು ಸಾಧಾರಣವಾಗಿ ಸುಮಾರು ಸಾವಿರ ಮೊಟ್ಟೆಗಳನ್ನು ಇಡುವ, ಸುಮಾರು 50 ರಿಂದ 100 ಕಿ. ಮೀ. ವರಗೆ ವಲಸೆ ಹೋಗುವ ಶಕ್ತಿ ಹೊಂದಿದೆ.
ಈ ಕೀಟವು ತರಕಾರಿ ಬೆಳೆಗಳು, ಭತ್ತ, ಕಬ್ಬು, ಹತ್ತಿ ಹಾಗೂ ಜೋಳದ ಬೆಳೆಗಳ ಮೇಲೂ ದಾಳಿ ಮಾಡುವ ಸಾಧ್ಯತೆ ಇದ್ದು, ಶೇ. 40 ರಿಂದ 70 ರಷ್ಟು ಬೆಳೆ ಹಾನಿ ಸಾಧ್ಯತೆ ಇರುತ್ತದೆ. ಪ್ರೌಢ ಪತಂಗವು ಮೊಟ್ಟೆಗಳನ್ನು ಗುಂಪಾಗಿ ಇಡುವುದರಿಂದ ಮೊಟ್ಟೆ ಹಾಗು ಮರಿ ಹುಳುಗಳನ್ನು ಆರಿಸಿ ತೆಗೆಯಬೇಕು. ಮರಿಹುಳು ಕಂಡ ತಕ್ಷಣ ಶೇ.5ರ ಬೇವಿನ ಬೀಜದ ಕಷಾಯವನ್ನು ಸಿಂಪಡಿಸಬೇಕು. ನ್ಯುಮೋರಿಯಾ ರಿಲೇ ಜೈವಿಕ ಕೀಟನಾಶಕವನ್ನು 2 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಇಮಾಮೆಕ್ಟಿನ್ ಬೆಂಜೋಯೇಟ್ ಶೇ.5ರಷ್ಟು ಎಸ್.ಜಿ 0.4ಗ್ರಾಂ ಅಥವಾ ಸ್ಪೈನೋಸೈಡ್ 45 ಎಸ್.ಸಿ 0.3 ಮಿ. ಲೀ. ಪ್ರತಿ ಲೀಟರ್ ನೀರಿಗೆ ಮಿಶ್ರಣ ಮಾಡಿ ಸಿಂಪಡಿಸಬೇಕು. ಬೆಳೆದ ಹುಳುಗಳನ್ನು ಹತೋಟಿಯಲ್ಲಿಡಲು ವಿಷಪಾಶಾಣದ ಬಳಕೆ ಮಾಡಬೇಕು. 10 ಕೆ.ಜಿ ತೌಡು, 5 ಕೆ.ಜಿ. ಬೆಲ್ಲ, 4 ರಿಂದ 5 ಲೀಟರ್ ನೀರು ಕಲೆಸಿಟ್ಟು ಮಾರನೆ ದಿನ 100 ಗ್ರಾಂ ಥಯೋಡಿಕಾರ್ಬ್ (ಪ್ರತಿ ಕೆಜಿ ಭತ್ತದ ತೌಡಿಗೆ 10ಗ್ರಾಂ ನಂತೆ) ಕೀಟನಾಶಕ ಮಿಶ್ರಣಮಾಡಿ ಸಂಜೆ 5 ಗಂಟೆಯ ನಂತರ ಬೆಳೆಯ ಸುಳಿಯಲ್ಲಿ ಹಾಕಬೇಕು ಕೀಟನಾಶಕ ಮತ್ತು ವಿಷಪಾಶಾಣವನ್ನು ಸುಳಿಯಲ್ಲಿ ನೀಡಬೇಕು. ವಿಷಪಾಶಾಣ ನೀಡಿದ ಮೆಕ್ಕೆಜೋಳದ ತಾಕಿನಲ್ಲಿ ಜಾನುವಾರುಗಳನ್ನು ಮೇಯಲು ಬಿಡಬಾರದು.
ಈ ಕೀಟ ನಿಯಂತ್ರಣಕ್ಕೆ ಬೇಕಾದ ಔಷಧಿಗಳನ್ನು ರೈತರು ಸಮೀಪದ ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ವಿಜ್ಞಾನ ಕೇಂದ್ರಗಳ ಮುಖ್ಯಸ್ಥರನ್ನು ಸಂಪರ್ಕಿಸಬಹುದು.












Click it and Unblock the Notifications