ಕೃಷಿಯಲ್ಲಿ ಖುಷಿ ಕಾಣುವ ರುದ್ರೇಶ್ವರ ಸ್ವಾಮೀಜಿ
ದಾವಣಗೆರೆ, ಜುಲೈ 22: ಕೃಷಿಯಿಂದ ರೈತರೇ ದೂರ ಸರಿಯುತ್ತಿರುವ ಈ ಸಂದರ್ಭದಲ್ಲಿ, ಸ್ವಾಮೀಜಿಗಳ ಈ ಕೃಷಿ ಪ್ರೀತಿ ಕಂಡರೆ ಅಚ್ಚರಿಯೊಂದಿಗೆ ಸಂತಸವೂ ಆಗುತ್ತದೆ.
ದಾವಣಗೆರೆಯ ಹೆಬ್ಬಾಳು ಗ್ರಾಮದ ವಿರಕ್ತ ಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿಗಳಿಗೆ ಕೃಷಿ ಮೇಲೆ ಎಲ್ಲಿಲ್ಲದ ಒಲವು. ಕಾಯಕವೇ ಕೈಲಾಸ ಎಂಬುದೇ ಅವರ ನಿಲುವು. ಹಾಗಾಗಿ ಮಠದ ಕೆಲಸಗಳ ಜೊತೆ ಜೊತೆಗೆ ತಾವೇ ಜಮೀನಿಗೆ ಇಳಿದು ಕೃಷಿ ಕಾಯಕದಲ್ಲಿ ಸಂಪೂರ್ಣ ತೊಡಗಿಕೊಳ್ಳುತ್ತಾರೆ.
ಮಠದ 30 ಎಕರೆ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳದಲ್ಲಿ ಕಳೆ ಬೆಳೆದುಕೊಂಡಿದ್ದವು. ಸ್ವತಃ ಸ್ವಾಮೀಜಿಗಳೇ ಎಡೆಕುಂಟೆ ಹೊಡೆದು ಆ ಕಳೆಗಳನ್ನು ತೆಗೆದಿದ್ದಾರೆ. 15 ಎಕರೆಯಲ್ಲಿ ಅಡಿಕೆ ಬೆಳೆ ಬೆಳೆದಿದ್ದು, 5 ಎಕರೆಯಲ್ಲಿ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆದಿದ್ದಾರೆ.

ಇಷ್ಟೇ ಅಲ್ಲ, ಮರೆಯಾಗುತ್ತಿರುವ ಕೋರ್ಲಿ ಬೆಳೆ (ಭತ್ತದ ಜಾತಿಗೆ ಸೇರಿದ ಬೆಳೆ) ಯನ್ನು ಬೆಳೆಯುತ್ತಿದ್ದಾರೆ. ಸುತ್ತಮುತ್ತಲಿನ ರೈತರಿಗೂ ಅದನ್ನು ಬೆಳೆಯುವಂತೆ ಪ್ರೋತ್ಸಾಹ, ಮಾರ್ಗದರ್ಶನ ನೀಡುತ್ತಿದ್ದಾರೆ.
ಮಠಕ್ಕೆ ಸೇರಿದ ಒಟ್ಟು 50 ಎಕರೆ ಕೃಷಿ ಭೂಮಿಯಲ್ಲಿ ವಿವಿಧ ಬೆಳೆಗಳನ್ನು ಸ್ವತಃ ಸ್ವಾಮೀಜಿಯವರು ಬೆಳೆಯುತ್ತಿದ್ದಾರೆ. ಹಲವು ಕೃಷಿ ಪ್ರಯೋಗಗಳನ್ನೂ ಕೈಗೊಳ್ಳುತ್ತಾರೆ. ಕೃಷಿಯೊಂದೇ ಅಲ್ಲದೆ ಗೋವುಗಳನ್ನು ಸಂರಕ್ಷಿಸುವುದಕ್ಕಾಗಿ ಗೋ ಶಾಲೆ ಪ್ರಾರಂಭಿಸಿದ್ದಾರೆ. ಗೋ ಶಾಲೆಯಲ್ಲಿ 150ಕ್ಕೂ ಹೆಚ್ಚು ಹಸುಗಳು ಹಾಗೂ 30ಕ್ಕೂ ಹೆಚ್ಚು ಕರುಗಳು ಇವೆ.

ಇವೆಲ್ಲದರೊಂದಿಗೆ ಹಲವು ರೋಗಗಳಿಗೆ ಮದ್ದನ್ನೂ ನೀಡುತ್ತಾರೆ ಸ್ವಾಮೀಜಿ. ಪ್ರತಿನಿತ್ಯ ಭಕ್ತರಿಗೆ ಉಚಿತವಾಗಿ ನಾಟಿ ಔಷಧಿ ನೀಡುವುದೂ ಇವರ ಸೇವೆಗಳಲ್ಲಿ ಒಂದು.
1981ರಿಂದ ಮುರುಘಾ ಮಠದ ಶಾಖಾ ಮಠದ ಶ್ರೀಗಳಾಗಿದ್ದ ಮಹಾಂತ ಸ್ವಾಮೀಜಿಗಳು ಕಾವಿ ತೊಟ್ಟು, ಮಠದ ಕೆಲಸಗಳೊಂದಿಗೆ ಕೃಷಿಯನ್ನೂ ಮಾಡುತ್ತಾ ಇತರರಿಗೂ ಮಾದರಿಯಾಗಿದ್ದಾರೆ.












Click it and Unblock the Notifications