ಸಾಲ ಮನ್ನಾ ವಿಚಾರ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲೆಕ್ಷನ್ ಅಜೆಂಡಾ?
ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಮೇಲೆ ರೈತರ ಸಾಲ ಮನ್ನಾ ಮಾಡುವ ಬಗ್ಗೆ ಭಾರೀ ಒತ್ತಡವಿದೆ. ಬಿಜೆಪಿ, ಜೆಡಿಎಸ್ ಪಕ್ಷಗಳೂ ಅದೇ ಮಾದರಿಯಲ್ಲಿ ಹೆಜ್ಜೆ ಹಾಕಿ ರೈತರ ಸಾಲ ಮನ್ನಾ ವಿಚಾರವನ್ನೇ
ಬೆಂಗಳೂರು, ಜೂನ್ 14: ದಿನಗಳು ಸರಿಯುತ್ತಿವೆ. ರಾಜ್ಯ ವಿಧಾನಸಭೆ ಚುನಾವಣೆ ದಿನೇ ದಿನೇ ಹತ್ತಿರಕ್ಕೆ ಬರುತ್ತಿದೆ. ರಾಜ್ಯ ಹಾಗೂ ರಾಷ್ಟ್ರೀಯ ಪಕ್ಷಗಳಲ್ಲಿ ಈಗಾಗಲೇ ಚುನಾವಣೆ ಕಸರತ್ತುಗಳು ಗರಿಗೆದರುತ್ತಿವೆ.
ಯಾವುದೇ ರಾಜ್ಯವಾಗಲೀ ಪ್ರತಿಯೊಂದು ಬಾರಿ ಚುನಾವಣೆ ಎದುರಿಸಬೇಕಾದರೂ, ಆಯಾ ರಾಜಕೀಯ ಪಕ್ಷಗಳಿಗೆ ಯಾವುದೋ ಒಂದು ಅಜೆಂಡಾ ಸಿಕ್ಕುಬಿಡುತ್ತದೆ. ಸಿಗಲೇಬೇಕು. ಇಲ್ಲವಾದರೆ, ಮತ ಕೇಳಲು ಗಟ್ಟಿ ಧ್ವನಿಯಾದರೂ ಬರೋದು ಹೇಗೆ?
ಉದಾಹರಣೆಗೆ, ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕಪ್ಪುಹಣ ನಿರ್ಮೂಲನೆಯೇ ದೊಡ್ಡದೊಂದು ಅಜೆಂಡಾ ಆಗಿತ್ತು. ಹಾಗಾಗಿ, ಈಗ ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಲಿರುವ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಗೆ ಈಗ ದೇಶದೆಲ್ಲೆಡೆ ನಡೆಯುತ್ತಿರುವ ರೈತರ ಸಾಲ ಮನ್ನಾ ಕೂಗು ದೊಡ್ಡದಾಗಿ ಗೋಚರಿಸಲಿದ್ದು, ಮುಂದಿನ ಚುನಾವಣೆಗೆ ಅದೇ ತಮ್ಮ ಅಜೆಂಡಾ ಮಾಡಿಕೊಂಡರೂ ತಪ್ಪೇನಿಲ್ಲ.
ಈ ಬಗ್ಗೆ ಯಾವ್ಯಾವ ಪಕ್ಷದ ದೃಷ್ಟಿಕೋನ ಹೇಗಿದೆ ಎಂಬಿತ್ಯಾದಿ ಮಾಹಿತಿಗಳು ಇಲ್ಲಿ ನಿಮಗಾಗಿ....

ಮಹಾರಾಷ್ಟ್ರ, ಉತ್ತರ ಪ್ರದೇಶ ಸರ್ಕಾರ ಮಾದರಿಯಾಗಲಿವೆಯೇ?
ನಿಜ ಹೇಳಬೇಕೆಂದರೆ, ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರವು ರೈತರ ಸಾಲ ಮನ್ನಾ ವಿಚಾರದಲ್ಲಿ ಭಾರೀ ಒತ್ತಡದಲ್ಲಿದೆ. ಸುಮಾರು 50 ಸಾವಿರ ಕೋಟಿ ರು. ಸಾಲವಿದೆ. ಈಗಾಗಲೇ ಉತ್ತರ ಪ್ರದೇಶ ಸರ್ಕಾರ, ಮಹಾರಾಷ್ಟ್ರ ಸರ್ಕಾರಗಳು ಸಾಲ ಮನ್ನಾ ಮಾಡಿವೆ. ಅದೇ ಈಗ ಕರ್ನಾಟಕದ ಮೇಲೂ ಒತ್ತಡ ಹೇರಲು ಕಾರಣ.

ಯಡಿಯೂರಪ್ಪ ಪ್ರತಿಭಟನೆ
ಕರ್ನಾಟಕದಲ್ಲಿನ ರೈತರ ಪರಿಸ್ಥಿತಿಯನ್ನು ಚುನಾವಣೆಯ ದಾಳವಾಗಿಸಲು ಎಲ್ಲರಂತೆಯೇ ಬಿಜೆಪಿ ಕೂಡಾ ಹಾತೊರೆಯುತ್ತಿದೆ. ಇದಕ್ಕೆ ಪೂರಕವಾಗಿಯೇ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶೀಘ್ರದಲ್ಲೇ ರೈತರಿಗಾಗಿ ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದಾರೆ.

ಕೇಂದ್ರವನ್ನು ಕೇಳದ ಅವರು ರಾಜ್ಯದ ಮೇಲೆ ಒತ್ತಾಯ
ರೈತರ ಪರವಾಗಿ ಮಾತನಾಡುವ ಯಡಿಯೂರಪ್ಪ ಅವರಿಗೆ ಒತ್ತಡವಿದೆ. ರಾಜ್ಯದ ರೈತರು ಮಾಡಿರುವ ಸಾಲದಲ್ಲಿ ಶೇ. 80ರಷ್ಟಿರುವುದು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ. ಹಾಗಾಗಿ, ಸಾಲ ಮನ್ನಾ ಮಾಡಿ ಅಂತ ಅವರು ಕೇಂದ್ರದಲ್ಲಿರುವ ತಮ್ಮದೇ ಪಕ್ಷದ ಸರ್ಕಾರಕ್ಕೆ ಕೇಳುವಂತಿಲ್ಲ. ಏಕೆಂದರೆ, ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಈಗಾಗಲೇ ಸಾಲ ಮನ್ನಾದ ಮಾತೇ ಇಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದಾರೆ. ಹಾಗಾಗಿ, ಅಲ್ಲಿ ಅಸಹಾಯಕರಾಗಿರುವ ಯಡಿಯೂರಪ್ಪ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಮಾತ್ರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.

ಇಲ್ಲೂ ಅದೇ ಅಜೆಂಡಾ
ಇನ್ನು ಜೆಡಿಎಸ್ ಕಡೆಗೆ ನೋಡುವುದಾದರೆ, ಅದು ಮೊದಲಿನಿಂದಲೂ ರೈತರ ಪರವಾಗಿಯೇ ನಿಂತಿರುವ ಪಕ್ಷವೆಂದು ಹೆಸರು ಮಾಡಿದೆ. ಅಲ್ಲದೆ, ರೈತರ ಪರವಾಗಿ ನಿಲ್ಲುವ ಏಕೈಕ ಪಕ್ಷವೆಂಬ ಹೆಗ್ಗಳಿಕೆಯೂ ಅದರದ್ದು. ಪಕ್ಷದ ಧುರೀಣ ಎಚ್ ಡಿ ದೇವೇಗೌಡರು, ರೈತರ ಸಾಲ ಮನ್ನಾ ಮಾಡವಂತೆ ಕೇಂದ್ರವನ್ನು ದೂರುತ್ತಿದ್ದಾರೆ. ಅವರ ಪುತ್ರ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರ ಸ್ವಾಮಿ ಅವರು, ಇದೇ ವಿಚಾರದಲ್ಲಿ ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಹಾಗಾಗಿ, ಮುಂಬರುವ ಚುನಾವಣೆಗಳಲ್ಲಿ ಈ ಪಕ್ಷದ ಮುಖ್ಯ ಅಜೆಂಡಾವು ರೈತರ ಸಾಲ ಮನ್ನಾ ವಿಚಾರವೇ ಆಗಿದೆ ಎನ್ನಲಡ್ಡಿಯಿಲ್ಲ.

ಸಾಲ ಮನ್ನಾ ಆದರೆ ತತ್ತರಿಸುತ್ತಾರೆ ಜನ
ರಾಜ್ಯದಲ್ಲಿ ಚುನಾವಣೆಗೆ ಇನ್ನೊಂದು ವರ್ಷಕ್ಕಿಂತಲೂ ಕಡಿಮೆ ಅವಧಿಯಿದೆ. ಅಷ್ಟರಲ್ಲಿ ಸುಮಾರು 50 ಸಾವಿರ ಕೋಟಿ ರು. ಸಾಲ ಮನ್ನಾ ಮಾಡಲು ಕಾಂಗ್ರೆಸ್ ಸರ್ಕಾರಕ್ಕೆ ಸಾಧ್ಯವಿದೆ. ಏಕೆಂದರೆ, ಆ ಪಕ್ಷದ ಕೈಯ್ಯಲ್ಲಿ ಅಧಿಕಾರವಿದೆ. ಆದರೆ, ವಿಚಾರ ಅದಲ್ಲ. 50 ಸಾವಿರ ಕೋಟಿ ರು. ಸಾಲ ಮನ್ನಾ ಮಾಡಿದರೆ ರಾಜ್ಯದ ಬೊಕ್ಕಸಕ್ಕೆ ಬೀಳುವ ಹೊರೆಯನ್ನು ಹೇಗೆ ನಿಭಾಯಿಸುತ್ತದೆ ಸರ್ಕಾರ? ಇದೇ ಮುಂದಿನ ಪ್ರಶ್ನೆ. ಎಲ್ಲಾ ಅಗತ್ಯ ವಸ್ತುಗಳ ಬೆಲೆ, ಸೇವೆಗಳ ದರಗಳು ಹೆಚ್ಚಾಗಿ, ಈಗಾಗಲೇ ದುಸ್ತರವಾಗಿರುವ ರಾಜ್ಯದ ಮಧ್ಯಮ ವರ್ಗದ ಜನರ ಬದುಕನ್ನು ಮತ್ತಷ್ಟು ಹಾಳು ಮಾಡಲು ಮುಂದಾದಂತಾಗುತ್ತದೆ.












Click it and Unblock the Notifications