ಇನ್ಮುಂದೆ ತಳ್ಳುಗಾಡಿ ವ್ಯಾಪಾರಿಗಳು ಕೂಗುವಂತಿಲ್ಲ

ಗಮನಿಸಿ, ಯಾರೇ ಆಗಲಿ ಈ ಸಮಸ್ಯೆಯನ್ನು ಖಂಡಿತ ಅನುಭವಿಸಿರುತ್ತಾರೆ. ಅದರಲ್ಲೂ ರಾತ್ರಿ ಪಾಳಿಯಲ್ಲಿ ಕೆಲಸ ಮುಗಿಸಿ, ಮಧ್ಯರಾತ್ರಿ 2-3 ಗಂಟೆಗೆ ಮನೆ ವಾಪಸಾಗಿ ನಿದ್ದೆಗೆ ಜಾರುವುದೇ ಬೆಳಗಿನ ಜಾವದಲ್ಲಿ. ಆ ಸಮಯದಲ್ಲಿ ಇನ್ನೇನು ಗಾಢ ನಿದ್ರೆಗೆ ಜಾರಬೇಕು ಅನ್ನುವಷ್ಟರಲ್ಲಿ ಅವರ ಕಿವಿಗಳಿಗೆ ಕಾದ ಕಬ್ಬಿಣ ಸುರಿಯುವಂತೆ ಕರ್ಕಶ ಧ್ವನಿಯಲ್ಲಿ 'ಸೊಪ್ಪಮ್ಮೋ ಸೊಪ್ಪು' ಎಂದು ಈ ಗಾಡಿ ತರಕಾರಿಯವರು ಅಥವಾ ಸೈಕಲ್ ಮೇಲೆ ಬರುವವರು ಕೂಗುತ್ತಾ ಅಕ್ಷರಶಃ ಬಡಿದೆಬ್ಬಿಸುತ್ತಾರೆ. ಅಲ್ಲಿಗೆ ಅವರ ನಿದ್ದೆ ಅಂದಿಗೆ ಮುಗಿಯಿತು ಅಂತಲೆ.
ಇದು ಒಂದು ವರ್ಗದ ಅನುಭವವಾಯ್ತು. ಈ ತಳ್ಳುಗಾಡಿಯವರ ಆರ್ಭಟಕ್ಕೆ ತುತ್ತಾಗುವವರು ಇನ್ನೂ ಇದ್ದಾರೆ. ಜ್ವರವೋ/ ತಲೆನೋವೂ ಮತ್ಯಾವುದೋ ಅನಾರಾಗ್ಯವೋ ಕಾಡುತ್ತಿರುವವರು ಪ್ರಶಾಂತವಾಗಿ ಮನೆಯಲ್ಲಿರಲು ಆಗುವುದಿಲ್ಲ. ಆ ಪಾಟಿ ಇವರ ಕೂಗು ಕೇಳಿಬರುತ್ತಿರುತ್ತದೆ.
ಇದಕ್ಕೆಲ್ಲ ಈಗ ಕಡಿವಾಣ ಹಾಕುವ ಕಾಲ ಬಂದಿದೆ. ಮುಖ್ಯವಾಗಿ ಬೀದಿ ವ್ಯಾಪಾರಿಗಳು ಹಾಗೂ ತಳ್ಳುವ ಗಾಡಿ ವ್ಯಾಪಾರಿಗಳು ಕಡ್ಡಾಯವಾಗಿ ಗುರುತಿನ ಚೀಟಿ/ ಲೈಸೆನ್ಸ್ ಪಡೆಯಬೇಕು. ಇವರ ವ್ಯಾಪಾರಕ್ಕೆ ಬೆಳಗ್ಗೆ 7ರಿಂದ ರಾತ್ರಿ 10ರವರೆಗೆ ಕಾಲ ಮಿತಿ ನಿಗದಿ ಹಾಕಲಾಗಿದೆ. ಮೂರನೆಯದು ಬಾಯಿತಪ್ಪಿ ಜೋರಾಗಿ 'ಆಲೂಗಡ್ಡೆ, ಟೊಮ್ಯಾಟೋ, ಬದ್ನೆಕಾಯ್, ಹಳೆ ಪಾತ್ರ ಹಳೆ ಕಬ್ಬಿಣ, ಹಳೆ ಬಾಟ್ಲಿ ಹಳೆ ಪೇಪರ್ರು ಎಂದು ರಸ್ತೆಯಲ್ಲಿ ಜೋರಾಗಿ ಕೂಗುವಂತಿಲ್ಲ. ಮತ್ಯಾವುದೇ ರೀತಿಯ ಸದ್ದು ಸಹ ಮಾಡುವಂತಿಲ್ಲ.
ಅಂದಹಾಗೆ, 3 ವರ್ಷಗಳ ಹಿಂದೆಯೇ ಬೀದಿ ಬದಿ ವ್ಯಾಪಾರಿಗಳಿಗೆ ಹಾಗೂ ತಳ್ಳುವ ಗಾಡಿ ವ್ಯಾಪಾರಿಗಳಿಗೆ ನಿಬಂಧನೆಗಳನ್ನು ವಿಧಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು. ಅದರಂತೆ ಕರ್ನಾಟಕ ಪೌರಸಂಸ್ಥೆಗಳ ಕಾಯ್ದೆಯಡಿ 2010ರಲ್ಲಿ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಸ್ಥಳೀಯ ಪೌರಾಡಳಿತ ನಿರ್ದೇಶನಾಲಯವು ಈ ಸಂಬಂಧ ನೀತಿಯೊಂದನ್ನು ಜಾರಿಗೆ ತಂದಿತ್ತು. ಆದರೆ ಅದು ಪರಿಣಾಮಕಾರಿಯಾಗಿ ಜಾರಿಗೆ ಬಂದಿರಲಿಲ್ಲ ಅಷ್ಟೇ! ಈಗಲೂ ಅಷ್ಟೇ ಇದನ್ನು ಖಡಕ್ಕಾಗಿ ಅನುಷ್ಠಾಣಗೊಳಿಸುತ್ತಾರೆ ಎಂಬ ಭರವಸೆಯೇನೂ ಇಲ್ಲ.
ಆದರೂ ಭರವಸೆಯ ಮಾತುಗಳಲ್ಲಿ ಹೇಳಬೇಕೆಂದರೆ ರಸ್ತೆ ಬದಿಯ ವ್ಯಾಪಾರವನ್ನು ನಿಯಂತ್ರಿಸಲು ಉಪ ಕಂದಾಯಾಧಿಕಾರಿ, ಪೊಲೀಸ್ ಇನ್ಸ್ ಪೆಕ್ಟರ್, ರೆವಿನ್ಯೂ ಇನ್ಸ್ ಪೆಕ್ಟರ್, ಹೆಲ್ತ್ ಇನ್ಸ್ ಪೆಕ್ಟರ್, ಇಂಜಿನಿಯರ್, ಬೀದಿ ವ್ಯಾಪಾರಿಗಳ ಕಡೆಯಿಂದ ಇಬ್ಬರು ಪ್ರತಿನಿಧಿಗಳು, ಒಬ್ಬರು ಗಣ್ಯ ನಾಗರಿಕರನ್ನು ಒಳಗೊಂಡಂತೆ ಆಯಾ ವಾರ್ಡ್ ಹಾಗೂ ಪ್ರದೇಶವಾರು ಉಪ ಸಮಿತಿಗಳನ್ನು ರಚಿಸುವ ಮೂಲಕ ಈ ಬಾರಿ ಕಟ್ಟುನಿಟ್ಟಾಗಿ ಬೀದಿ ವ್ಯಾಪಾರಿಗಳಿಗೆ ಕಡಿವಾಣ ಬೀಳುವ ಸಾಧ್ಯತೆಗಳಿವೆ. (ಚಿತ್ರ ಕೃಪೆ)












Click it and Unblock the Notifications