ರಾಯಚೂರು ಜಿಲ್ಲೆಯಲ್ಲಿ ಅಕಾಲಿಕ ಮಳೆ; ಕುಸಿದ ಹತ್ತಿ ಬೆಳೆ ಇಳುವರಿ, ರೈತರಿಗೆ ಆತಂಕ
ರಾಯಚೂರು, ನವೆಂಬರ್, 07: ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಹತ್ತಿ ಬೆಳೆಯು ಭಾರಿ ಇಳುವರಿ ಕೊಡುವ ನಿರೀಕ್ಷೆ ಹುಟ್ಟಿಸಿತ್ತು. ಆದರೆ ಅಕಾಲಿಕ ಮಳೆಯಿಂದ ಜಿಲ್ಲೆಯ ಹತ್ತಿ ಬೆಳೆಗಾರರ ನಿರೀಕ್ಷೆ ನಿರಾಸೆಗೊಂಡಂತೆ ಆಗಿದೆ.
ಕಳೆದ ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತಲೂ ಹೆಚ್ಚಾಗಿ ಮಳೆ ಸುರಿದಿದೆ. ಅಕ್ಟೋಬರ್ನಲ್ಲಿ ವಾಡಿಕೆ ಮಳೆ ಪ್ರಮಾಣವು 117 ಮಿಲಿ ಮೀಟರ್ ಇತ್ತು. ವಾಸ್ತವದಲ್ಲಿ ಮಳೆ ಪ್ರಮಾಣ 126 ಮಿಲಿ ಮೀಟರ್ ಆಗಿದೆ. ರಾಯಚೂರು, ಮಾನ್ವಿ, ಸಿರವಾರ, ಮಸ್ಕಿ ತಾಲೂಕುಗಳ ಹೋಬಳಿಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದೆ. ಪರಿಣಾಮ ಹತ್ತಿ ಗಿಡಗಳು ಸಂಪೂರ್ಣವಾಗಿ ಜಲಾವೃತವಾಗಿದ್ದವು. ಅಕಾಲಿಕ ಮಳೆಯಿಂದ ಹಿಂಗಾರು ಹಂಗಾಮಿನ ಬಿತ್ತನೆಗೆ ಅನುಕೂಲವಾಯಿತು. ಆದರೆ ತುಂತುರು ಮಳೆಯು ಹತ್ತಿ, ತೊಗರಿ ಬೆಳೆಗಳ ಮೇಲೆ ದುಷ್ಪರಿಣಾಮ ಬೀರಿದೆ.
ಕಲಬುರಗಿಗೆ ತೊಗರಿ ಬೇಳೆ ಕಣಜ ಟ್ಯಾಗ್ ಕಳಚಿ ಬೀಳುವ ಆತಂಕ
2021ನೇ ಸಾಲಿನ ಸೆಪ್ಟೆಂಬರ್ ಆರಂಭದಿಂದಲೇ ಎಲ್ಲೆಡೆಯಲ್ಲೂ ಹತ್ತಿ ಕೊಯ್ಲು ಆರಂಭವಾಗಿತ್ತು. ರಾಯಚೂರಿನ ಎಪಿಎಂಸಿ ಹಾಗೂ ಜಿನ್ನಿಂಗ್ ಕಾರ್ಖಾನೆಗಳಲ್ಲಿ ಹತ್ತಿ ತುಂಬಿಸಿಕೊಂಡ ವಾಹನಗಳ ಸರದಿ ಕಾಣುತ್ತಿತ್ತು. ಈ ವರ್ಷ ನವೆಂಬರ್ ಆರಂಭದಿಂದ ಕೆಲವು ಕಡೆಗಳಲ್ಲಿ ಮಾತ್ರ ಹತ್ತಿ ಕೊಯ್ಲು ಪ್ರಾರಂಭವಾಗಿದೆ.
ಕೃಷಿ ಕಾರ್ಮಿಕರ ಕೊರತೆಯಿಂದಾಗಿ ಸರಿಯಾದ ಸಮಯಕ್ಕೆ ಹತ್ತಿ ಕೊಯ್ಲು ಮಾಡುವುದಕ್ಕೆ ರೈತರಿಗೆ ಸಾಧ್ಯವಾಗುತ್ತಿಲ್ಲ. 'ತುಂತುರು ಮಳೆಯಿಂದ ಹತ್ತಿ ಕಾಯಿಗಳು ಸರಿಯಾಗಿ ತೆರೆದುಕೊಂಡಿಲ್ಲ. ಹತ್ತಿ ಸ್ವಲ್ಪ ಕಪ್ಪಾಗಿದ್ದು, ಕಡಿಮೆ ದರಕ್ಕೆ ಮಾರಾಟ ಆಗುತ್ತಿದೆ. ಕಳೆದ ವರ್ಷ ಈ ಸಂದರ್ಭದಲ್ಲಿ ಮೊದಲನೇ ಇಳುವರಿ ಕೈ ಸೇರಿತ್ತು. ಆದರೆ ಈ ಬಾರಿ ಹತ್ತಿ ಬಿಡಿಸುವುದು ಕಡಿಮೆ ಇದ್ದರೂ ಮಾರುಕಟ್ಟೆಗೆ ತೆಗೆದುಕೊಂಡು ಬರುವುದಕ್ಕೆ ಸಾಧ್ಯವಾಗುತ್ತಿಲ್ಲ,' ಎಂದು ಗಬ್ಬೂರಿನ ರೈತ ವೆಂಕಟೇಶ್ ಅಳಲು ತೋಡಿಕೊಂಡರು.
ಭತ್ತದಲ್ಲಿ ಕಂದು ಜಿಗಿ ಹುಳುವಿನ ಬಾಧೆ: ನಿಯಂತ್ರಣಕ್ಕೆ ಕ್ರಮ
ಗಣನೀಯವಾಗಿ ಕೃಷಿ ವೆಚ್ಚ ಹೆಚ್ಚಳ
ಹತ್ತಿ ಬೆಳೆಯುವುದಕ್ಕೆ ರೈತರು ಪ್ರತಿ ಹೆಕ್ಟೇರ್ಗೆ ಮಾಡಿರುವ ಕೃಷಿ ವೆಚ್ಚವು ಈ ವರ್ಷ ಗಣನೀಯವಾಗಿ ಹೆಚ್ಚಾಗಿದೆ. ಬೀಜಗಳ ದರದಲ್ಲಿ ವ್ಯತ್ಯಾಸ ಇರಲಿಲ್ಲ. ಆದರೆ ರಾಸಾಯನಿಕ ಗೊಬ್ಬರದ ದರ ಮತ್ತು ಕೃಷಿ ಕೂಲಿ ಏರಿಕೆ ಆಗಿದೆ. ಸಿರವಾರ ತಾಲೂಕಿನಲ್ಲಿ ಈ ವರ್ಷ ಮುಂಗಾರಿನಲ್ಲಿ ಬೆಳೆದ ಹತ್ತಿ ಬೆಳೆಯ ಜೊತೆಗೆ ಇಳುವರಿಯೂ ಉತ್ತಮವಾಗಿದ್ದು, ಇದು ರೈತರಿಗೆ ಸಂತಸ ನೀಡಿದೆ. ಆದರೆ ರೈತರು ಕೂಲಿಕಾರರ ಕೊರತೆಯಿಂದಾಗಿ ಹತ್ತಿ ಬಿಡಿಸಲಾಗದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹತ್ತಿ ಬಿಡಿಸಲು ಕೂಲಿ ಕಾರ್ಮಿಕರ ಕೊರತೆ ಆಗಿದ್ದು, ಇರುವ ಕೂಲಿಕಾರರಿಗೆ ವಾಹನ ಬಾಡಿಗೆ ಸೇರಿ 360 ರೂಪಾಯಿಯಿಂದ 400 ರೂಪಾಯಿಯವರೆಗೆ ಹಣ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. ಇಷ್ಟು ಕೂಲಿ ನೀಡಿದರೂ ಕೂಲಿಕಾರರು ಸಿಗದ ಕಾರಣ ಬಹಳ ಕಡೆ ಹತ್ತಿ ಗಿಡದಲ್ಲೇ ಕೊಳೆತು ವ್ಯರ್ಥವಾಗುತ್ತಿದೆ.
26,470 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ
ಮಾನ್ವಿ ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಹತ್ತಿ ಬೆಳೆಗಾರರು ಹಾನಿ ಅನುಭವಿಸುವಂತಾಗಿದೆ. ಮುಂಗಾರು ಹಂಗಾಮಿಗೆ ತಾಲೂಕಿನಲ್ಲಿ ಸುಮಾರು 26,470 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆಯನ್ನು ಮಾಡಲಾಗಿತ್ತು. ಅಕಾಲಿಕವಾಗಿ ಸುರಿದ ಮಳೆಯಿಂದ ಕಾಯಿಗಳು ಕೊಳೆತು ಬೆಳೆ ಹಾನಿಗೀಡಾದ ಕಾರಣ ಇಳುವರಿ ಕುಸಿತಗೊಂಡಿದೆ. ಹತ್ತಿ ಬಿಡಿಸುವ ಕಾರ್ಯ ಭರದಿಂದ ಸಾಗಿದ್ದು, ಎಲ್ಲೆಡೆ ಇಳುವರಿ ಅರ್ಧದಷ್ಟು ಕುಸಿತ ಕಂಡಿದೆ. ಕಳೆದ ವರ್ಷ ರೈತರು ಪ್ರತಿ ಹೆಕ್ಟೇರ್ಗೆ 10ರಿಂದದ 12 ಕ್ವಿಂಟಲ್ ಹತ್ತಿ ಬೆಳೆದಿದ್ದರು.
ಇದೀಗ ಪ್ರತಿ ಹೆಕ್ಟೇರ್ಗೆ 4ರಿಂದ 5 ಕ್ವಿಂಟಲ್ ಮಾತ್ರ ಇಳುವರಿ ಬಂದಿದೆ. ಕಲ್ಲೂರು, ಕುರ್ಡಿ ಭಾಗದಲ್ಲಿ ಇಳುವರಿ ಉತ್ತಮವಾಗಿದ್ದು, ಹಿರೇಕೊಟ್ನೇಕಲ್ ಹೋಬಳಿ ವ್ಯಾಪ್ತಿಯಲ್ಲಿ ಇಳುವರಿ ಸಂಪೂರ್ಣ ಕುಸಿತ ಕಂಡಿದೆ. ಹಿರೇಕೊಟ್ನೇಕಲ್ ಭಾಗದ ಕೆಲವು ಕಡೆ ಮಳೆಯಿಂದ ಅಪಾರ ಪ್ರಮಾಣದ ಹತ್ತಿ ಬೆಳೆ ಹಾನಿಯಾಗಿದೆ. ಪರಿಣಾಮ ಪ್ರತಿ ಹೆಕ್ಟೇರ್ಗೆ 2ರಿಂದ 3 ಕ್ವಿಂಟಲ್ ಇಳುವರಿ ಮಾತ್ರ ಬರುತ್ತಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಸಹಾಯಕ ಕೃಷಿ ನಿರ್ದೇಶಕ ಭರವಸೆ
ಜನವರಿ ವೇಳೆಗೆ ಇಳುವರಿ ಪ್ರಮಾಣ ಇನ್ನೂ ಹೆಚ್ಚಾಗುವ ಸಂಭವ ಇದೆ ಎಂದು ಸಹಾಯಕ ಕೃಷಿ ನಿರ್ದೇಶಕ ಹುಸೇನ್ ಸಾಹೇಬ್ ತಿಳಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ದೇವದುರ್ಗ ತಾಲೂಕಿನಲ್ಲಿ ಈ ವರ್ಷವೂ ಹತ್ತಿಯ ಬೆಳೆಯಲ್ಲಿ ಉತ್ತಮ ಇಳುವರಿ ಇದೆ. ಆದರೆ ಮಳೆ ಬೀಳುವ ಆತಂಕದಲ್ಲಿ ರೈತರು ಇದ್ದಾರೆ. ಈಗಾಗಲೇ ಬಹುತೇಕ ಕಡೆಗಳಲ್ಲಿ ಹತ್ತಿ ಬಿಡಿಸುವ ಕಾರ್ಯ ಪ್ರಾರಂಭವಾಗಿದೆ. ಗ್ರಾಮೀಣ ಪ್ರದೇಶದಲ್ಲಿನ ಜನರು ರಾಜ್ಯ ಮತ್ತು ಅಂತಾರಾಜ್ಯಗಳತ್ತ ವಲಸೆ ಹೋಗಿರುವ ಹಿನ್ನೆಲೆ ಕೂಲಿ ಕಾರ್ಮಿಕರ ಕೊರತೆಯು ಹೆಚ್ಚಾಗಿದೆ. ಈ ವರ್ಷ ಹತ್ತಿ ದರವೂ ಕುಸಿದಿದೆ. ಕಳೆದ ಬಾರಿ ಪ್ರತಿ ಕ್ವಿಂಟಾಲ್ ಹತ್ತಿಯು 9 ಸಾವಿರದಿಂದ 10 ಸಾವಿರವರೆಗೆ ಮಾರಾಟವಾಗುತ್ತಿತ್ತು. ಈ ವರ್ಷ 7 ರಿಂದ 8 ಸಾವಿರಕ್ಕೆ ಕುಸಿದಿದೆ. ಮೋಡ ಕವಿದ ವಾತಾವರಣ ಇರುವುದರಿಂದ ಹತ್ತಿ ಬೆಲೆ ಮತ್ತಷ್ಟು ಕುಸಿತವಾಗುವ ಆತಂಕ ಎದುರಗಿದೆ ಎಂದು ಅಳಲು ತೋಡಿಕೊಂಡರು.
ಪ್ರತಿ ಕ್ವಿಂಟಲ್ ಹತ್ತಿಗೆ ನಿಗದಿಯಾದ ದರ
ಸಿಂಧನೂರು ತಾಲೂಕಿನಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಹತ್ತಿ ಬೆಳೆಯ ಇಳುವರಿ ಉತ್ತಮವಾಗಿಯೇ ಬಂದಿದೆ. ಕಳೆದ ವರ್ಷ ಪ್ರತಿ ಹೆಕ್ಟೇರ್ಗೆ ಗರಿಷ್ಠ 6 ಕ್ವಿಂಟಾಲ್ ಮಾತ್ರ ಇಳುವರಿ ಬಂದಿತ್ತು. ದರವೂ 6 ಸಾವಿರದಿಂದ 8ಸಾವಿರ ರೂಪಾಯಿವರೆಗೆ ಮಾತ್ರ ಮಾರಾಟವಾಗಿತ್ತು. ಈ ವರ್ಷ ಹೆಕ್ಟೇರ್ಗೆ ಗರಿಷ್ಠ 10 ಕ್ವಿಂಟಲ್ವರೆಗೆ ಇಳುವರಿ ಬಂದಿದೆ. ಪ್ರತಿ ಕ್ವಿಂಟಾಲ್ಗೆ 7 ಸಾವಿರದಿಂದ 10 ಸಾವಿರದವರೆಗೆ ದರ ಲಭಿಸಿದೆ. ಕಳೆದ ವರ್ಷದ ಹತ್ತಿ ಹಂಗಾಮು ಮುಗಿದ ನಂತರ ಕ್ವಿಂಟಾಲ್ಗೆ 12 ಸಾವಿರದವರೆಗೆ ಮಾರುಕಟ್ಟೆ ದರ ಹೆಚ್ಚಳವಾಗಿತ್ತು. ಅದರಿಂದ ರೈತರಿಗೆ ಕಿಂಚಿತ್ತೂ ಲಾಭವಾಗಲಿಲ್ಲ ಎಂದು ದಿದ್ದಿಗಿ ಗ್ರಾಮದ ರೈತ ನಿರುಪಾದೆಪ್ಪ ಕಟಿಗಾರ ಹೇಳಿದ್ದಾರೆ.
ಹತ್ತಿ ಬೆಳೆ ಬಗ್ಗೆ ರೈತ ಶಂಕರಪ್ಪ ಹೇಳಿದ್ದೇನು?
ಈ ವರ್ಷ ಅತಿವೃಷ್ಟಿ ಆಗಿದ್ದರೂ ಹತ್ತಿ ಬೆಳೆ ಮಳೆಗೆ ಸಿಲುಕಲಿಲ್ಲ. ಮಳೆಗೆ ಮುಂಚೆಯೇ ಹತ್ತಿ ಬೆಳೆ ಕೈಗೆ ಬಂದಿತ್ತು. ಆದ್ದರಿಂದ ಹತ್ತಿ ಬಿತ್ತನೆ ಮಾಡಿದ ರೈತರಿಗೆ ಕಷ್ಟವೇನಿಲ್ಲ. ಬೇರೆ ಬೆಳೆ ಹಾಕಿದವರಿಗಿಂತ ಹೆಚ್ಚು ಖುಷಿಯಾಗಿಯೇ ಇದ್ದಾರೆ ಎಂದು ಜಂಗಮರಹಟ್ಟಿಯ ರೈತ ಶಂಕರಪ್ಪ ಹೇಳಿದರು. ಇನ್ನು ಲಿಂಗಸುಗೂರು ತಾಲೂಕಿನಲ್ಲಿ ಕಳೆದ ವರ್ಷ ಹೆಚ್ಚಿನ ಇಳುವರಿ ಬಂದಿತ್ತು. ಅದರಂತೆಯೇ ಈ ವರ್ಷವೂ ಬಹಳಷ್ಟು ರೈತರು ಹತ್ತಿ ಬಿತ್ತನೆ ನಾಟಿ ಮಾಡಿದ್ದಾರೆ. ಆದರೆ ಅತಿಯಾದ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ. ಹತ್ತಿ ಬಿಡಿಸುವ ಕೂಲಿಕಾರರಿಗೆ ಕೂಲಿ ನೀಡಲು ಆಗುತ್ತಿಲ್ಲ. ಮಾರುಕಟ್ಟೆ ಬೆಲೆ ಚೆನ್ನಾಗಿದ್ದು ಇಳುವರಿ ಕುಂಠಿತವಾಗಿದೆ. 'ನಾವು ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಹತ್ತಿಯನ್ನು ಬೆಳೆದಿದ್ದೇವೆ. ಆದರೆ ಮೋಡ ಕವಿದ ವಾತಾವರಣ, ಅತಿಯಾದ ಮಳೆಯಿಂದ ಹೂ, ಕಾಯಿ ಉದುರಿ ಭಾರಿ ನಷ್ಟ ಉಂಟಾಗಿದೆ. ಮಳೆಗೆ ಗಿಡಗಳು ಅತಿ ಎತ್ತರಕ್ಕೆ ಬೆಳೆದಿದ್ದು, ಈಗಲೂ ಹಚ್ಚು ಹಸಿರಾಗಿ ಕಾಣಿಸುತ್ತಿವೆ. ಆದರೂ ಕೂಡ ಇಳುವರಿ ಕುಸಿದು ಕಂಗಾಲಾಗಿದ್ದೇವೆ' ಎಂದು ರೈತ ಮಹಿಳೆ ಶಂಕರಪ್ಪ ಬಸವರಾಜ ತುಪ್ಪದೂರು ಅಳಲನ್ನು ತೋಡಿಕೊಂಡರು.
ಕಾಳಸಂತೆಯಲ್ಲಿ ದುಬಾರಿ ದರಕ್ಕೆ ಮಾರಾಟ
ರೈತರ ಬೇಡಿಕೆಗೆ ಅನುಗುಣವಾಗಿ ರಾಸಾಯನಿಕ ಗೊಬ್ಬರ ಒದಗಿಸುವುದನ್ನು ನಿಯಂತ್ರಿಸಲಾಗಿದೆ. ಹೀಗಾಗಿ ಬಹಳಷ್ಟು ರೈತರು ಕಾಳಸಂತೆ ಮೊರೆ ಹೋಗುತ್ತಿದ್ದಾರೆ. ಗರಿಷ್ಠ ಚಿಲ್ಲರೆ ದರದಲ್ಲೇ (ಎಂಆರ್ಪಿ) ಮಾರಾಟ ಮಾಡುವ ಏಜೆಂಟರೇ ಕಾಳಸಂತೆಯಲ್ಲಿ ರೈತರಿಗೆ ದುಬಾರಿ ದರಕ್ಕೆ ಮಾರುತ್ತಿದ್ದಾರೆ. ಭೂಮಿಯ ಫಲವತ್ತತೆ ಕಾಪಾಡಲು ಸರ್ಕಾರ ರೂಪಿಸಿರುವ ರಾಸಾಯನಿಕ ಗೊಬ್ಬರ ನಿಯಂತ್ರಣ ನೀತಿಯ ಉದ್ದೇಶ ಈಡೇರುತ್ತಿಲ್ಲ. ಅಕಾಲಿಕ ಮಳೆಯಿಂದ ಹತ್ತಿ ಇಳುವರಿ ಕಡಿಮೆ ಆಗಿದೆ. ಅಲ್ಲದೆ ರೈತರಿಗೆ ಈ ವರ್ಷ ಗುಣಮಟ್ಟದ ಬೀಜಗಳ ವಿತರಣೆ ಆಗಿಲ್ಲ. ಇದರಿಂದಲೂ ಸಾಕಷ್ಟು ರೈತರು ನಷ್ಟ ಅನುಭವಿಸುವಂತಾಗಿದೆ ಎಂದು ರೈತ ಲಕ್ಷ್ಮಣಗೌಡ, ಕಡಗಂದೊಡ್ಡಿ ಅಳಲು ತೋಡಿಕೊಂಡಿದ್ದಾರೆ.