ರೈತರ ಪರ, ಕೇಂದ್ರದ ವಿರುದ್ಧ ಮತ್ತೆ ಒಟ್ಟುಗೂಡಿದ ವಿಪಕ್ಷಗಳು
ನವದೆಹಲಿ, ನವೆಂಬರ್ 30: ನಿನ್ನೆಯಿಂದ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆಯಲ್ಲಿ ಇಂದು ಕಾಂಗ್ರೆಸ್ ನ ರಾಹುಲ್ ಗಾಂಧಿ ಸೇರಿದಂತೆ ಹಲವು ವಿಪಕ್ಷಗಳ ನಾಯಕರು ಹಾಜರಾಗಿ ರೈತರಿಗೆ ಬೆಂಬಲ ಸೂಚಿಸಿದರು.
ಎಎಪಿಯ ಅರವಿಂದ ಕೇಜ್ರಿವಾಲ್, ಕಮ್ಯೂನಿಸ್ಟ್ ಪಕ್ಷದ ಸೀತಾರಾಮ್ ಯೆಚೂರಿ, ಎಲ್ಜೆಡಿಯ ಶರದ್ ಯಾದವ್, ಜಿಗ್ನೇಶ್ ಮೆವಾನಿ, ನ್ಯಾಷನಲ್ ಕಾನ್ಫರೆನ್ಸ್ನ ಫಾರೂಕ್ ಅಬ್ದುಲ್ಲಾ, ಎನ್ಸಿಪಿಯ ಶರದ್ ಪವಾರ್, ಯೋಗೇಂದ್ರ ಯಾದವ್, ಯುವ ನಾಯಕ ಕನ್ಹಯ್ಯಾ ಕುಮಾರ್ ಹಲವು ವಿಪಕ್ಷಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಎಲ್ಲರೂ ಪರಸ್ಪರ ಕೈಹಿಡಿದು, ಕೇಂದ್ರ ಸರ್ಕಾರದ ವಿರುದ್ಧ ರೈತರ ಹೋರಾಟಕ್ಕೆ ಒಗ್ಗಟ್ಟಾಗಿ ರೈತರಿಗೆ ಬೆಂಬಲ ನೀಡುವುದಾಗಿ ಹೇಳಿದರು.

ಲಂಕ್ಷಾಂತರ ಸಂಖ್ಯೆಯಲ್ಲಿ ಸೇರಿದ್ದ ರೈತರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ನಾವು ರೈತರೊಂದಿಗೆ ಇದ್ದೇವೆ ಎಂದು ಭರವಸೆ ನೀಡಿದರು. ಜೊತೆಗೆ ಮೋದಿ ರೈತರಿಗೆ ನೀಡಿದ ಮಾತು ಮರೆತಿದ್ದಾರೆ ಎಂದು ಹೇಳಿದರು.
ರೈತರು ಉತ್ತಮ ಭವಿಷ್ಯಕ್ಕಾಗಿ ವಿರೋಧಪಕ್ಷಗಳೆಲ್ಲವೂ ಒಗ್ಗಟ್ಟಾಗುತ್ತದೆ ಎಂದ ರಾಹುಲ್ ಗಾಂಧಿ, ರೈತ ಮತ್ತು ಯುವಕರ ಧ್ವನಿಯನ್ನು ಯಾರೂ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಹೇಳಿದರು.

ಕೇಂದ್ರ ಸರ್ಕಾರ ರೈತರನ್ನು ಅವಮಾನಿಸಿದೆ, ಅದಕ್ಕೆ ಪ್ರತಿಕಾರವಾಗಿ ರೈತರು ಬಿಜೆಪಿಯನ್ನು ಬೇರು ಸಹಿತ ಕಿತ್ತುಹಾಕಲಿದ್ದಾರೆ. ರೈತರು ಸಾಲಮನ್ನಾದ ಉಚಿತ ಉಡುಗೊರೆಯನ್ನು ಕೇಳಲಿಲ್ಲ ಬದಲಾಗಿ ತಮಗೆ ನೀಡಬೇಕಾದ ಬಾಕಿಯನ್ನಷ್ಟೆ ಕೇಳಿದ್ದಾರೆ ಎಂದು ರಾಹುಲ್ ಕೇಂದ್ರದ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದರು.












Click it and Unblock the Notifications