ಕಿಸಾನ್ ಸಮ್ಮಾನ್ ಯೋಜನೆ ಹಣ ವಾಪಸ್; ಏನಿದು ಸುದ್ದಿ?
ಬೆಂಗಳೂರು, ಡಿಸೆಂಬರ್ 02: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಅಡಿ ಕಿಸಾನ್ ಸಮ್ಮಾನ್ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಲಾಭ ಪಡೆದ ರೈತರು ಈಗ ಹಣವನ್ನು ವಾಪಸ್ ಮಾಡಬೇಕಿದೆ. ಹೌದು, ಹಣವನ್ನು ವಾಪಸ್ ನೀಡಬೇಕಾದ ರೈತರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.
ಹಲವು ರೈತರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದ ಹಣಕಾಸಿನ ಸಹಾಯವನ್ನು ಪಡೆದಿದ್ದಾರೆ. ಈ ರೈತರು ಈಗ ಹಣವನ್ನು ವಾಪಸ್ ನೀಡದಿದ್ದರೆ ಮುಂದಿನ ದಿನಗಳಲ್ಲಿ ಕೃಷಿ ಇಲಾಖೆಯ ವಿವಿಧ ಯೋಜನೆಗಳಿಂದ ದೂರವಾಗಲಿದ್ದಾರೆ.
ಈ ಯೋಜನೆಯಡಿ ಕೇಂದ್ರ ಸರ್ಕಾರ ವಾರ್ಷಿಕ 3 ಕಂತುಗಳಲ್ಲಿ ತಲಾ 2 ಸಾವಿರದಂತೆ ರೈತರಿಗೆ ಪ್ರೋತ್ಸಾಹಧನ ನೀಡುತ್ತದೆ. 2018ರ ಡಿಸೆಂಬರ್ 1ರಿಂದ ಪೂರ್ವಾನ್ವಯವಾಗುವಂತೆ ಕೇಂದ್ರ ಸರ್ಕಾರ 2019ರ ಮಾರ್ಚ್ನಲ್ಲಿ ಯೋಜನೆ ಜಾರಿಗೊಳಿಸಿತ್ತು. ಫಲಾನುಭವಿ ರೈತರ ಖಾತೆ ಕರ್ನಾಟಕ ಸರ್ಕಾರ ಸಹ ವಾರ್ಷಿಕ 4 ಸಾವಿರ ರೂ.ಗಳನ್ನು ಪಾವತಿ ಮಾಡಲಿದೆ.
ಯೋಜನೆಯ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದ ಅನರ್ಹರಾಗಿರುವ ರೈತರು ಸಹ ಯೋಜನೆಯಡಿ ಲಾಭ ಪಡೆದಿದ್ದಾರೆ. ಸುಳ್ಳು ಮಾಹಿತಿಗಳನ್ನು ನೀಡಿ ಅರ್ಜಿಗಳನ್ನು ಸಲ್ಲಿಸಿ, ಯೋಜನೆಯಡಿ ಲಾಭ ಪಡೆದಿರುವುದ ಬೆಳಕಿಗೆ ಬಂದಿದೆ. ಆದ್ದರಿಂದ, ಹಣವನ್ನು ವಾಪಸ್ ಮಾಡಿ ಎಂದು ರೈತರಿಗೆ ತಿಳಿಸಲಾಗಿದೆ.

ಅನರ್ಹ ರೈತರು ಎಷ್ಟು?
ಕಿಸಾನ್ ಸಮ್ಮನ್ ಯೋಜನೆಗೆ ಕರ್ನಾಟಕದಲ್ಲಿ ಇದುವರೆಗೂ 56,74,940 ರೈತರು ಹೆಸರು ನೋಂದಣಿ ಮಾಡಿಸಿದ್ದಾರೆ. 52,68,327 ರೈತರಿಗೆ ಸಹಾಯಧನವನ್ನು ಬಿಡುಗಡೆ ಮಾಡಲಾಗಿದೆ. ಸಹಾಯಧನವನ್ನು ಪಡೆದ ರೈತರಲ್ಲಿ 85,208 ಫಲಾನುಭವಿಗಳು ಅನರ್ಹರು. ಅನರ್ಹ ರೈತರಿಂದ ಸಹಾಯಧವನ್ನು ವಾಪಸ್ ಪಡೆಯಿರಿ ಎಂದು ಕೇಂದ್ರ ಕೃಷಿ ಸಚಿವಾಲಯ ರಾಜ್ಯಕ್ಕೆ ರೈತರ ಪಟ್ಟಿಯನ್ನು ರವಾನೆ ಮಾಡಿದೆ.

ಹಣ ವಾಪಸ್ ಮಾಡುವುದು ಹೇಗೆ?
ಅನರ್ಹ ರೈತರು ಹಣವನ್ನು ವಾಪಸ್ ಮಾಡಬೇಕು ಎಂದು ಈಗಾಗಲೇ ಸೂಚನೆ ನೀಡಲು ಆರಂಭಿಸಲಾಗಿದೆ. ಡಿಡಿ ಮೂಲಕ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಹಣವನ್ನು ರೈತರು ವಾಪಸ್ ಮಾಡಬೇಕು. ಒಂದು ವೇಳೆ ಹಣ ವಾಪಸ್ ಮಾಡದಿದ್ದರೆ ಕೃಷಿ ಇಲಾಖೆಯಿಂದ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಸೌಲಭ್ಯ ಈ ರೈತರಿಗೆ ಸಿಗದಂತೆ ಮಾಡುವುದಾಗಿ ಎಚ್ಚರಿಕೆಯನ್ನು ನೀಡಲಾಗಿದೆ.

ನಕಲಿ ಘೋಷಣಾ ಪತ್ರ ಸಲ್ಲಿಕೆ
ಕೃಷಿ ಸಮ್ಮಾನ್ ಯೋಜನೆಗೆ ಅರ್ಜಿ ಸಲ್ಲಿಸುವಾಗ ರೈತರು ಸ್ವಯಂ ಘೋಷಣಾ ಪತ್ರವನ್ನು ಸಲ್ಲಿಕೆ ಮಾಡಬೇಕಿತ್ತು. ಆದರೆ, ಸೈಬರ್ ಸೆಂಟರ್, ತಾಲೂಕು ಕಚೇರಿ ಅಧಿಕಾರಿಗಳ ಮೂಲಕ ನಕಲಿ ಘೋಷಣಾ ಪತ್ರವನ್ನು ಹಲವು ರೈತರು ಸಲ್ಲಿಕೆ ಮಾಡಿದ್ದಾರೆ. ಇಂತಹ ರೈತರು ಈಗ ಹಣ ವಾಪಸ್ ಕೊಡಬೇಕಿದೆ. ರೈತರು ಈಗಾಗಲೇ ಹಣ ವಾಪಸ್ ನೀಡಲು ಆರಂಭಿಸಿದ್ದಾರೆ. ಇಲಾಖೆ ಸಹ ರೈತರಿಗೆ ನೋಟಿಸ್ ಅನ್ನು ಜಾರಿಗೊಳಿಸುತ್ತಿದೆ.

ಷರತ್ತುಗಳು ಏನು?
ಕಿಸಾನ್ ಸಮ್ಮಾನ್ ಯೋಜನೆಯ ಲಾಭ ಪಡೆಯುವ ರೈತರು 2 ಹೆಕ್ಟೇರ್ಗಿಂತ ಹೆಚ್ಚು ಕೃಷಿ ಜಮೀನು ಹೊಂದಿರಬಾರದು. ಅರ್ಜಿದಾರ ರೈತರ ಕುಟುಂಬ ಸದಸ್ಯರು ಸಂವಿಧಾನಿಕ ಹುದ್ದೆಯಲ್ಲಿ ಇರಬಾರದು. ಮಾಸಿಕ 10 ಸಾವಿರಕ್ಕಿಂತ ಹೆಚ್ಚು ಪಿಂಚಣಿ ಪಡೆಯಬಾರದು, ಆದಾಯ ತೆರಿಗೆ ಪಾವತಿದಾರರು ಆಗಿರಬಾರದು, ನೋಂದಾಯಿತ ವೃತ್ತಿನಿರತ ವೈದ್ಯರು, ಇಂಜಿನಿಯರ್, ವಕೀಲ, ಲೆಕ್ಕ ಪರಿಶೋಧಕರು ಆಗಿರಬಾರದು ಎಂಬುದು ಸೇರಿದಂತೆ ಹಲವು ಷರತ್ತುಗಳನ್ನು ಹಾಕಲಾಗಿತ್ತು.












Click it and Unblock the Notifications