ರಾಮನಗರ : ಸಿ.ಪಿ.ಲಿಂಗಪ್ಪ ಬೆವರಿಳಿಸಿದ ಜನರು
ರಾಮನಗರ, ಮಾರ್ಚ್ 27 : ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೃಷಿ ಸಚಿವ ಸರ್ಕಾರಿ ಕಾರ್ಯಕ್ರಮದಲ್ಲಿ, ಲಿಂಗಪ್ಪ ರಾಜಕೀಯ ಮಾತನಾಡಿ ಸ್ಥಳೀಯರ ಆಕ್ರೋಷಕ್ಕೆ ಗುರಿಯಾಗಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಾಮನಗರ ತಾಲೂಕಿನ ಗೌಡಯ್ಯನದೊಡ್ಡಿ ಗ್ರಾಮದಲ್ಲಿ ಜಿಲ್ಲಾ ಕೃಷಿ ಇಲಾಖೆ ವತಿಯಿಂದ ಕೃಷಿಧಾರೆ ಮೊಬೈಲ್ ಆಪ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕೃಷಿ ಸಚಿವ ಕೃಷ್ಣ ಬೈರೇಗೌಡ, ವಿಧಾನಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
2020ರ ವೇಳೆಗೆ ರೇಷ್ಮೆಯಿಂದ 1 ಕೋಟಿ ಉದ್ಯೋಗ, ಕರ್ನಾಟಕಕ್ಕೆ ಹೆಚ್ಚಿನ ಲಾಭ
ಕೃಷಿ ಇಲಾಖೆಯಲ್ಲಿ ತಮ್ಮ ಸರ್ಕಾರ ಮಾಡಿರುವ ಸಾಧನೆಗಳ ಬಗ್ಗೆ ವೇದಿಕೆಯಲ್ಲಿ ಮಾತನಾಡುತ್ತ ಲಿಂಗಪ್ಪ ಅವರು ರಾಜಕೀಯದ ಮಾತು ಆರಂಭಿಸಿದರು. 'ಕೇವಲ 30 ಸೀಟು ಗೆಲ್ಲುವವರು ಮುಖ್ಯಮಂತ್ರಿಯಾಗುತ್ತೇನೆ ಎನ್ನುತ್ತಿದ್ದಾರೆ. 136 ಸೀಟುಗಳನ್ನು ಗೆಲ್ಲುವ ನಾವು ಮುಖ್ಯಮಂತ್ರಿಯಾಗುವುದಿಲ್ಲವೇ? ಎಂದು ಸಭಿಕರನ್ನು ಪ್ರಶ್ನಿಸಿದರು'.
ವೇದಿಕೆಯಲ್ಲಿದ್ದ ಜೆಡಿಎಸ್ ಬೆಂಬಲಿತ ಗ್ರಾ.ಪಂ ಅಧ್ಯಕ್ಷ ಪಾಡುರಂಗ ಸೇರಿದಂತೆ ಇತರರು ಈ ಮಾತಿಗೆ ವಿರೋಧ ವ್ಯಕ್ತಪಡಿಸಿದರು. ಇದು ಸರ್ಕಾರಿ ಕಾರ್ಯಕ್ರಮ ಇಲ್ಲಿ ನೀವು ರಾಜಕಾರಣ ಮಾಡಬೇಡಿ ಎಂದು ತಾಕೀತು ಮಾಡಿದರು.
ಇದಕ್ಕೆ ಸುಮ್ಮನಾಗದ ಸಿ.ಎಂ.ಲಿಂಗಪ್ಪ ಅಧ್ಯಕ್ಷರ ಜತೆಗೆ ಮಾತಿನ ಚಕಮಕಿ ನಡೆಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಮಧ್ಯಪ್ರವೇಶಿಸಿದ ಸ್ಥಳೀಯರು ಹಾಗೂ ಅಧಿಕಾರಿಗಳು ಇಬ್ಬರನ್ನು ಸಮಾಧಾನ ಮಾಡಿದರು.
ಕೃಷಿಸಚಿವ ಕೃಷ್ಣ ಬೈರೇಗೌಡರ ಎದುರೇ ಮಾತಿನ ಚಕಮಕಿ ನಡೆದರೂ ಸಚಿವರು ಮಾತ್ರ ಯಾವುದೇ ಮಾತನಾಡದೇ ಮೂಕ ಪ್ರೇಕ್ಷಕರಾದರು. ಸಚಿವರ ವರ್ತನೆಯನ್ನು ಸ್ಥಳೀಯರು ಖಂಡಿಸಿದರು.