ಕೊಡಗಿನಲ್ಲಿ ಗರಿಗೆದರಿದ ಭತ್ತದ ಕೃಷಿ ಚಟುವಟಿಕೆ

ಮಡಿಕೇರಿ, ಜುಲೈ 9: ಕೊಡಗಿನಲ್ಲಿ ಮಳೆ ಸುರಿದು ನದಿ, ಹೊಳೆ, ತೊರೆಗಳಲ್ಲಿ ನೀರು ತುಂಬಿ ಹರಿಯುತ್ತಿರುವಾಗ ವಿಶಾಲ ಭತ್ತದ ಬಯಲುಗಳಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರುವುದು ಹಿಂದಿನಿಂದಲೂ ನಡೆದು ಬಂದಿದೆ.

Recommended Video

      WHO ಹಾಡಿ ಹೊಗಳಿದ ಚೀನಾ | Oneindia Kannada

      ಕೊಡಗಿನಲ್ಲಿ ಭತ್ತವನ್ನು ಬೆಳೆಯುವುದು ಮಳೆಯ ಆಧಾರದಲ್ಲಾಗಿದೆ. ಹೀಗಾಗಿ ವರ್ಷಕ್ಕೊಮ್ಮೆ ಮಾತ್ರ ಭತ್ತದ ಬೆಳೆಯನ್ನು ಬೆಳೆಯುತ್ತಾರೆ ಮತ್ತು ವರ್ಷಕ್ಕೊಂದೇ ಬೆಳೆಯಾಗಿದೆ. ಇನ್ನು ಇಲ್ಲಿ ಮಳೆಗಾಲವೂ ಕೂಡ ಗದ್ದೆ ಕೆಲಸದೊಂದಿಗೆ ಆರಂಭವಾಗುತ್ತದೆ. ಮಳೆ ಬಿದ್ದು ಮಣ್ಣು ತೇವವಾಗುತ್ತಿದ್ದಂತೆಯೇ ರೈತರು ಉಳುಮೆ ಆರಂಭಿಸುತ್ತಾರೆ. ಅಲ್ಲಿಂದ ಶುರುವಾದ ಗದ್ದೆಯಲ್ಲಿನ ಭತ್ತದ ಕೃಷಿ ಚಟುವಟಿಕೆಯ ಪ್ರಮುಖ ಭಾಗವಾದ ನಾಟಿ ಕಾರ್ಯ ಆಗಸ್ಟ್ ತಿಂಗಳ ತನಕವೂ ನಡೆಯುತ್ತದೆ.

      ಕಳೆದ ಎರಡು ವರ್ಷಗಳಿಂದ ಉತ್ತಮ ಮಳೆಯಾಗುತ್ತಿದೆ. ಜತೆಗೆ ನದಿ, ಹೊಳೆ ದಡದಲ್ಲಿರುವ ಗದ್ದೆಗಳಿಗೆ ಪ್ರವಾಹದ ಭಯವೂ ಕಾಡತೊಡಗಿದೆ. ಭತ್ತದ ಬೆಳೆಯಿಂದ ನಿರೀಕ್ಷಿಸಿದಂತೆ ಆದಾಯ ಬರಲ್ಲ ಎಂಬ ಸತ್ಯ ಗೊತ್ತಿದ್ದರೂ ನಷ್ಟದಲ್ಲಿಯೇ ಭತ್ತದ ಬೆಳೆಯುತ್ತಿದ್ದಾರೆ. ಕಾರಣ ಅದರ ಮೇಲೆ ಭಾವನಾತ್ಮಕ ಸಂಬಂಧವಿದೆ. ಧಾನ್ಯಲಕ್ಷ್ಮಿ ಮನೆಯಲ್ಲಿರಬೇಕೆಂಬ ಕಾರಣಕ್ಕಾಗಿ ಮತ್ತು ತಮ್ಮ ಅಗತ್ಯಕ್ಕೆ ತಕ್ಕಷ್ಟು ಗದ್ದೆಯನ್ನು ಉಳಿಸಿಕೊಂಡು ಕೃಷಿ ಮಾಡುತ್ತಿದ್ದಾರೆ.

      ಧಾನ್ಯ ಲಕ್ಷ್ಮಿಯನ್ನು ಮನೆಗೆ ತುಂಬಿಸುವ ಹುತ್ತರಿ ಹಬ್ಬ

      ಧಾನ್ಯ ಲಕ್ಷ್ಮಿಯನ್ನು ಮನೆಗೆ ತುಂಬಿಸುವ ಹುತ್ತರಿ ಹಬ್ಬ

      ಭತ್ತದ ಕೃಷಿ ಆರಂಭವಾಗಿ ನಾಟಿ ಕಾರ್ಯ ಮುಗಿದು ಅದು ಕೊಯ್ಲುಗೆ ಬರುವ ತನಕ ಹಬ್ಬಗಳು ಕೂಡ ಅದರ ಬೆಳವಣಿಗೆಯ ಆಧಾರದಲ್ಲಿ ಇಲ್ಲಿ ನಡೆಯುವುದು ವಿಶೇಷವಾಗಿದೆ. ನಾಟಿ ಮುಗಿದ ಖುಷಿಯಲ್ಲಿ ಕೈಲ್ ಮುಹೂರ್ತ ಹಬ್ಬವನ್ನು, ಭತ್ತದ ಬೆಳೆ ಹುಲುಸಾಗಿ ಬೆಳೆದು ಅದು ಹೊಡೆ ಒಡೆಯುವಾಗ ಗದ್ದೆಯಲ್ಲಿ ಭೂತಾಯಿಗೆ ದೋಸೆಯನ್ನಿಟ್ಟು ದೀಪಹಚ್ಚಿ ಪೂಜಿಸುವ (ತೀರ್ಥೋದ್ಭವ) ತುಲಾಸಂಕ್ರಮಣ, ಕೊನೆಗೆ ಬೆಳೆ ಕೊಯ್ಲುಗೆ ಬಂದಾಗ ಧಾನ್ಯ ಲಕ್ಷ್ಮಿಯನ್ನು ಮನೆಗೆ ತುಂಬಿಸುವ ಹುತ್ತರಿ ಹಬ್ಬವನ್ನು ಆಚರಿಸಲಾಗುತ್ತದೆ.

      ಈಗ ಯಂತ್ರಗಳಿಂದ ಉಳುಮೆ

      ಈಗ ಯಂತ್ರಗಳಿಂದ ಉಳುಮೆ

      ಇಷ್ಟೊಂದು ಪ್ರಾಮುಖ್ಯತೆಯನ್ನು ಹೊಂದಿರುವ ಭತ್ತದ ಕೃಷಿ ಮಳೆಗಾಲದಲ್ಲಿ ಸುರಿಯುವ ಮಳೆಯಲ್ಲಿಯೇ ನಡೆಯುತ್ತದೆ. ಉಳುಮೆ, ಇನ್ನಿತರ ಕೆಲಸದ ಜತೆ ನಾಟಿಯೂ ಮಳೆಯಲ್ಲಿಯೇ ನಡೆಯುತ್ತದೆ. ಹೆಂಗಸರು ಪೈರನ್ನು ಕಿತ್ತು ಕೊಟ್ಟರೆ ಗಂಡಸರು ನಾಟಿ ಮಾಡುತ್ತಾರೆ. ಹಿಂದೆ ಎತ್ತುಗಳಿಂದ ಉಳುಮೆ ಮಾಡಲಾಗುತ್ತಿತ್ತಾದರೂ ಈಗ ಹೆಚ್ಚಿನ ಉಳುಮೆ ಟ್ರ್ಯಾಕ್ಟರ್ ಮತ್ತು ಟಿಲ್ಲರ್ ಗಳಿಂದ ನಡೆಯುತ್ತಿದೆ.

      ಮೊದಲಿಗೆ ಹೋಲಿಸಿದರೆ ಭತ್ತದ ಗದ್ದೆ ಬಯಲಿನ ವಿಸ್ತೀರ್ಣವೂ ಕಡಿಮೆಯಾಗುತ್ತಿದೆ. ತೋಟ, ನಿವೇಶನಗಳಾಗಿ ಮಾರ್ಪಾಡುಗೊಂಡಿವೆ. ಕೆಲವು ವರ್ಷಗಳ ಹಿಂದೆ ಮುಂಗಾರು ಮಳೆಯೂ ಸಮರ್ಪಕವಾಗಿ ಸುರಿದಿರಲಿಲ್ಲ. ಹೀಗಾಗಿ ಭತ್ತದ ಗದ್ದೆಗಳಿಗೆ ಸಮರ್ಪಕ ನೀರಿಲ್ಲದೆ ಬೆಳೆಯನ್ನೇ ಬಹಳಷ್ಟು ಬೆಳೆಗಾರರು ಬೆಳೆದಿರಲಿಲ್ಲ. ಜತೆಗೆ ಭತ್ತ ಬೆಳೆಯುವುದರಿಂದ ನಷ್ಟವೂ ಹೆಚ್ಚಾಗುತ್ತಿರುವುದರಿಂದ ಅದರತ್ತ ನಿರಾಸಕ್ತಿ ತೋರಿದ್ದರು. ಹೀಗಾಗಿ ಬಹಳಷ್ಟು ಗದ್ದೆಯ ಬಯಲುಗಳು ಪಾಳುಬಿದ್ದಿವೆ.

      ಭತ್ತದ ಕೃಷಿಯಲ್ಲಿ ಬದಲಾವಣೆ

      ಭತ್ತದ ಕೃಷಿಯಲ್ಲಿ ಬದಲಾವಣೆ

      ಈಗಿನ ಪರಿಸ್ಥಿತಿಯಲ್ಲಿ ಭತ್ತದ ಕೃಷಿ ಚಟುವಟಿಕೆಯಲ್ಲಿ ಒಂದಷ್ಟು ಬದಲಾವಣೆಯಾಗಿದೆ. ಹಿಂದೆ ಮನೆಯಲ್ಲಿ ಹೆಚ್ಚಿನ ಜನ ಇರುತ್ತಿದ್ದರು ಅವರೇ ಗದ್ದೆಗಿಳಿದು ಕೆಲಸ ಮಾಡುತ್ತಿದ್ದರು. ಈಗ ಹಾಗಿಲ್ಲ, ಹೆಚ್ಚಿನ ಕುಟುಂಬಗಳಲ್ಲಿ ಮಕ್ಕಳೆಲ್ಲ ಹೊರಗೆ ಇದ್ದಾರೆ. ಜತೆಗೆ ಅವರಿಗೆ ಭತ್ತದ ಕೃಷಿಯ ಅನುಭವವೂ ಇಲ್ಲದಾಗಿದೆ. ಹೀಗಾಗಿ ಕಾರ್ಮಿಕರನ್ನು ಅವಲಂಭಿಸಬೇಕಾಗಿದೆ. ಕೂಲಿ ನೀಡಿ ಕೃಷಿ ಚಟುವಟಿಕೆ ನಡೆಸಿದರೆ ಅದರಿಂದ ನಷ್ಟವೇ ಆಗುತ್ತಿದೆ. ಈ ಹಿಂದೆ ಹಾಗಿರಲಿಲ್ಲ. ಸುತ್ತಮುತ್ತಲಿನವರು ಕೂಡು ಆಳುಗಳಾಗಿ ಕೆಲಸ ಮಾಡುತ್ತಿದ್ದರು. ಇದರಿಂದ ನಷ್ಟದ ಮಾತೇ ಇರಲಿಲ್ಲ. ಇದಲ್ಲದೆ, ಜನ ಕೆಲಸವನ್ನು ಇಷ್ಟಪಟ್ಟು ಮಾಡುತ್ತಿದ್ದರು. ಗದ್ದೆ ಬಯಲಲ್ಲಿ ಹಾದು ಹೋಗುವ ವ್ಯಕ್ತಿಗಳು ಕೂಡ ಗದ್ದೆಗಿಳಿದು ನಾಟಿ ನೆಟ್ಟು ಹೋಗುತ್ತಿದ್ದರು.

      ಸೈನಿಕರು ರಜೆಯಲ್ಲಿ ಬರುತ್ತಿದ್ದರು

      ಸೈನಿಕರು ರಜೆಯಲ್ಲಿ ಬರುತ್ತಿದ್ದರು

      ದೊಡ್ಡ ಗದ್ದೆಗಳಲ್ಲಿ ಹತ್ತಾರು ಜನ ಹರಟೆ ಹೊಡೆಯುತ್ತಾ ಹಳೆಯ ಕಥೆಗಳನ್ನು ಹೇಳುತ್ತಾ ಖುಷಿ ಖುಷಿಯಾಗಿ ನಾಟಿ ಮಾಡುತ್ತಿದ್ದರು. ಪೊಲೀಸ್, ಸೇನೆ, ಇನ್ನಿತರ ಕೆಲಸಗಳ ಮೇಲೆ ಊರಿಂದ ಹೊರಗೆ ಹೋದವರು ನಾಟಿ ಸಮಯದಲ್ಲಿ ಊರಿಗೆ ಬರುವ ಪ್ರಯತ್ನ ಮಾಡುತ್ತಿದ್ದರು. ಅಷ್ಟೇ ಅಲ್ಲ ಮದುವೆ ಮಾಡಿ ಕಳುಹಿಸಿದ ಹೆಣ್ಣು ಮಗಳು ಕೂಡ ಆ ಸಮಯದಲ್ಲಿ ತವರಿಗೆ ಬಂದು ಸಹಾಯ ಮಾಡುತ್ತಿದ್ದಳು. ಸಾಮಾನ್ಯವಾಗಿ ಎಷ್ಟೇ ಓದಿದ್ದರೂ ಹೆಣ್ಣು ಮಕ್ಕಳು ಪೈರು ಕೀಳುವುದನ್ನು, ಗಂಡು ಮಕ್ಕಳು ನಾಟಿ ನೆಡುವುದನ್ನು ಚಿಕ್ಕ ವಯಸ್ಸಿನಲ್ಲಿಯೇ ಕಲಿತು ಬಿಡುತ್ತಿದ್ದರು. ಅವತ್ತಿಗೆ ಎಷ್ಟು ಎಕರೆ ಗದ್ದೆಯಿದೆ ಎಂಬುದರ ಮೇಲೆ ಆತನ ಶ್ರೀಮಂತಿಕೆಯನ್ನು ಅಳೆಯಲಾಗುತ್ತಿತ್ತು.

      ನಾಟಿ ಬಳಿಕ ಗದ್ದೆಯಲ್ಲಿ ಓಟ

      ನಾಟಿ ಬಳಿಕ ಗದ್ದೆಯಲ್ಲಿ ಓಟ

      ನಾಟಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದರು. ಅದರಲ್ಲೂ ದೊಡ್ಡ ನಾಟಿಯಂದು ಭೂರಿ ಬೋಜನ ನಡೆಯುತ್ತಿತ್ತು. ಗದ್ದೆಯಲ್ಲಿ ಕೊಡಿನಾಟಿ ನೆಡುವ ಪರಿಣಿತರಿದ್ದರು. ಅದು ಗದ್ದೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಗದ್ದೆಯನ್ನು ವಿಭಜಿಸಿ ಎದ್ದು ಕಾಣುತ್ತಿತ್ತು. ಆ ನಂತರ ದೊಡ್ಡಗದ್ದೆಯಲ್ಲಿ ನಾಟಿಯ ಬಳಿಕ ಓಟ ನಡೆಯುತ್ತಿತ್ತು. ಗೆದ್ದವರಿಗೆ ಹಣ, ಬಾಳೆಗೊನೆ, ತೆಂಗಿನ ಕಾಯಿ ನೀಡಿ ಗೌರವಿಸಲಾಗುತ್ತಿತ್ತು. ಅದೊಂದು ಮನರಂಜನೆಯ ಜೊತೆಗೆ ಊರಿಗೊಬ್ಬ ಓಟಗಾರನನ್ನು ಹುಟ್ಟು ಹಾಕುತ್ತಿತ್ತು.

      ಗದ್ದೆ ಬಯಲುಗಳು ಕುಗ್ಗುತ್ತಿವೆ

      ಗದ್ದೆ ಬಯಲುಗಳು ಕುಗ್ಗುತ್ತಿವೆ

      ಈಗ ಎಲ್ಲವೂ ಬದಲಾವಣೆಯಾಗಿದೆ. ಭತ್ತದ ಕೃಷಿ ಮೊದಲಿನಷ್ಟು ಖುಷಿಕೊಡುತ್ತಿಲ್ಲ. ಕೆಲವರು ಮಾತ್ರ ಕೃಷಿ ಮಾಡುತ್ತಿದ್ದಾರೆ. ಇನ್ನು ಕೆಲವರು ಗದ್ದೆಯಲ್ಲಿ ಶುಂಠಿ, ಬಾಳೆ ಬೆಳೆಯುತ್ತಿದ್ದಾರೆ. ಲಾಭ ನಷ್ಟಗಳ ಲೆಕ್ಕಾಚಾರ ಮಾಡಿ ಬಹಳಷ್ಟು ರೈತರು ಭತ್ತ ಬೆಳೆಯುವುದರಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿಯಾಗುತ್ತಿರುವುದನ್ನು ಮನಗಂಡು ಪಾಳು ಬಿಟ್ಟಿದ್ದಾರೆ. ಇನ್ನು ಕೆಲವರು ನಿವೇಶನಗಳನ್ನಾಗಿ ಪರಿವರ್ತಿಸಿದ್ದಾರೆ.

      ಈಗ ಮೊದಲಿಗೆ ಹೋಲಿಸಿದರೆ ಗದ್ದೆಗಳ ವ್ಯಾಪ್ತಿ ಕಡಿಮೆಯಾಗಿದೆ. ದನ ಸಾಕೋರು ಇಲ್ಲ, ಹೀಗಾಗಿ ಸಗಣಿ ಗೊಬ್ಬರವಿಲ್ಲ. ಯಂತ್ರಗಳ ಮೂಲಕವೇ ಕೆಲಸ ಕಾರ್ಯಗಳು ನಡೆಯುತ್ತವೆ. ಮೊದಲಿನ ಸಂತೋಷವಿಲ್ಲ ಏಕೆಂದರೆ ಮಳೆಯನ್ನು ನಂಬಿ ಭತ್ತ ಬೆಳೆಯುವುದು ಒಂದು ರೀತಿಯ ಹೋರಾಟವಾಗಿದೆ.

      ಜಿಲ್ಲೆಯಲ್ಲಿ ನಾಟಿ ಕಾರ್ಯ ಆರಂಭ

      ಜಿಲ್ಲೆಯಲ್ಲಿ ನಾಟಿ ಕಾರ್ಯ ಆರಂಭ

      ಇವತ್ತಿನ ಮಟ್ಟಿಗೆ ಕೊಡಗಿನಲ್ಲಿ ಭತ್ತ ಬೆಳೆ ಲಾಭದಾಯಕವಾಗಿ ಉಳಿದಿಲ್ಲ. ಹೀಗಾಗಿ ಅದರ ವ್ಯಾಪ್ತಿ ವರ್ಷದಿಂದ ವರ್ಷಕ್ಕೆ ಕುಗ್ಗುತ್ತಾ ಹೋಗುತ್ತಿದೆ. ಕೆಲವರಷ್ಟೆ ಅನಿವಾರ್ಯವಾಗಿ ಇವತ್ತಿನ ಪರಿಸ್ಥಿತಿಗೆ ತಕ್ಕಂತೆ ಭತ್ತವನ್ನು ಬೆಳೆಯುತ್ತಿದ್ದಾರೆ. ಹಾಗಾಗಿ ಹಿಂದಿನ ವೈಭವ ಈಗ ಇಲ್ಲದಾಗಿದೆ. ಸದ್ಯ ಕೊಡಗಿನಲ್ಲೊಂದು ಸುತ್ತು ಹೊಡೆದರೆ ಭತ್ತದ ಸಸಿ ಮಡಿಗಳು ತಯಾರಿಯಾಗಿದ್ದು, ಕೆಲವೆಡೆ ನೀರಿನ ಆಸರೆಯಿರುವ ಪ್ರದೇಶಗಳಲ್ಲಿ ನಾಟಿಕಾರ್ಯವೂ ಆರಂಭವಾಗಿದೆ. ಮುಂದಿನ ತಿಂಗಳ ವೇಳೆ ಜಿಲ್ಲೆಯಾದ್ಯಂತ ನಾಟಿಕಾರ್ಯ ಪೂರ್ಣಗೊಳ್ಳಲಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+