ಈರುಳ್ಳಿ ಖರೀದಿ ಮಾಡಿದ್ರೂ ಕಣ್ಣಲ್ಲಿ ನೀರು ಬರುತ್ತೆ !
ಬೆಂಗಳೂರು, ಜು. 31: ದೇಶಾದ್ಯಂತ ಜನರಿಗೆ ಈರುಳ್ಳಿ ಕಣ್ಣೀರು ತರಿಸುತ್ತಿದೆ. ಏಕಾಏಕಿ ಕೆಜಿ ದರದಲ್ಲಿ 10 ರಿಂದ 15 ರು. ಏರಿಕೆಯಾಗಿದ್ದು ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಮಹಾನಗರಗಳು ಸೇರಿದಂತೆ ಎಲ್ಲೆಡೆ ಈರುಳ್ಳಿಗೆ ಹೆಚ್ಚಿನ ದರ ನೀಡಬೇಕಾಗಿದೆ.
ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಮಹಾರಾಷ್ಟ್ರದ ದಪ್ಪ ಈರುಳ್ಳಿಗೆ 42 ರು., ಕರ್ನಾಟಕದ ಚಳ್ಳಕೆರೆ ಮತ್ತು ಸುತ್ತಮುತ್ತಲಿನ ಭಾಗದ ಸಣ್ಣ ಈರುಳ್ಳಿ ಕೆ.ಜಿ.ಗೆ 22 ರಿಂದ 34 ರು. ಹಾಗೂ ಬಿಜಾಪುರದ ಮಧ್ಯಮ ಗಾತ್ರದ ಈರುಳ್ಳಿ 35 ರಿಂದ 38 ರು. ತೆರಬೇಕಾಗಿದೆ. ಹಾಪ್ ಕಾಮ್ಸ್ ನಲ್ಲೂ ಏರಿಕೆಯಾಗಿದ್ದು ಉತ್ತಮ ಈರುಳ್ಳಿಗೆ 48 ರು. ನೀಡಬೇಕಾಗಿದೆ.[ಈರುಳ್ಳಿ ದರ ದಿಢೀರ್ ಏರಿಕೆಗೆ ಕಾರಣವೇನು?]

ದೊಡ್ಡ ವ್ಯಾಪಾರಿಗಳು ದಾಸ್ತಾನು ಮಾಡಿದ್ದೇ ಈರುಳ್ಳಿ ದರ ಏರಿಕೆಗೆ ಪ್ರಮುಖ ಕಾರಣ. ಇದರೊಂದಿಗೆ ಮಳೆ ಕೊರತೆಯೂ ಸೇರಿಕೊಂಡಿತ್ತು. ಕೇಂದ್ರ ಸರ್ಕಾರ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಗುವುದು ಎಂದು ಹೇಳಿದ ನಂತರ ದಾಸ್ತಾನುದಾರರು ಮಾರುಕಟ್ಟೆಗೆ ಸರಬರಾಜು ಮಾಡುತ್ತಿರುವುದು ಏಕಾಏಕಿ ಏರಿಕೆಯನ್ನು ಸ್ವಲ್ಪ ಪ್ರಮಾಣದಲ್ಲಿ ತಡೆಹಿಡಿದಿದೆ.[ಆಮ್ಲೆಟ್ ಗೆ ಈರುಳ್ಳಿ ಹಾಕದಿದ್ದಕ್ಕೆ ಗುಂಡೇಟು!]
ದಾಸ್ತಾನು ಮಾಡಿದ್ದ ರೈತರು ಖುಷ್
ಗುರುವಾರ ಬೆಳಗ್ಗೆ 30 ರೂ. ದರವಿದ್ದ ಸಾದಾ ಈರುಳ್ಳಿ 35ರೂ., 35 ರೂ. ಇದ್ದ ಮಧ್ಯಮ ಈರುಳ್ಳಿ 40ರಿಂದ 45 ಹಾಗೂ 40 ರೂ. ದರ ಹೊಂದಿದ್ದ ಉತ್ತಮ ಈರುಳ್ಳಿ ಬೆಲೆ 50ಕ್ಕೇರಿತ್ತು. ದಾಸ್ತಾನು ಮಾಡಿಕೊಂಡಿದ್ದ ರೈತರು ಇದರಿಂದ ಸಂತಸಗೊಂಡಿದ್ದಾರೆ. 2013 ರಲ್ಲಿ ಒಂದು ಸಾರಿ ಈರುಳ್ಳಿ 100 ರ ಗಡಿ ಸಮೀಪಿಸುತ್ತು. ಈ ಬಾರು ಅರ್ಧದಷ್ಟನ್ನು ಸಂಗ್ರಹಮಾಡಿ ಇಟ್ಟುಕೊಂಡಿದ್ದೇವೆ ಎನ್ನುತ್ತಾರೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದ ರೈತ ಮಂಜುನಾಥ್.
ಮಳೆ ಕೊರತೆ, ಸಮರ್ಪಕ ಬೆಳೆ ಬಾರದಿರುವುದು, ಹೆಚ್ಚಿದ ಬೇಡಿಕೆ ಸಹ ಈರುಳ್ಳಿ ಬೆಲೆ ಏರಲು ಕಾರಣವಾಗಿದೆ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಹರಿದು ಬರದಿದ್ದರೆ 15 ದಿನಗಳಲ್ಲಿ ಉತ್ತಮ ಈರುಳ್ಳಿ 70 ರು. ಸಮೀಪಿದಿದರೂ ಆಶ್ಚರ್ಯವಿಲ್ಲ.












Click it and Unblock the Notifications