ದುಬಾರಿ ಈರುಳ್ಳಿ: ಮೂವರು ಗುಂಡಿಗೆ ಬಲಿ
ಲಖನೌ/ಹೈದರಾಬಾದ್, ನ.2: ದುಬಾರಿ ಈರುಳ್ಳಿ ಮತ್ತೆರೆಡು ಜೀವಗಳ ಬಲಿ ಪಡೆದಿದೆ. ಈರುಳ್ಳಿಯನ್ನು ಸಾಗಿಸುತ್ತಿದ್ದ ಲಾರಿಯೊಂದನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ಚಾಲಕ ಹಾಗೂ ಕ್ಲೀನರ್ ಅನ್ನು ಗುಂಡಿಟ್ಟು ಕೊಂದು, ಲಾರಿ ತುಂಬಕ್ಕೂ ಇದ್ದ ಮಾಲನ್ನು ಲೂಟಿ ಮಾಡಿದ್ದಾರೆ.
ಅತ್ತ ಉತ್ತರ ಪ್ರದೇಶದಲ್ಲಿ ಈ ನಡೆದಿದ್ದರೆ ಇತ್ತ ಆಂಧ್ರ ಪ್ರದೇಶದ ರಂಗಾರೆಡ್ಡಿ ಜಿಲ್ಲೆಯಲ್ಲಿ ತಾನು ಬೆಳೆದಿದ್ದ 150 ಕೆಜಿ ಈರುಳ್ಳಿಯನ್ನು ಮಾರುಕಟ್ಟೆಗೆ ತಂದಿದ್ದ ರೈತನೊಬ್ಬನನ್ನು ದುಷ್ಕರ್ಮಿಗಳು ಕಲ್ಲಿನಿಂದ ಹೊಡೆದು ಸಾಯಿಸಿದ್ದಾರೆ.

ಮೃತ ರೈತನನ್ನು ಯಲ್ಲಯ್ಯ ಎಂದು ಗುರುತಿಸಲಾಗಿದೆ. ಆದರೆ ಈ ಘಟನೆಗೆ ಹಳೆ ಭೂವಿವಾದ ವೈಷಮ್ಯ ಕಾರಣ ಇರಬಹು ಎಂದು ಪೊಲೀಸರು ಶಂಕಿಸಿದ್ದು, ತನಿಖೆ ಕೈಗೊಂಡಿದ್ದಾರೆ.
ಉತ್ತರ ಪ್ರದೇಶದ ಸತಾರಿಯಾ ಸಮೀಪದ ಹೆದ್ದಾರಿಯಲ್ಲಿ ಈರುಳ್ಳಿ ಹಾಗೂ ಟೊಮೆಟೊ ಮಾಲನ್ನು ಸಾಗಿಸುತ್ತಿದ್ದ ಲಾರಿಯನ್ನು ಅಡ್ಡಗಟ್ಟಿದ 10 ಜನರಿದ್ದ ದುಷ್ಕರ್ಮಿಗಳ ತಂಡವು ಚಾಲಕ ಹಾಗೂ ಕ್ಲೀನರ್ ತಲೆಗೆ ಗುಂಡು ಹಾರಿಸಿ, ಲಕ್ಷಾಂತರ ರೂಪಾಯಿಯ ಮಾಲನ್ನು ದೋಚಿದ್ದಾರೆ.
ಮೊದಲು ಲಾರಿಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ತಾವು ಮಂಡಿ ಸಮಿತಿಯವರು. ಹೀಗಾಗಿ ಮಾಲನ್ನು ಪರಿಶೀಲಿಸಬೇಕಾಗಿದೆ ಎಂದು ಚಾಲಕನ ಜತೆ ಮಾತಿಗಿಳಿದು ನಂತರ ದುಷ್ಕೃತ್ಯ ಎಸಗಿ ಚಾಲಕ ಹಾಗೂ ಕ್ಲೀನರ್ ಮೃತದೇಹವನ್ನು ರಸ್ತೆ ಬದಿ ಬಿಸಾಕಿ, ಈರುಳ್ಳಿ ಮಾಲಿನೊಂದಿಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ದುಷ್ಕರ್ಮಿಗಳ ತಂಡದಲ್ಲಿದ್ದ ಮೂವರು ಸದಸ್ಯರನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ಉಳಿದವರಿಗಾಗಿ ಶೋಧಕಾರ್ಯ ಮುಂದುವರಿದಿದೆ.
ಎರಡು ತಿಂಗಳಿಂದ ದಂಧೆ ವಿಪರೀತ:
ಈರುಳ್ಳಿ ಬೆಲೆ ಗಗನಮುಖಿಯಾದ ನಂತರ ಲಾರಿಗಳನ್ನು ಅಡ್ಡಗಟ್ಟಿ ಮಾಲನ್ನು ದೋಚುವ ಯತ್ನ ಹೆಚ್ಚುತ್ತಿದೆ. ಕಳೆದ ಎರಡು ತಿಂಗಳಿಂದ ಅಲಹಾಬಾದ್- ಮಂಗಾನ್ವಾ, ಅಲಹಾಬಾದ್- ವಾರಾಣಸಿ ಹೆದ್ದಾರಿಯಲ್ಲಿ ಇಂತಹ ಘಟನೆಗಳು ಪದೇಪದೆ ಮರುಕಳಿಸುತ್ತಿವೆ ಎಂದು ಪೊಲೀಸರು ಹೇಳಿದ್ದಾರೆ.
ಉತ್ತರ ಪ್ರದೇಶದ ಇಟಾ ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆ ಆಮ್ಲೆಟ್ ನಲ್ಲಿ ಈರುಳ್ಳಿ ಹಾಕಿಲ್ಲ ಎಂದು ಸಿಟ್ಟಿಗೆದ್ದ ಸ್ಥಳೀಯ ರೌಡಿಯೊಬ್ಬ ಹೋಟೆಲಿನವನನ್ನು ಗುಂಡಿಟ್ಟು ಸಾಯಿಸಿದ್ದ.












Click it and Unblock the Notifications