ನಿರಂತರ ಮಳೆ; ಚಿತ್ರದುರ್ಗದಲ್ಲಿ ನೂರಾರು ಎಕರೆ ಈರುಳ್ಳಿಗೆ ತಗುಲಿದ ಕೊಳೆರೋಗ
ಚಿತ್ರದುರ್ಗ, ಆಗಸ್ಟ್ 14: ಕೋಟೆ ನಾಡು ಚಿತ್ರದುರ್ಗದಲ್ಲಿ ಕಳೆದ ಒಂದು ತಿಂಗಳಿನಿಂದ ಮಳೆ ಸುರಿದಿದೆ. ಬರದಿಂದ ತತ್ತರಿಸಿದ್ದ ಜಿಲ್ಲೆಗೆ, ಜಿಲ್ಲೆಯ ರೈತರಿಗೆ ಮಳೆ ಸಂತೋಷವನ್ನು ಕೊಟ್ಟಿದೆ. ಆದರೆ ಈರುಳ್ಳಿ ಬೆಳೆಗಾರರಿಗೆ ಮಾತ್ರ ಆತಂಕ ತಂದಿತ್ತಿದೆ. ರೈತರು ನೂರಾರು ಎಕರೆಗಳಲ್ಲಿ ಈರುಳ್ಳಿ ಬೆಳೆ ಬೆಳೆದಿದ್ದು, ಪ್ರತಿ ದಿನ ಸುರಿಯುತ್ತಿರುವ ಮಳೆಗೆ ಈರುಳ್ಳಿಗೆ "ಕೊಳೆ ರೋಗ" ತಗುಲಿದೆ.
ಹೀಗಾಗಿ ಚಿತ್ರದುರ್ಗದ ರೈತರು ಆತಂಕದ ಸ್ಥಿತಿಯಲ್ಲಿ ಸಿಲುಕಿದ್ದಾರೆ. ಕಳೆದ ವರ್ಷ ಈರುಳ್ಳಿ ಬೆಲೆ ಏರಿಕೆ ಕಂಡಿದ್ದರಿಂದ ಇಲ್ಲಿನ ರೈತರು ಭರ್ಜರಿ ಈರುಳ್ಳಿ ಬೆಳೆದಿದ್ದರು. ಉತ್ತಮ ಇಳುವರಿಯಿಂದ ಒಳ್ಳೆಯ ಲಾಭವನ್ನೇ ಗಳಿಸಿದ್ದರು. ಆದರೆ ಈ ಬಾರಿ ಕೊರೊನಾ ಸೋಂಕಿನಿಂದ ಲಾಕ್ ಡೌನ್ ಮಾಡಿದ್ದು ಈರುಳ್ಳಿ ದರ ಕುಸಿತವಾಯಿತು. ಈಗ ಮಳೆಯಿಂದಾಗಿ ತೊಂದರೆಪಡುವಂತಾಗಿದೆ. ಸತತ ಬರಗಾಲಕ್ಕೆ ತುತ್ತಾಗಿ ತೊಂದರೆ ಅನುಭವಿಸುತ್ತಿದ್ದ ರೈತರಿಗೆ ಮಳೆಯೂ ಸಮಸ್ಯೆ ತಂದೊಡ್ಡಿದೆ.
ಈರುಳ್ಳಿ ಬೆಳೆಗೆ ಅಪಾರ ಹಾನಿ
ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಲೇ ಇದೆ. ಹೀಗೆ ಸುರಿಯುತ್ತಿರುವ ಮಳೆಯಿಂದಾಗಿ ಈರುಳ್ಳಿ ಬೆಳೆಗೆ ಹಾನಿಯಾಗಿದೆ. ಚಿತ್ರದುರ್ಗದಲ್ಲಿ ಬಹುತೇಕ ಈರುಳ್ಳಿ ಬೆಳೆಯುವ ಮಣ್ಣು ಕಪ್ಪಾಗಿದ್ದು ನೀರಿನ ಅಂಶ ಹೆಚ್ಚಿರುತ್ತದೆ. ಕಪ್ಪು ಮಣ್ಣಿಗೆ ನೀರಿನ ಅಂಶವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚು. ಹೀಗಾಗಿ ಸತತ ಮಳೆ ಸುರಿದರೆ ಈರುಳ್ಳಿ ಬೆಳೆ ಇಳುವರಿ ಬರದೆ ರೋಗಕ್ಕೆ ತುತ್ತಾಗುವ ಸಾಧ್ಯತೆ ದಟ್ಟವಾಗಿರುತ್ತದೆ. ಅದರಲ್ಲೂ ಈಗ ಜಿಟಿ ಜಿಟಿ ಮಳೆ ಸುರಿಯುತ್ತಲೇ ಇರುವುದರಿಂದ ತೊಂದರೆ ತಪ್ಪಿದ್ದಲ್ಲ.
ಚಿತ್ರದುರ್ಗದ ರೈತ ಮಹಿಳೆಗೆ ನೀರಾವರಿ ಸೌಲಭ್ಯದ ಆಶ್ವಾಸನೆ ಕೊಟ್ಟ ಸಿಎಂ
ಈರುಳ್ಳಿಗೆ ಕೊಳೆ ರೋಗ
ಕಳೆದ ಬಾರಿ ಮಳೆ ಕೈಕೊಟ್ಟರೂ ನೂರಾರು ಎಕರೆ ಈರುಳ್ಳಿ ಬೆಳೆಯುವ ಮೂಲಕ ಇಲ್ಲಿನ ರೈತರು ಲಾಭ ಗಳಿಸಿದ್ದರು. ಈ ಬಾರಿ ಸಾಕಷ್ಟು ಬಂಡವಾಳ ಹೂಡಿಕೆ ಮಾಡಿ ರೈತರು ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಲಾಕ್ ಡೌನ್ ಆದ ಪರಿಣಾಮ ಈರುಳ್ಳಿ ಬೀಜ, ಗೊಬ್ಬರ, ಬಾಡಿಗೆ, ಕೂಲಿಕಾರರ ಬೆಲೆ, ಔಷಧಿಗಳ ದರ ಗಗನಕ್ಕೆ ಏರಿದೆ. ಈ ನಡುವೆ ಈರುಳ್ಳಿ ಬೆಳೆಗೆ ಕೊಳೆ ರೋಗ ಕಾಣಿಸಿಕೊಂಡಿದೆ.
70% ಬೆಳೆಗೆ ಕೊಳೆ ರೋಗ
ಈರುಳ್ಳಿ ಒಳ್ಳೆ ಇಳುವರಿ ಬರುವ ಸಮಯದಲ್ಲಿ ರೋಗಬಾಧೆ ಆವರಿಸಿದ್ದು, ಈರುಳ್ಳಿ ಚಿಕ್ಕದಿದ್ದಾಗಲೇ ಮುರುಟಿದಂತೆ ಕಾಣುತ್ತಿವೆ. ಹತ್ತಾರು ಎಕರೆಗಳಲ್ಲಿ ಸಾವಿರಾರು ಪ್ಯಾಕೆಟ್ ಈರುಳ್ಳಿ ಬೆಳೆಯುತ್ತಿದ್ದು, 70% ಈರುಳ್ಳಿ ಕೊಳೆರೋಗಕ್ಕೆ ತುತ್ತಾಗಿದೆ. ಈರುಳ್ಳಿ ಬೆಳೆದು ನಷ್ಟ ಅನುಭವಿಸಿದ ರೈತರಿಗೆ ರಾಜ್ಯ ಸರ್ಕಾರ ನೆರವಿಗೆ ಧಾವಿಸಿ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಕೇಳಿಕೊಂಡಿದ್ದಾರೆ.
ಗುಂಡ್ಲುಪೇಟೆಯಲ್ಲಿ ನಷ್ಟಕ್ಕೆ ಕಂಗೆಟ್ಟು ಈರುಳ್ಳಿ ಹೊಲವನ್ನು ಟ್ರ್ಯಾಕ್ಟರ್ ನಿಂದ ಉಳುಮೆ ಮಾಡಿದ ರೈತ
ಚಿತ್ರದುರ್ಗಕ್ಕೆ ಇಂದು ಕೃಷಿ ಸಚಿವರ ಭೇಟಿ
ಕಳೆದ ಒಂದು ತಿಂಗಳಲ್ಲಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಿದ್ದು ಈರುಳ್ಳಿ ಬೆಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ಬರೆ ಎಳೆದಂತಾಗಿದೆ. ಚಿತ್ರದುರ್ಗ ಜಿಲ್ಲೆಯ ದ್ಯಾಮವ್ವನಹಳ್ಳಿ, ಕಲ್ಲಹಳ್ಳಿ, ಲಿಂಗಾವರಹಟ್ಟಿ ಸೇರಿ ಅನೇಕ ಗ್ರಾಮಗಳಲ್ಲಿ ಪ್ರತಿ ವರ್ಷ ನೂರಾರು ಎಕರೆ ಈರುಳ್ಳಿ ಬೆಳೆಯುತ್ತಾರೆ. ಆದರೆ ಪರಿಸ್ಥಿತಿ ಹೀಗಾದರೆ ಮುಂದಿನ ಕಥೆಯೇನು ಎಂಬ ಚಿಂತೆ ಇಲ್ಲಿನ ರೈತರದ್ದು. ಇಂದು ಚಿತ್ರದುರ್ಗಕ್ಕೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಭೇಟಿ ನೀಡುತ್ತಿದ್ದು, ಯಾವ ರೀತಿ ಕ್ರಮ ತೆಗೆದುಕೊಳ್ಳುವರು ನೋಡಬೇಕಿದೆ.