ಮೈಸೂರಲ್ಲಿ ಆನೆ ದಾಳಿಗೆ ರೈತ ಬಲಿ, ಇಬ್ಬರಿಗೆ ಗಾಯ
ಮೈಸೂರು ಡಿಸೆಂಬರ್, 10: ಆನೆಗಳು ಕಾಡಿಗೆ ತೆರಳಿವೆ, ಆನೆ ಉಪಟಳ ಇನ್ನಿಲ್ಲ ಎಂದು ಜನರು ನಿಟ್ಟುಸಿರು ಬಿಡುವಷ್ಟರಲ್ಲೇ ಒಂಟಿ ಸಲಗವೊಂದು ರೈತನನ್ನು ತುಳಿದು ಸಾಯಿಸಿದೆ. ಜೊತೆಗಿದ್ದ ಆತನ ಪತ್ನಿಯ ಕೈ ಮುರಿದಿದ್ದು, ಮತ್ತೊಬ್ಬ ರೈತನ ಕಾಲು ಮುರಿದು ಗಾಯಗೊಳಿಸಿದೆ.
ದೊಡ್ಡ ಹುಂಡಿ ಗ್ರಾಮದ ಮಹದೇವಸ್ವಾಮಿ(48) ಮೃತಪಟ್ಟವರು, ಪತ್ನಿ ರಾಣಿ ಗಾಯಗೊಂಡವರು. ಈ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಗುರುವಾರ ನಡೆದಿದೆ.[ಮದವೇರಿದ ಗಜೇಂದ್ರನ ಪುಂಡಾಟಕ್ಕೆ ಆನೆ, ಕಾವಾಡಿ ಬಲಿ]

ಘಟನೆಯ ವಿವರ:
ಕೃಷ್ಣಾಪುರ ಗ್ರಾಮದ ಮುಂಭಾಗದ ಜಮೀನೊಂದರಲ್ಲಿ 10 ಆನೆಗಳ ಹಿಂಡು ಬೀಡು ಬಿಟ್ಟಿದ್ದವು. ಕೃಷ್ಣಾಪುರ, ಕಸುವಿನಹಳ್ಳಿ, ಸಿದ್ದಯ್ಯನಹುಂಡಿ, ಕೂಗಲೂರು ಗ್ರಾಮಗಳ ನೂರಾರು ರೈತರು ಅವುಗಳನ್ನು ಓಂಕಾರ ಅರಣ್ಯ ವಲಯದತ್ತ ಅಟ್ಟಿಸಿಕೊಂಡು ಹೋಗುತ್ತಿದ್ದರು.
ಆ 10 ಆನೆಗಳ ಮಧ್ಯೆ ತಪ್ಪಿಸಿಕೊಂಡ ಒಂದು ಆನೆ ಕೃಷ್ಣಾಪುರದ ಗ್ರಾಮದ ಜಮೀನಿನಲ್ಲಿ ಹತ್ತಿ ಬಿಡಿಸುತ್ತಿದ್ದ ಮಹದೇವಸ್ವಾಮಿ, ಪತ್ನಿ ರಾಣಿ, ಮಕ್ಕಳಾದ ಆದಿತ್ಯ, ರಕ್ಷಿತ ಅವರ ಮೇಲೆ ದಾಳಿ ಮಾಡಿದೆ.[ಪ್ರಾಣಿಗಳ ಮೂತ್ರ ವಾಸನೆ ಬಂದೆಡೆ ಆನೆಗಳು ಸುಳಿಯುವುದಿಲ್ಲವಂತೆ!]

ಆನೆ ದಾಳಿಗೆ ರೈತ ಮಹದೇವಸ್ವಾಮಿ ಸಿಕ್ಕಿ ಹಾಕಿಕೊಂಡಿದ್ದರಿಂದ ಆತನನ್ನು ತುಳಿದು ಸಾಯಿಸಿ ಪತ್ನಿ ರಾಣಿಯನ್ನು ಸೊಂಡಿಲಿನಿಂದ ಎಸೆದಿದೆ. ಪರಿಣಾಮ ಅವರ ಬಲಕೈ ಮುರಿದಿದೆ ಮಕ್ಕಳು ಕಿರುಚುತ್ತಾ ಹೆದರಿ ಓಡಿ ತಪ್ಪಿಸಿಕೊಂಡಿದ್ದಾರೆ.
ಅಲ್ಲಿಂದ ಮುಂದೆ ತೆರಳಿದ ಕಾಡಾನೆ ಮಹದೇವಪ್ಪ ಎಂಬುವರ ಮೇಲೆ ದಾಳಿ ಮಾಡಿ ಅವರ ಬಲಗಾಲು ಮುರಿದು ಗಂಭೀರ ಗಾಯ ಗೊಳಿಸಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications