ಉ.ಪ್ರ. : ರೊಚ್ಚಿಗೆದ್ದ ರೈತರಿಂದ 2 ಜವಾನರ ಹತ್ಯೆ
ಉತ್ತರ ಪ್ರದೇಶದ ಭೂ ಸ್ವಾಧೀನದ ನೀತಿ ಮತ್ತು ಪರಿಹಾರವಾಗಿ ನೀಡುತ್ತಿರುವ ಕಡಿಮೆ ಬೆಲೆಯಿಂದಾಗಿ ರೈತಲು ಸರಕಾರದ ವಿರುದ್ಧವೇ ತಿರುಗಿಬಿದ್ದಿದ್ದಾರೆ. ರೈತರು ಉತ್ತರ ಪ್ರದೇಶ ರೋಡ್ ವೇಸ್ ನ ಮೂವರನ್ನು ಅಪಹರಿಸಿದ್ದಾರೆ. ಅಪಹೃತರನ್ನು ಕಾಪಾಡಲು ಪೊಲೀಸರು ಮುಂದಾದಾಗ ರೈತರು ಹಿಂಸೆಗಿಳಿದು ಪ್ರತಿದಾಳಿ ನಡೆಸಿದ್ದಾರೆ. ರೈತರ ಬಳಿ ಬಂದೂಕುಗಳು ಎಲ್ಲಿಂದ ಬಂದವೆಂಬದು ಯಕ್ಷ ಪ್ರಶ್ನೆಯಾಗಿ ಪೊಲೀಸರನ್ನು ಕಾಡುತ್ತಿದೆ.
ನೂರಾರು ಸಂಖ್ಯೆಯಲ್ಲಿ ತಿರುಗಿಬಿದ್ದಿರುವ ರೈತರ ದಾಳಿಗೆ ಪ್ರತಿದಾಳಿಯಾಗಿ ಪೊಲೀಸರು ಗಾಳಿಯಲ್ಲಿ ಗುಂಡು ಮತ್ತು ಅಶ್ರುವಾಯುವನ್ನು ಸಿಡಿಸುತ್ತಿದ್ದಾರೆ. ಆದರೂ ಪರಿಸ್ಥಿತಿ ತಹಬದಿಗೆ ಬಂದಿಲ್ಲ. ರೈತರು ಕೋಲುಗಳಿಂದ ದಾಳಿ ನಡೆಸುತ್ತಿದ್ದು, ಪೊಲೀಸರ ಮೇಲೆ ಕಲ್ಲುಗಳನ್ನು ಎಸೆಯುತ್ತಿದ್ದಾರೆ. ಪೊಲೀಸರಿಗಿಂತ ರೈತರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ರೊಚ್ಚಿಗೆದ್ದ ರೈತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ.
ಕರ್ನಾಟಕದಲ್ಲಿಯೂ ಭೂ ಸ್ವಾಧೀನ ಪ್ರಕ್ರಿಯೆ ರೈತರು ಮತ್ತು ಸರಕಾರದ ನಡುವೆ ಸಾಕಷ್ಟು ಸಂಘರ್ಷಗಳಿಗೆ ಎಡೆಮಾಡಿಕೊಟ್ಟಿದೆ. ಮಾರುಕಟ್ಟೆ ದರಕ್ಕಿಂತ ಅತಿ ಕಡಿಮೆ ಬೆಲೆ ಪರಿಹಾರವನ್ನು ಸರಕಾರ ನೀಡುತ್ತಿರುವುದು ರೈತರು ದಂಗೆಯೇಳುವಂತೆ ಮಾಡಿದೆ. ಆದರೆ, ಇಲ್ಲಯವರೆಗೆ ರೈತರು ಶಾಂತರೀತಿಯಿಂದಲೇ ಪ್ರತಿಭಟನೆ ನಡೆಸುತ್ತಿದ್ದಾರೆ.