6 ಕೋಟಿ ರೈತರಿಗೆ 12,000 ಕೋಟಿ ರೂ ಹಂಚಿಕೆ ಮಾಡಲಿದ್ದಾರೆ ಮೋದಿ
Recommended Video
ಬೆಂಗಳೂರು, ಜನವರಿ 2: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ 'ಆದಾಯ ಬೆಂಬಲ ಯೋಜನೆ'ಗೆ (ಪಿಎಂ-ಕಿಸಾನ್) ಮತ್ತಷ್ಟು ಉತ್ತೇಜನ ನೀಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ತುಮಕೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗುರುವಾರ 6 ಕೋಟಿ ರೈತರಿಗೆ 12,000 ಕೋಟಿ ರೂ. ಮೊತ್ತವನ್ನು ಇ-ವರ್ಗಾವಣೆ ಮೂಲಕ ವಿತರಿಸಲಿದ್ದಾರೆ.
ಇದು ದೇಶದ ವಿವಿಧೆಡೆ ಜನವರಿಯಲ್ಲಿ ಆಚರಿಸಲಾಗುವ ಮಕರ ಸಂಕ್ರಾಂತಿ, ಬಿಹು ಮತ್ತು ಪೊಂಗಲ್ನಂತಹ ಸುಗ್ಗಿ ಹಬ್ಬಕ್ಕೂ ಮುನ್ನ ಭೂಮಿ ಹೊಂದಿರುವ ರೈತರ ಕೈಗೆ ತಲಾ 2,000 ರೂ. ಸಿಗುವಂತೆ ಮಾಡಲು ನೆರವಾಗಲಿದೆ.
ಪಿಎಂ-ಕಿಸಾನ್ (ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ) ಯೋಜನೆಯು ಈಗಾಗಲೇ 2019ರ ಫೆ.24ರಿಂದ ಜಾರಿಯಲ್ಲಿದೆ. 2,000 ರೂ. ಹಣವು ನೋಂದಣಿ ಮಾಡಿಕೊಂಡ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮೆಯಾಗಲಿದೆ. ಪ್ರಧಾನಿ ಮೋದಿ ಗುರುವಾರ ಬಿಡುಗಡೆ ಮಾಡಲಿರುವ ಮೊತ್ತವು ಪ್ರಸ್ತುತ ಹಣಕಾಸು ವರ್ಷದ ಮೂರನೇ ಕಂತಿನದ್ದಾಗಿರಲಿದೆ.

ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಈ ಯೋಜನೆಗೆ ಚಾಲನೆ ನೀಡಿದ ಸಂದರ್ಭದಲ್ಲಿ 1.01 ಕೋಟಿಗೂ ಅಧಿಕ ರೈತರ ಬ್ಯಾಂಕ್ ಖಾತೆಗಳಿಗೆ 2,000 ಕೋಟಿ ರೂ.ಗೂ ಹೆಚ್ಚು ಹಣವನ್ನು ಜಮೆ ಮಾಡಲಾಗಿತ್ತು. ಗುರುವಾರ ಹಂಚಿಕೆ ಮಾಡಲಿರುವ ಪಿಎಂ-ಕಿಸಾನ್ ನಿಧಿಯಲ್ಲಿನ ಮೊತ್ತವು ಈ ಹಣಕಾಸು ವರ್ಷದಲ್ಲಿ ಬಾಕಿ ಉಳಿದಿರುವ ಮೊದಲ ಎರಡು ಕಂತುಗಳನ್ನು ಒಳಗೊಳ್ಳುವುದಿಲ್ಲ. ಜುಲೈ ಹಾಗೂ ನವೆಂಬರ್ನಲ್ಲಿ ಮೊದಲ ಎರಡು ಕಂತುಗಳಲ್ಲಿ ಹಣ ಜಮೆ ಮಾಡಲಾಗಿತ್ತು. ಆದರೆ ಇದು ನೋಂದಣಿ ಮಾಡಿಕೊಂಡ ಎಲ್ಲರಿಗೂ ತಲುಪುವಲ್ಲಿ ವಿಫಲವಾಗಿತ್ತು.












Click it and Unblock the Notifications