ಮಳೆ ಆರಂಭ; ಬೆಳೆ ವಿಮೆ ಪಡೆಯಲು ರೈತರಿಗೆ ಕೃಷಿ ಇಲಾಖೆ ಕರೆ
ಧಾರವಾಡ, ಜೂನ್ 25; ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಮಳೆ ಆರಂಭವಾಗಿದೆ. ಕೃಷಿ ಚಟುವಟಿಕೆಗಳನ್ನು ರೈತರು ಪ್ರಾರಂಭಿಸಿದ್ದಾರೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ಬೆಳೆ ವಿಮೆ ಪಡೆಯಲು ರೈತರಿಗೆ ಕೃಷಿ ಇಲಾಖೆ ಸಲಹೆಗಳನ್ನು ನೀಡಿದೆ.
ಧಾರವಾಡದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ರೈತರಿಗೆ ಬೆಳೆ ವಿಮೆ ಬಗ್ಗೆ ಮಾಹಿತಿ ನೀಡಿದ್ದಾರೆ. ಕರ್ನಾಟಕ ಸರ್ಕಾರ 2023ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಧಾರವಾಡದ 8 ತಾಲ್ಲೂಕಿನ ಎಲ್ಲಾ 14 ಹೋಬಳಿಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ಆಸಕ್ತ ರೈತರು ಈ ಕುರಿತು ಬೆಳೆ ವಿಮೆ ಪಡೆಯುವಂತೆ ಮನವಿ ಮಾಡಲಾಗಿದೆ.

ಜಿಲ್ಲೆಯಲ್ಲಿ ಯೋಜನೆಯ ವ್ಯಾಪ್ತಿಗೆ ಹೋಬಳಿ ಮಟ್ಟದ ಒಟ್ಟು 14 ಬೆಳೆಗಳನ್ನು ಪಟ್ಟಿ ಮಾಡಲಾಗಿದೆ. ಭತ್ತ (ನೀ.), ಭತ್ತ (ಮ.ಆ.), ಮುಸುಕಿನ ಜೋಳ (ನೀ.), ಮುಸುಕಿನ ಜೋಳ (ಮ.ಆ.), ಜೋಳ (ಮ.ಆ.), ಸಾವೆ (ಮ.ಆ), ಉದ್ದು (ಮ.ಆ.), ತೊಗರಿ (ಮ.ಆ.), ಹೆಸರು (ಮ.ಆ.), ಸೋಯಾಅವರೆ (ಮ.ಆ.), ನೆಲಗಡಲೆ (ಶೇಂಗಾ) (ಮ.ಆ.), ನೆಲಗಡಲೆ (ಶೇಂಗಾ) (ನೀ.), ಹತ್ತಿ (ಮ.ಆ.), ಹತ್ತಿ (ನೀ.), ಈರುಳ್ಳಿ (ಮ.ಆ.), ಈರುಳ್ಳಿ (ನೀ.), ಆಲೂಗಡ್ಡೆ (ನೀ.), ಆಲೂಗಡ್ಡೆ (ಮ.ಆ.), ಟೊಮ್ಯಾಟೊ, ಕೆಂಪು ಮೆಣಸಿನಕಾಯಿ (ಮ.ಆ.) ಮತ್ತು ಕೆಂಪು ಮೆಣಸಿನಕಾಯಿ (ನೀ.) ಬೆಳಗಳಿವೆ.
ಗ್ರಾಮ ಪಂಚಾಯತಿ ಮಟ್ಟದ ಬೆಳೆಗಳು: ಧಾರವಾಡ ಮತ್ತು ಅಳ್ನಾವರ ತಾಲ್ಲೂಕುಗಳಲ್ಲಿ ಭತ್ತ (ಮಳೆ ಆಶ್ರಿತ), ಕಲಘಟಗಿ ತಾಲ್ಲೂಕು ಭತ್ತ (ಮಳೆ ಆಶ್ರಿತ), ಮುಸುಕಿನಜೋಳ (ಮಳೆ ಆಶ್ರಿತ) ಹುಬ್ಬಳ್ಳಿ, ಹುಬ್ಬಳ್ಳಿ ನಗರ ತಾಲ್ಲೂಕುಗಳಿಗೆ ನೆಲಗಡಲೆ (ಶೇಂಗಾ) (ಮಳೆ ಆಶ್ರಿತ) ಕುಂದಗೋಳ ತಾಲ್ಲೂಕು ನೆಲಗಡಲೆ (ಶೇಂಗಾ) (ಮಳೆ ಆಶ್ರಿತ) ಮತ್ತು ಹತ್ತಿ (ಮಳೆ ಆಶ್ರಿತ) ನವಲಗುಂದ ಮತ್ತು ಅಣ್ಣಿಗೇರಿ ತಾಲೂಕು ಮುಸುಕಿನಜೋಳ (ಮಳೆಆಶ್ರಿತ), ಹೆಸರು (ಮಳೆ ಆಶ್ರಿತ) ಬೆಳೆಗಳು ಸೇರಿವೆ.
ಬೆಳೆಸಾಲ ಪಡೆಯುವ ಹಾಗೂ ಪಡೆಯದ ರೈತರಿಗೆ, ಇತರೆ ಬೆಳೆಗಳಿಗೆ ಜುಲೈ 31 ಮತ್ತು ಕೆಂಪು ಮೆಣಸಿನಕಾಯಿ (ನೀರಾವರಿ ಹಾಗೂ ಮಳೆ ಆಶ್ರಿತ) ಬೆಳೆಗೆ ಅರ್ಜಿ ಸಲ್ಲಿಸಲು ಆಗಸ್ಟ್ 16 ಕೊನೆಯ ದಿನವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆಸಕ್ತ ರೈತರು ಹೆಚ್ಚಿನ ಮಾಹಿತಿಗಾಗಿ ಎಸ್ಬಿಐ ಜನರಲ್ ಇನ್ಶ್ಯೂರೆನ್ಸ್ ಕಂಪನಿ, 2ನೇ ಮಹಡಿ, ಕಲಬುರಗಿ ಹಾಲ್ ಮಾರ್ಕ್, ಪಿಂಟೋ ರೋಡ್, ದೇಸಾಯಿ ಕ್ರಾಸ್ ದೇಶಪಾಂಡೆ ನಗರ, ಹುಬ್ಬಳ್ಳಿ, ಸ್ಥಳೀಯ ತೋಟಗಾರಿಕೆ ಇಲಾಖೆ, ಕಂದಾಯ, ಗ್ರಾಮೀಣ ಅಭಿವೃದ್ಧಿ, ಕೃಷಿ ಇಲಾಖೆ ಸಿಬ್ಬಂದಿ ಮತ್ತು ಸ್ಥಳಿಯ ಹಣಕಾಸು ಸಂಸ್ಥೆಗಳಾದ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್, ಸೇವಾ ಬ್ಯಾಂಕುಗಳ ಸಿಬ್ಬಂದಿಯವರನ್ನು ಇವರನ್ನು ಸಂಪರ್ಕಿಸಬಹುದು.
ತೋಟಗಾರಿಕೆ ಬೆಳೆ ಸಹಾಯಧನ ವಿಸ್ತರಣೆ; ಧಾರವಾಡ ಜಿಲ್ಲೆಯ ತೋಟಗಾರಿಕೆ ಇಲಾಖೆಯಲ್ಲಿ 2023-24ನೇ ಸಾಲಿನ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೊಸ ಪ್ರದೇಶ ವಿಸ್ತರಣೆಯಡಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಸಹಾಯಧನ ವಿತರಣೆ ಮಾಡಲಾಗುತ್ತಿದೆ.
ತೆಂಗು, ಅಡಿಕೆ, ಸಪೋಟ, ಗೇರು, ಮಾವು, ದಾಳಿಂಬೆ, ಪೇರಲ, ಬಾಳೆ, ಗುಲಾಬಿ, ಕರಿಬೇವು, ಮಲ್ಲಿಗೆ, ಪಪ್ಪಾಯಿ, ನುಗ್ಗೆ ಮತ್ತು ಇನ್ನಿತರೆ ತೋಟಗಾರಿಕೆ ಬೆಳೆಗಳನ್ನು ಅಭಿವೃದ್ದಿಪಡಿಸಲು, ಸಾಂಬಾರು ಮತ್ತು ಅಪ್ರಧಾನ ಹಣ್ಣುಗಳನ್ನು ಗುಚ್ಚ ಮಾದರಿಯಲ್ಲಿ ಅಭಿವೃದ್ದಿಪಡಿಸಲು ಹಾಗೂ ಹನಿನೀರಾವರಿ ಒಗ್ಗೂಡಿಸುವಿಕೆಗೆ ಸಹಾಯಧನ ಸೌಲಭ್ಯಗಳಿವೆ ಎಂದು ಮಾಹಿತಿ ನೀಡಲಾಗಿದೆ.
ಆಸಕ್ತ ರೈತರು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಮತ್ತು ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರುಗಳನ್ನು ಸಂಪರ್ಕಿಸಬಹುದೆಂದು ಧಾರವಾಡ ತೋಟಗಾರಿಕೆ ಉಪನಿರ್ದೇಶಕರ ಪ್ರಕಟಣೆ ಹೇಳಿದೆ.












Click it and Unblock the Notifications