ರೈತರೊಂದಿಗೆ ಒಂದು ದಿನ; ಭತ್ತ ನಾಟಿ ಮಾಡಿದ ಕೃಷಿ ಸಚಿವರು
ದಾವಣಗೆರೆ, ಜನವರಿ 12: ರೈತರೊಂದಿಗೆ ಒಂದು ದಿನ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಕೃಷಿ ಸಚಿವ ಬಿ. ಸಿ. ಪಾಟೀಲ್ ದಾವಣಗೆರೆಯಲ್ಲಿ ಗೋ ಪೂಜೆ ಮಾಡಿದರು. ರೈತರ ಗದ್ದೆಯಲ್ಲಿ ಯಾಂತ್ರಿಕೃತ ಭತ್ತದ ನಾಟಿಗೆ ಚಾಲನೆಯನ್ನು ನೀಡಿದರು.
ಮಂಗಳವಾರ ಕೃಷಿ ಸಚಿವರು ಹೊನ್ನಾಳಿ ತಾಲೂಕಿನ ಶ್ರೀನಿವಾಸ್ ಎಂಬುವರ ಹೊಲದಲ್ಲಿ ಪ್ರಗತಿಪರ ರೈತರೊಂದಿಗೆ ಒಂದು ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಮ್ಮಾರಗಟ್ಟೆಯಲ್ಲಿ ರೈತರೊಂದಿಗೆ ಒಂದು ದಿನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರು, ಗೋಪೂಜೆ ನೆರವೇರಿಸಿದರು. ಬಳಿಕ ರೈತರೊಂದಿಗೆ ಚರ್ಚೆ ನಡೆಸಿದರು. ಗೋಮೂತ್ರದಿಂದ ಜೀವಾಮೃತ ಮಾಡಿ ಅಡಿಕೆ ಮರಗಳಿಗೆ ಸಿಂಪರಣೆ ಮಾಡಿ. ರಾಸಾಯನಿಕ ಮುಕ್ತ ಬೆಳೆ ಬೆಳೆಯುವುದಕ್ಕೆ ಮತ್ತು ಸಾವಯವ ಬೆಳೆಗಳನ್ನು ಬೆಳೆಯುವುದಕ್ಕೆ ಉತ್ತೇಜನ ನೀಡಿದರು.

"ಸಾವಯವ ಕೃಷಿಯಲ್ಲಿ ಬೆಳೆದ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಮತ್ತು ಗೋಮೂತ್ರದಿಂದ ಮಾಡಿದಂಥ ಔಷಧಿ ಸೇವಿಸಿದರೆ ಕೆಮ್ಮು, ಶೀತಜ್ವರ ಬರುವುದಿಲ್ಲ. ಗೋಮೂತ್ರ ಬೆಳೆಗಳಿಗೆ ಹಾಕುವುದರಿಂದ ರೋಗ ನಿರೋಧಕ ಶಕ್ತಿ ಬೆಳೆಗಳಿಗೆ ಬರುತ್ತದೆ, ಸಸ್ಯಗಳು ಬಲಿಷ್ಠವಾಗಿ ಆರೋಗ್ಯವಾಗಿ ಇಳುವರಿಯನ್ನು ಕೊಡುತ್ತವೆ" ಎಂದರು.
"ಭತ್ತ ನಾಟಿಯನ್ನು ಮಾಡಲು ಹೆಚ್ಚಿನ ಜನರು ಬೇಕಾಗಿತ್ತು. ಅತ್ಯಾಧುನಿಕ ಯಂತ್ರವನ್ನು ಉಪಯೋಗಿಸಿ ನಾಟಿ ಮಾಡಿದರೆ ಕಾರ್ಮಿಕ ಸಮಸ್ಯೆ ಪರಿಹಾರವಾಗುತ್ತದೆ. ಹೆಚ್ಚಿನ ಇಳುವರಿಯನ್ನು ಸಹ ಪಡೆಯಬಹುದಾಗಿದೆ" ಎಂದು ಬಿ. ಸಿ. ಪಾಟೀಲ್ ಹೇಳಿದರು.

ರೈತರ ಜೊತೆ ಸಂವಾದ ನಡೆಸಿದ ಸಚಿವರು, ರೈತ ಶ್ರೀನಿವಾಸ್ ಅವರನ್ನು ಸನ್ಮಾನಿಸಿದರು. ಜಿಲ್ಲಾ ಉಸ್ತವಾರಿ ಸಚಿವರಾದ ಬೈರತಿ ಬಸವರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಉಮಾ ರಮೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಆರ್. ಮಹೇಶ್ ಇತರರು ಜೊತೆಗಿದ್ದರು.











Click it and Unblock the Notifications