ಹಸಿದ ಅನ್ನದಾತರ ಹೊಟ್ಟೆ ತುಂಬಿಸಲಿದೆ ಡಿಸಿಸಿ ಬ್ಯಾಂಕ್: ಕೆಎನ್ನಾರ್
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಧುಗಿರಿ ಶಾಸಕರಾಗಿರುವ ಕೆಎನ್ ರಾಜಣ್ಣ ಅವರು ತುಮಕೂರು ಜಿಲ್ಲೆಯ ಎಲ್ಲ ಗೋಶಾಲೆಗಳಲ್ಲೂ ಸದ್ಯದಲ್ಲೇ ಡಿಸಿಸಿ ಬ್ಯಾಂಕ್ ನಿಂದ ರೈತರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ.
ತುಮಕೂರು, ಫೆಬ್ರವರಿ 28: ಬರಗಾಲದ ಮಧ್ಯೆ ತುಮಕೂರು ಜಿಲ್ಲೆಗೆ ಇದು ಒಳ್ಳೆ ಸುದ್ದಿ. ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಹಾಗೂ ಶಾಸಕರಾದ ಕೆಎನ್ ರಾಜಣ್ಣ ಅವರು ಮಧುಗಿರಿಯಲ್ಲಿ ಗೋಶಾಲೆ ಆರಂಭವಾದಂದಿನಿಂದ ಇಡೀ ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ನಿಂದ ಮಧ್ಯಾಹ್ನದ ಊಟಕ್ಕೆ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದಾರೆ.
ಕಳೆದ ವರ್ಷ ಡಿಸಿಸಿ ಬ್ಯಾಂಕ್ ನಿಂದ ಇಡೀ ಜಿಲ್ಲೆಯ ಗೋಶಾಲೆಗಳಲ್ಲಿ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತ್ತು. ಅದಕ್ಕೆ ಐವತ್ತೆರಡು ಲಕ್ಷ ರುಪಾಯಿ ಖರ್ಚಾಗಿತ್ತು ಎಂದು ಒನ್ಇಂಡಿಯಾ ಕನ್ನಡಕ್ಕೆ ಮಾಹಿತಿ ನೀಡಿದ ಅವರು, ಡಿಸಿಸಿ ಬ್ಯಾಂಕ್ ನಿಂದ ಇಂಥದ್ದೊಂದು ಕೆಲಸ ಮಾಡುವುದಕ್ಕೆ ಸಾಧ್ಯ ಅಂದರೆ ಸರಕಾರದಿಂದ ಅಗೋದಿಲ್ಲವಾ? ಆದರೆ ಕೆಲಸ ಮಾಡಲು ಇಚ್ಛೆ ಇರಬೇಕು ಎಂದು ಅವರು ಹೇಳಿದರು.[ಬರ ತಂದ ಕರುಳು ಕತ್ತರಿಸುವಂಥ ಸನ್ನಿವೇಶ, ಅನ್ನದಾತನ ತಟ್ಟೆಯೇ ಖಾಲಿಖಾಲಿ]

ಸದನದಲ್ಲೇ ಈ ಬಗ್ಗೆ ಮುಖ್ಯಮಂತ್ರಿಗಳು ಹೇಳಿದ್ದರು. ಆದರೆ ಅದನ್ನು ಜಾರಿಗೆ ತರುವವರು ಅಧಿಕಾರಿಗಳು. ಗೋಶಾಲೆಗಳಿಗೆ ವಯಸ್ಸಾದವರು, ಮಕ್ಕಳು ಬರ್ತಾರೆ. ನಾನದನ್ನು ನೋಡಿದ್ದೀನಿ. ಸದ್ಯದಲ್ಲೇ ನನ್ನ ಕ್ಷೇತ್ರ ಮಧುಗಿರಿಯಲ್ಲಿ ಗೋಶಾಲೆ ಆರಂಭಿಸಲಾಗುವುದು. ಮೇವಿಗಾಗಿ ಕಾಯ್ತಾ ಇದ್ದೀವಿ. ಅಲ್ಲಿ ಆರಂಭವಾದ ತಕ್ಷಣ ಇಡೀ ಜಿಲ್ಲೆಯಲ್ಲಿ ರೈತರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡ್ತೀವಿ ಎಂದು ತಿಳಿಸಿದರು.
ಇಡೀ ಜಿಲ್ಲೆಯಲ್ಲಿ ನಾವದನ್ನು ಮಾಡ್ತೀವಿ, ಇದನ್ನು ಮಾಡ್ತೀವಿ ಎಂದು ಓಡಾಡುವವರಿಗೆ ಇಂಥದ್ದೆಲ್ಲ ಗೊತ್ತಾಗಲ್ವ? ನಲವತ್ತಕ್ಕೂ ಹೆಚ್ಚು ಗೋಶಾಲೆ ಜಿಲ್ಲೆಯಲ್ಲಿ ತೆರೆಯಲಾಗಿದೆ ಅಂತಾರೆ. ಅದರೆ ಇಪ್ಪತ್ತಕ್ಕಿಂತ ಸ್ವಲ್ಪ ಹೆಚ್ಚು ಗೋಶಾಲೆ ಇರಬಹುದು ಅಷ್ಟೇ. ಅದಕ್ಕೆ ಸಂಬಂಧಿಸಿದ ಹಾಗೆ ಅಂಕಿ-ಅಂಶಗಳನ್ನು ಈಗಾಗಲೇ ತರಿಸಿಕೊಂಡಿದ್ದೀವಿ ಎಂದರು.[ಎಲ್ಲ ಜಾನುವಾರುಗಳಿಗೂ ವಿಮೆ ಸೌಲಭ್ಯಕ್ಕೆ ಸೂಚನೆ: ಸಿದ್ದರಾಮಯ್ಯ]
ತುಮಕೂರು ಜಿಲ್ಲೆಯ ಗೋಶಾಲೆಗಳಿಗೆ ರಾಸು ಕರೆದುಕೊಂಡು ಬರುವ ರೈತರಿಗೆ ಮಧ್ಯಾಹ್ನದ ಊಟ ಒದಗಿಸಿದರೆ ಅನುಕೂಲವಾಗುತ್ತದೆ ಎಂದು ಒನ್ ಇಂಡಿಯಾ ಕನ್ನಡ ವರದಿ ಪ್ರಕಟಿಸಿತ್ತು. ಆ ಹಿನ್ನೆಲೆಯಲ್ಲಿ ಶಾಸಕರೂ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆಎನ್ ರಾಜಣ್ಣ ಅವರನ್ನು ಮಾತನಾಡಿಸಿದಾಗ, ಡಿಸಿಸಿ ಬ್ಯಾಂಕ್ ನಿಂದ ಮಧ್ಯಾಹ್ನದ ಊಟ ಒದಗಿಸುವುದಾಗಿ ತಿಳಿಸಿದರು.












Click it and Unblock the Notifications