ಅಭಿವೃದ್ಧಿ ಹೊಂದಿದ ಊರಿನಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ರೆ ಏನು ಪ್ರಯೋಜನ?: ಆರ್. ಅಶೋಕ್ಗೆ ರೈತ ಸಂಘ ಪ್ರಶ್ನೆ
ಆರ್. ಅಶೋಕ್ ಅವರು ಕಾಟಚಾರಕ್ಕೆ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ ಎಂದು ಚಿಕ್ಕಮಗಳೂರಿನಲ್ಲಿ ರೈತ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ಚಿಕ್ಕಮಗಳೂರು, ಫೆಬ್ರವರಿ, 12: ಐದು ವರ್ಷದಿಂದ ಮಹಾಮಳೆಗೆ ಮಲೆನಾಡು ಕೊಚ್ಚಿ ಹೋಗಿದೆ. ಜನರ ಬದುಕು ಮೂರಾಬಟ್ಟೆಯಾಗಿದೆ. ಇಷ್ಟೆಲ್ಲ ಅವಾಂತರಗಳಿಂದ ಜನ ಮನೆ-ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಎಷ್ಟೋ ಜನಕ್ಕೆ ಇಂದಿಗೂ ಸೂಕ್ತ ರೀತಿಯಲ್ಲಿ ಪುನರ್ವತಿ, ಸೌಲಭ್ಯಗಳು ಸಿಕ್ಕಿಲ್ಲ. ಆರ್ಥಿಕವಾಗಿ ಅನುಕೂಲವಾಗಿದ್ದವರು ಕೂಡ ಇಂದು ನಿರ್ಗತಿಕರಂತೆ ಬದುಕುತ್ತಿದ್ದಾರೆ.
ಹೊಲ-ಗದ್ದೆ-ತೋಟಗಳು ಕೊಚ್ಚಿ ಹೋಗಿವೆ. ಇದೀಗ ಸೌಲಭ್ಯಗಳಿಲ್ಲದೆ ಜನ ಚುನಾವಣೆ ಬಹಿಷ್ಕಾರದಂತಹ ತೀರ್ಮಾನಕ್ಕೆ ಬಂದಿದ್ದಾರೆ. ಆದರೆ, ಸಚಿವ ಅಶೋಕ್ ಮಾತ್ರ ಎಲ್ಲಾ ಸೌಲಭ್ಯವುಳ್ಳ ಊರಿನಲ್ಲಿ ಗ್ರಾಮ ವಾಸ್ತವ್ಯ ಮಾಡಿ ಹೋಗಿದ್ದಾರೆ. ಗ್ರಾಮ ವಾಸ್ತವ್ಯಕ್ಕೆ ಅರ್ಥ ಬರಬೇಕಾದರೆ ಮಲೆನಾಡ ಕುಗ್ರಾಮದಲ್ಲಿ ಮಾಡಬೇಕಿತ್ತು ಎಂದು ಜನ ಸಚಿವ ಅಶೋಕ್ ಗ್ರಾಮ ವಾಸ್ತವ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ವಾರ ಕಂದಾಯ ಸಚಿವ ಆರ್. ಅಶೋಕ್ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಕಡೂರು ತಾಲೂಕಿನ ಹುಲಿಕೆರೆ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದರು. ಆದರೆ, ಇದೀಗ, ರೈತ ಸಮುದಾಯ ಸಚಿವರ ಗ್ರಾಮ ವಾಸ್ತವ್ಯದ ವಿರುದ್ಧ ಆಕ್ರೀಶ ವ್ಯಕ್ತಪಡಿಸಿದೆ. ಹುಲಿಕೆರೆ ಬಯಲುಸೀಮೆ ಭಾಗವಾಗಿದೆ. ಅಲ್ಲಿ ಮೊದಲು ಸಾಕಷ್ಟು ಸಮಸ್ಯೆಗಳಿದ್ದವು, ಆದರೆ ಈಗಿಲ್ಲ. ಕಳೆದ ಎರಡು ವರ್ಷಗಳಿಂದ ಸಮೃದ್ಧ ಮಳೆ-ಬೆಳೆಯಾಗಿ ಅಲ್ಲಿನ ಜನ ಚೆನ್ನಾಗಿದ್ದಾರೆ. ಆದರೆ, ಆರ್.ಅಶೋಕ್ ಬಂದು ಹೋಗುವುದಕ್ಕೆ ಅನುಕೂಲವಾಗಲೆಂದು ಇಲ್ಲಿ ವಾಸ್ತವ್ಯ ಮಾಡಿದ್ದಾರೆ ಎಂದು ರೈತ ಸಂಘ ಆರೋಪಿಸಿದೆ.

ಕೆಲವು ಗ್ರಾಮಗಳಲ್ಲಿ ಮೂಲಸೌಲಭ್ಯಗಳೇ ಇಲ್ಲ
ಅಲ್ಲಿರುವವರು ರೈತರೇ, ಕಷ್ಟದಲ್ಲಿದ್ದಾರೆ ನಿಜ. ಆದರೆ, ಕಳೆದ ಐದು ವರ್ಷದಿಂದ ಭಾರಿ ಮಳೆ ಸುರಿದ ಪರಿಣಾಮ ಮಲೆನಾಡಿಗರ ಬದುಕು ಬೀದಿಗೆ ಬಿದ್ದಿದೆ. ರಸ್ತೆ, ನೀರು, ವಿದ್ಯುತ್ ಇಲ್ಲದ ಗ್ರಾಮಗಳು ನೂರಾರು ಇವೆ. ಅಲ್ಲಿ ಸಚಿವರು ವಾಸ್ತವ್ಯ ಮಾಡಿದ್ದರೆ ಅವರ ವಾಸ್ತವ್ಯಕ್ಕೆ ಅರ್ಥ ಬರುತ್ತಿತ್ತು. ಜನರ ಸಮಸ್ಯೆ ಸರ್ಕಾರ ಹಾಗೂ ಅಧಿಕಾರಿಗಳಿಗೆ ಮುಟ್ಟುತ್ತಿತ್ತು. ಒಂದಷ್ಟು ಸೌಲಭ್ಯಗಳಿಂದ ಜನರ ಬದುಕು ಹಸನಾಗುತ್ತಿತ್ತು. ಆದರೆ, ಸಚಿವರು ರಸ್ತೆ ಬದಿಯ ಊರಿನಲ್ಲಿ ವಾಸ್ತವ್ಯ ಮಾಡಿದ್ದು ಏಕೆ? ಎಂದು ಪ್ರಶ್ನಿಸಿದ್ದಾರೆ. ಸಚಿವರ 16ನೇ ಗ್ರಾಮ ವಾಸ್ತವ್ಯ ಲೆಕ್ಕದ ಜೊತೆ ಬಂದು ಹೋದರೂ ಎಂಬ ದಾಖಲೆಗಾಗಿ ವಾಸ್ತವ್ಯ ಮಾಡಿದಂತಿದೆ ಎಂದು ಸ್ಥಳೀಯರು ಆಕ್ರಿಶ ಹೊರಹಾಕಿದರು.

ಜಲಾವೃತವಾಗಿದ್ದ ಹಲವು ಗ್ರಾಮಗಳು
ಕಳೆದ ಐದು ವರ್ಷದಿಂದ ಮೂಡಿಗೆರೆ-ಶೃಂಗೇರಿ ಹಾಗೂ ಕಳಸ ತಾಲೂಕಿನಲ್ಲಿ ಯತೇಚ್ಛವಾಗಿ ಮಳೆ ಸುರಿದಿದೆ. 2019ರ ಆಗಸ್ಟ್ ಮಳೆಗೆ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ, ಮಲೆಮನೆ, ಮದುಗುಂಡಿ, ಬಿದಿರುತಳ, ಆಲೇಖಾನ್ ಹೊರಟ್ಟಿ ಗ್ರಾಮಗಳು ಜಲಾವೃತವಾಗಿದ್ದರು. ಮಲೆಮನೆ ಗ್ರಾಮದಲ್ಲಿ ಆರು ಮನೆ ನೆಲಸಮವಾಗಿದ್ದವು. ಈ ರೀತಿಯ ಹಲವು ಗ್ರಾಮಗಳಿವೆ. ಅಲ್ಲಿಂದ ಸರ್ಕಾರದ ಪುನರ್ವತಿಗೆ ಬಂದ ಜನ ರಸ್ತೆ, ನೀರು , ಚರಂಡಿ, ವಿದ್ಯುತ್ ಏನೂ ಇಲ್ಲ ಅಂತ ಚುನಾವಣೆ ಬಹಿಷ್ಕಾರಕ್ಕೂ ಮುಂದಾಗಿದ್ದಾರೆ.

ಜಲಾವೃತ, ನಾಶವಾದ ಬೆಳೆಗಳ ವಿವರ
ಕಾಫಿ, ಮೆಣಸು, ಅಡಿಕೆ, ಏಲಕ್ಕಿ ಸೇರಿದಂತೆ ವಿವಿಧ ಬೆಳೆಗಳು ಮಣ್ಣು ಪಾಲಾಗಿ ರೈತರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಹೆಕ್ಟೇರ್ಗಟ್ಟಲೇ ಹೊಲ-ಗದ್ದೆ-ತೋಟಗಳು ಕೊಚ್ಚಿ ಹೋಗಿವೆ. ಮನೆ ಕಳೆದುಕೊಂಡ ಎಷ್ಟೋ ಜನರಿಗೆ ಇನ್ನೂ ಮನೆಯೇ ಸಿಕ್ಕಿಲ್ಲ. ಅಂತಹ ಜಾಗದಲ್ಲಿ ಸಚಿವರು ಗ್ರಾಮ ವಾಸ್ತವ್ಯ ಮಾಡಿದ್ದರೆ ಆ ಗ್ರಾಮದ ಸಮಸ್ಯೆ ಏನೆಂಬುದು ಸಚಿವರು, ಸರ್ಕಾರ, ಅಧಿಕಾರಿಗಳಿಗೆ ಮುಟ್ಟುತ್ತಿತ್ತು. ಆದರೆ, ಸಚಿವರು ರಸ್ತೆ ಬದಿಯ ಗ್ರಾಮದಲ್ಲಿ ಮಲಗಿ ಹೋದರೆ ಮಲೆನಾಡಿಗರ ಸಮಸ್ಯೆ ಕೇಳುವವರು ಯಾರು? ಎಂದು ರೈತ ಸಂಘ ಪ್ರಶ್ನಿಸಿದೆ.

ಸಚಿವರಿಗೆ ಕ್ಲಾಸ್ ತೆಗೆದುಕೊಂಡ ರೈತ ಸಂಘ
ಒಟ್ಟಾರೆ, ಸಚಿವರ ಗ್ರಾಮ ವಾಸ್ತವ್ಯವೇ ತಪ್ಪು ಎಂದು ರೈತರು ಹೇಳುತ್ತಿಲ್ಲ. ಎಲ್ಲರೂ ರೈತರೇ, ಎಲ್ಲರಿಗೂ ಅನುಕೂಲವಾಗಬೇಕು. ಆದರೆ, ಎಲ್ಲಾ ಸೌಲಭ್ಯಗಳು ಇದ್ದ ಊರಿನಲ್ಲಿ ವಾಸ್ತವ್ಯ ಮಾಡುವದಕ್ಕಿಂತ, ಏನು ಇಲ್ಲದಂತದಹ ಊರಿನಲ್ಲಿ ವಾಸ್ತವ್ಯ ಮಾಡಿದರೆ ಅಲ್ಲಿನ ಜನರಿಗೂ ಅನುಕೂಲವಾಗುತ್ತಿತ್ತು. ಸಚಿವರು, ಸರ್ಕಾರಕ್ಕೆ ನಿಜಕ್ಕೂ ರೈತರ ಮೇಲೆ ಪ್ರೀತಿ-ಅಭಿಮಾನ-ಗೌರವ ಇದ್ದರೆ ಹುಲಿಕೆರೆ ಗ್ರಾಮದಲ್ಲಿ ಮಾಡಿದಂತೆ, ಮಲೆನಾಡು ಭಾಗದ ಕುಗ್ರಾಮದಲ್ಲೂ ಒಂದು ಗ್ರಾಮ ವಾಸ್ತವ್ಯ ಮಾಡಿ. ಆಗ ಆ ಭಾಗದ ರೈತರ ಬದುಕು ಹಸನಾಗಲಿದೆ ಎಂದು ಆಗ್ರಹಿಸಿದ್ದಾರೆ.












Click it and Unblock the Notifications