ಕೆಆರ್ಎಸ್ ತುಂಬುವ ಮುನ್ನವೇ ತಮಿಳುನಾಡಿಗೆ ನೀರು!
ಮಂಡ್ಯ, ಜುಲೈ14: ಕಾವೇರಿ ಕಣಿವೆಯಲ್ಲಿ ಈಗಷ್ಟೇ ಮುಂಗಾರು ಚೇತರಿಕೆ ಕಂಡಿದ್ದು, ತಳ ಮುಟ್ಟಿದ್ದ ಕೆ,ಆರ್.ಎಸ್ ಜಲಾಶಯದಲ್ಲಿ ನೀರಿನ ಪ್ರಮಾಣ ನಿಧಾನಗತಿಯಲ್ಲಿ ಹೆಚ್ಚುತ್ತಿದ್ದಂತೆಯೇ ಸದ್ದಿಲ್ಲದೆ ಬುಧವಾರ ಸಂಜೆಯಿಂದ ಸುಮಾರು 9 ಸಾವಿರ ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಬಿಡಲಾಗುತ್ತಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಕೆರಳಿದ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬಾಯಿಬಡಿದುಕೊಂಡು ಪ್ರತಿಭಟನೆ ನಡೆಸಿದ್ದಾರೆ.
ಕೊಡಗಿನಲ್ಲಿ ಮಳೆ ಸ್ವಲ್ಪ ಮಟ್ಟಿಗೆ ಕ್ಷೀಣಗೊಂಡಿದ್ದು ಜಲಾಶಯದ ಒಳ ಹರಿವು ಕಡಿಮೆಯಾಗಿದೆ. ಈಗ ಜಲಾಶಯದಲ್ಲಿ 95 ಅಡಿ ನೀರು ಸಂಗ್ರಹವಾಗಿದ್ದು, 19,575 ಕ್ಯುಸೆಕ್ ನೀರು ಒಳಹರಿವಿದೆ, ಆದರೆ 9 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಯಬಿಡುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕುರಿತಂತೆ ಪ್ರತಿಭಟನೆ ನಡೆಸಿ ಮಾತನಾಡಿದ ಪ್ರತಿಭಟನಾಕಾರರಾದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೋಣಸಾಲೆ ನರಸರಾಜು, ಬೊಮ್ಮೇಗೌಡ, ಕೃಷ್ಣ, ಹನಿಯಂಬಾಡಿ ನಾಗರಾಜು, ದೇವರಾಜು ಅವರುಗಳು ರಾಜ್ಯ ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇದ್ದರೆ ತಕ್ಷಣವೇ ನೀರನ್ನು ನಿಲ್ಲಿಸಿ, ನಾಲೆಗಳಿಗೆ ನೀರನ್ನು ಹರಿಸಿ, ಕೆರೆ-ಕಟ್ಟೆಗಳನ್ನು ತುಂಬಿಸಿ ಎಂದು ಆಗ್ರಹಿಸಿದ್ಾರೆ.

ರೈತರು ಸೇರಿದಂತೆ ರಾಜಕೀಯ ಪಕ್ಷಗಳು ಕಾವೇರಿ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡದೆ, ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಬೀದಿಗೆ ಇಳಿಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.












Click it and Unblock the Notifications