ತಿಳಿಯಿರಿ; ಕರ್ನಾಟಕ ರೈತ ಸುರಕ್ಷಾ ಪಿಎಂ ಫಸಲ್ಬಿಮಾ ಯೋಜನೆ
ಶಿವಮೊಗ್ಗ, ಫೆಬ್ರವರಿ 04; ಕೃಷಿವಲಯದಲ್ಲಿ ಸುಸ್ಥಿರ ಉತ್ಪಾದನೆಯನ್ನು ಬೆಂಬಲಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳಲ್ಲಿ ಕೆಆರ್ಎಸ್ಪಿಎಂಎಫ್ಬಿವೈ ಸಹ ಒಂದಾಗಿದೆ.
ಕರ್ನಾಟಕ ರೈತ ಸುರಕ್ಷಾ ಪಿಎಂ ಫಸಲ್ಬಿಮಾ ಯೋಜನೆ (ಕೆಆರ್ಎಸ್ಪಿಎಂಎಫ್ಬಿವೈ) ಕೃಷಿ ವಿಮೆಗಾಗಿ ಇರುವ ಒಂದು ಪ್ರಮುಖ ಯೋಜನೆಯಾಗಿದೆ. ಶಿಮಮೊಗ್ಗ ಜಿಲ್ಲೆಯಲ್ಲಿ 2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 20253 ಸಂಖ್ಯೆ ಅರ್ಜಿಗಳು ಯೋಜನೆಯಡಿ ನೋಂದಣಿಯಾಗಿವೆ.
6271 ರೈತರಿಗೆ ರೂ. 281.24 ಲಕ್ಷಗಳ ಮೊತ್ತ ಕ್ಲೈಮ್ ಇನಿಶಿಯೇಟ್ ಆಗಿರುತ್ತದೆ ಎಂದು ಕೃಷಿ ಜಂಟಿ ನಿರ್ದೇಶಕ ಡಾ.ಕಿರಣ್ಕುಮಾರ್ ಮಾಹಿತಿ ನೀಡಿದ್ದಾರೆ. 2020-21ನೇ ಸಾಲಿನ ಹಿಂಗಾರು/ ಬೇಸಿಗೆ ಹಂಗಾಮಿನಲ್ಲಿ ಇಲ್ಲಿಯವರೆಗೆ 312 ಸಂಖ್ಯೆ ಅರ್ಜಿಗಳು ನೋಂದಣಿಯಾಗಿದ್ದು, 12 ರೈತರಿಗೆ ರೂ. 27 ಲಕ್ಷಗಳ ಮೊತ್ತ ಕ್ಲೈಮ್ ಇನಿಶಿಯೇಟ್ ಆಗಿರುತ್ತದೆ.

ಏನಿದು ಯೋಜನೆ; ರೈತರ ಬದುಕು ಮಳೆಯಾಧಾರಿತವಾಗಿದ್ದು, ಅನಿಶ್ಚಿತತೆಯಿಂದ ಕೂಡಿದೆ. ಅಕಾಲಿಕ ಮಳೆ, ಬರ, ಪ್ರವಾಹ, ಆಲಿಕಲ್ಲು ಮುಂತಾದ ನೈಸರ್ಗಿಕ ವಿಪತ್ತುಗಳಿಂದಾಗುವ ನಷ್ಟದಿಂದ ರೈತರನ್ನು ರಕ್ಷಿಸಲು ಸರ್ಕಾರ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ಬಿಮಾ ಯೋಜನೆಯನ್ನು ಜಾರಿಗೆ ತಂದಿದೆ.
ಅಗ್ರಿಕಲ್ಟರ್ ಇನ್ಶೂರೆನ್ಸ್ ಕಂಪನಿಯವರ ಸಹಯೋಗದೊಂದಿಗೆ 2021-22ನೇ ಸಾಲಿನ ಮುಂಗಾರು, ಹಿಂಗಾರು, ಬೇಸಿಗೆ ಹಂಗಾಮುಗಳಲ್ಲಿ ಹೋಬಳಿ ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ಮಂಜೂರಾತಿ ನೀಡಿರುತ್ತದೆ.
ಯೋಜನೆ ಗುರಿಗಳು; ಕೃಷಿ ವಲಯದಲ್ಲಿ ಸುಸ್ಥಿರ ಉತ್ಪಾದನೆಯನ್ನು ಬೆಂಬಲಿಸುವುದು. ರೈತರಿಗೆ ಬೆಳೆ ನಷ್ಟ/ ಅನಿರೀಕ್ಷಿತ ಘಟನೆಗಳಿಂದಾದ ಹಾನಿಯಿಂದ ಉಂಟಾಗುವ ನಷ್ಟಕ್ಕೆ ಹಣಕಾಸಿನ ನೆರವು ನೀಡುವುದು. ರೈತರ ಆದಾಯವನ್ನು ಸ್ಥಿರಗೊಳಿಸುವ ಮೂಲಕ ಕೃಷಿಯಲ್ಲಿ ನಿರಂತರತೆಯನ್ನು ಖಚಿತಪಡಿಸುವುದು ಯೋಜನೆಯ ಮುಖ್ಯ ಗುರಿಯಾಗಿದೆ.
ರೈತರು ನವೀನ ಮತ್ತು ಆಧುನಿಕ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವುದು. ಉತ್ಪಾದನಾ ಅಪಾಯಗಳಿಂದ ರೈತರನ್ನು ರಕ್ಷಿಸುವುದರೊಂದಿಗೆ ಬೆಳೆ ವೈವಿಧ್ಯೀಕರಣ ಮತ್ತು ವರ್ಧನೆ ಹಾಗೂ ಕೃಷಿ ಕ್ಷೇತ್ರದ ಸ್ಪರ್ಧಾತ್ಮಕತೆಯನ್ನು ಖಾತ್ರಿಗೊಳಿಸುವುದು ಸಹ ಯೋಜನೆ ಉದ್ದೇಶವಾಗಿದೆ.
ಮುಂಗಾರು ಹಂಗಾಮಿಗೆ ಆಯ್ದ ಹೋಬಳಿಗಳಲ್ಲಿ ರಾಗಿ (ಮಳೆ ಆಶ್ರಿತ) ಹಾಗೂ ಜೋಳ (ಮಳೆ ಆಶ್ರಿತ) ಮತ್ತು ಗ್ರಾಮ ಪಂಚಾಯತಿ ಮಟ್ಟಕ್ಕೆ ಭತ್ತ (ನೀರಾವರಿ/ ಮಳೆ ಆಶ್ರಿತ), ಮುಸುಕಿನ ಜೋಳ (ನೀರಾವರಿ/ ಮಳೆ ಆಶ್ರಿತ) ಬೆಳೆಗಳು ಆಯ್ಕೆ ಯಾಗಿರುತ್ತವೆ. ಜಿಲ್ಲೆಯಲ್ಲಿ ಬೆಳೆ ವಿಮಾ ಯೋಜನೆಯನ್ನು ಸರ್ಕಾರದಿಂದ ಆಯ್ಕೆಯಾದ ಅಗ್ರಿಕಲ್ಟರ್ ಇನ್ಶೂರೆನ್ಸ್ ಕಂಪನಿ ಆಫ್ ಇಂಡಿಯಾ ಸಂಸ್ಥೆ ಇವರ ಸಹಯೋಗದೊಂದಿಗೆ ಜಾರಿಗೊಳಿಸಲಾಗುತ್ತಿದೆ.
ಮುಂಗಾರು ಹಂಗಾಮಿನ ಬೆಳೆ ವಿಮಗಾಗಿ ಬೆಳೆಸಾಲ ಪಡೆದ ಮತ್ತು ಪಡೆಯದ ರೈತರು ಈ ಯೋಜನೆಯಡಿ ಮುಸುಕಿನ ಜೋಳ (ನೀರಾವರಿ/ ಮಳೆಆಶ್ರಿತ) ಹಾಗೂ ಭತ್ತ (ನೀರಾವರಿ/ ಮಳೆಆಶ್ರಿತ), ಜೋಳ (ಮಳೆ ಆಶ್ರಿತ) ಮತ್ತು ರಾಗಿ (ಮಳೆ ಆಶ್ರಿತ) ಬೆಳೆಗಳಿಗೆ ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ.
ಬಿತ್ತನೆ ನಾಟಿ ಮಾಡುವುದಕ್ಕಿಂತ ಮುಂಚಿತವಾಗಿಯೇ ನೋಂದಾಯಿಸಲು ಸಹ ಅವಕಾಶವಿರುತ್ತದೆ. ಬೆಳೆ ಸಾಲ ಪಡೆಯುವ ರೈತರನ್ನು ಬೆಳೆ ವಿಮೆ ಯೋಜನೆಯಡಿ ಕಡ್ಡಾಯವಾಗಿ ಒಳಪಡಿಸಲಾಗುವುದು. ತದನಂತರ ಬೆಳೆಸಾಲ ಪಡೆದ ರೈತರು ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛೆ ಪಡದೇ ಇದ್ದಲ್ಲಿ ಬೆಳ ನೋಂದಣಿಯ ಅಂತಿಮ ದಿನಾಂಕಕ್ಕೆ 7 ದಿನಗಳ ಮುಂಚಿತವಾಗಿ ಲಿಖಿತ ಮುಚ್ಚಳಿಕೆ ನೀಡಿದಲ್ಲಿ ಅಂತಹ ರೈತರನ್ನು ಬೆಳೆ ಯೋಜನೆಯಿಂದ ಕೈಬಿಡಲಾಗುವುದು.
ಬೆಳೆ ಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ದಾಖಲೆಗಳಾದ ಪಹಣಿ ಮತ್ತು ಆಧಾರ್ ಸಂಖ್ಯೆ ಸಹಿತ ತಮಗೆ ಹತ್ತಿರವಿರುವ ಬ್ಯಾಂಕ್/ ಆರ್ಥಿಕ ಸಂಸ್ಥೆಗಳು, ಸಾರ್ವಜನಿಕ ಸೇವಾ ಕೇಂದ್ರಗಳಲ್ಲಿ (ಸಿಎಸ್ಸಿ ಕೇಂದ್ರಗಳು) ನೋಂದಾಯಿಸಿಕೊಳ್ಳಬಹುದಾಗಿದೆ.
2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 16764 ರೈತರ ಅರ್ಜಿಗಳಿಗೆ ರೂ.1534.06 ಲಕ್ಷಗಳ ವಿಮಾ ಮೊತ್ತ ರೈತರ ಖಾತೆಗೆ ಪಾವತಿಯಾಗಿದ್ದು, ನೋಂದಾಯಿತ ಬೆಳೆ ಪರಿಶೀಲನೆಗೆ ಬಾಕಿಯಿರುವ 379 ಸಂಖ್ಯೆ ರೈತರ ಅರ್ಜಿಗಳಿಗೆ ರೂ.31,49 ಲಕ್ಷಗಳ ವಿಮಾ ಮೊತ್ತ ಪಾವತಿಗೆ ಬಾಕಿಯಿರುತ್ತದೆ.
2019-20ನೇ ಸಾಲಿನ ಹಿಂಗಾರು/ ಬೇಸಿಗೆ ಹಂಗಾಮಿನಲ್ಲಿ 34 ಅರ್ಜಿಗಳಿಗೆ ರೂ. 245 ಲಕ್ಷಗಳು ಪಾವತಿಯಾಗಿರುತ್ತದೆ. ನೋಂದಾಯಿತ ಬೆಳೆ ಪರಿಶೀಲನೆಗೆ ಬಾಕಿಯಿರುವ 10 ಸಂಖ್ಯೆ ರೈತರ ಅರ್ಜಿಗಳಿಗೆ ರೂ. 0.49 ಲಕ್ಷಗಳ ವಿಮಾ ಮೊತ್ತ ಪಾವತಿಗೆ ಬಾಕಿಯಿರುತ್ತದೆ ಎಂದು ಮಾಹಿತಿ ನೀಡಲಾಗಿದೆ.












Click it and Unblock the Notifications