ರೈತರ ಪ್ರತಿಭಟನೆಯಲ್ಲಿ ಖಲಿಸ್ತಾನಿ ಉಗ್ರರು ಭಾಗಿ: ಸುಪ್ರೀಂಕೋರ್ಟ್ಗೆ ಕೇಂದ್ರ ಮಾಹಿತಿ
ನವದೆಹಲಿ, ಜನವರಿ 12: ದೆಹಲಿ ಸುತ್ತಮುತ್ತ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಪ್ರತ್ಯೇಕ ಖಲಿಸ್ತಾನ ದೇಶಕ್ಕಾಗಿ ಪ್ರತಿಪಾದಿಸುತ್ತಿರುವ ಖಲಿಸ್ತಾನಿ ಉಗ್ರರೂ ಭಾಗಿಯಾಗಿದ್ದಾರೆ ಎಂದು ಅನೇಕರು ಆರೋಪಿಸಿದ್ದರು. ಇದೇ ಆರೋಪವನ್ನು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ನಲ್ಲಿ ಮಾಡಿದೆ.
ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯಲ್ಲಿ ಖಲಿಸ್ತಾನಿಗಳು ಕೂಡ ಹಸ್ತಕ್ಷೇಪ ಮಾಡಿದ್ದಾರೆ ಎಂಬ ಮಾಹಿತಿ ನಮಗೆ ಬಂದಿದೆ ಎಂದು ಮಂಗಳವಾರ ಸುಪ್ರೀಂಕೋರ್ಟ್ನಲ್ಲಿ ನಡೆದ ವಿಚಾರಣೆ ವೇಳೆ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಹೇಳಿದರು.
'ಈ ಪ್ರತಿಭಟನೆಯಲ್ಲಿ ಖಲಿಸ್ತಾನಿ ಜನರು ನುಸುಳಿಕೊಂಡಿದ್ದರೆ ನೀವು ಇದನ್ನು ಖಚಿತಪಡಿಸುತ್ತೀರಾ?' ಎಂದು ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ಪ್ರಶ್ನಿಸಿದರು. ಇದಕ್ಕೆ ಅಟಾರ್ನಿ ಜನರಲ್, 'ಹೌದು, ನಾನು ಖಚಿತಪಡಿಸುತ್ತೇನೆ; ಎಂದರು.

'ನಿಷೇಧಿತ ಸಂಘಟನೆಯೊಂದು ಇದರಲ್ಲಿ ಒಳನುಸುಳಿಕೊಂಡಿದ್ದರೆ ಮತ್ತು ನಮ್ಮ ಮುಂದೆ ಈ ಬಗ್ಗೆ ಯಾರಾದರೂ ಆರೋಪ ಮಾಡಿದರೆ ನೀವು ಅದನ್ನು ಖಚಿತಪಡಿಸಬೇಕು. ನಾಳೆ ವೇಳೆಗೆ ಈ ಬಗ್ಗೆ ಅಫಿಡವಿಟ್ ಸಲ್ಲಿಸಿ' ಎಂದು ಸಿಜೆಐ ಸೂಚಿಸಿದರು. 'ಈ ಸಂಬಂಧ ನಾವು ಅಫಿಡವಿಟ್ ಸಲ್ಲಿಸುತ್ತೇವೆ. ಗುಪ್ತಚರ ಸಂಸ್ಥೆಯ ದಾಖಲೆಗಳನ್ನು ಕೂಡ ನೀಡಲಿದ್ದೇವೆ' ಎಂದು ಕೆಕೆ ವೇಣುಗೋಪಾಲ್ ಪ್ರತಿಕ್ರಿಯಿಸಿದರು.
'ಸಿಖ್ಸ್ ಫಾರ್ ಜಸ್ಟೀಸ್' ಎಂಬ ನಿಷೇಧಿತ ಸಂಘಟನೆ ಈ ಪ್ರತಿಭಟನೆಯಲ್ಲಿ ಸೇರಿಕೊಂಡಿದೆ ಎಂದು ಕೃಷಿ ಕಾಯ್ದೆ ಪರ ಅರ್ಜಿ ಸಲ್ಲಿಸಿರುವ ಪಿಎಸ್ ನರಸಿಂಹ ಕೂಡ ಆರೋಪಿಸಿದ್ದಾರೆ.
ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುವುದನ್ನು ಮುಂದಿನ ಆದೇಶದವರೆಗೂ ತಡೆ ಹಿಡಿದಿರುವ ಸುಪ್ರೀಂಕೋರ್ಟ್, ಸಮಸ್ಯೆಯನ್ನು ಬಗೆಹರಿಸಲು ನಾಲ್ವರು ಸದಸ್ಯರ ಸಮಿತಿಯನ್ನು ರಚಿಸಿದೆ. ಭಾರತೀಯ ಕಿಸಾನ್ ಒಕ್ಕೂಟದ ಭೂಪಿಂದರ್ ಸಿಂಗ್ ಮನ್, ಶೆಟ್ಕಾರಿ ಸಂಘಟನೆಯ ಅನಿಲ್ ಗಣ್ವತ್, ಡಾ. ಪ್ರಮೋದ್ ಕುಮಾರ್ ಜೋಶಿ ಮತ್ತು ಕೃಷಿ ಅರ್ಥಶಾಸ್ತ್ರಜ್ಞ ಅಶೋಕ್ ಗುಲಾಟಿ ಈ ಸಮಿತಿಯಲ್ಲಿದ್ದಾರೆ.












Click it and Unblock the Notifications