ರೈತರಿಗೆ ಗುಡ್ ನ್ಯೂಸ್: ಕರ್ನಾಟಕ ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿಗೆ ಒಪ್ಪಿಗೆ
ಬೆಂಗಳೂರು, ಅಕ್ಟೋಬರ್ 29: ಕರ್ನಾಟಕದ ರೈತರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿಯನ್ನು ನೀಡಿದೆ. ಸಚಿವ ಸಂಪುಟ ಸಭೆಯಲ್ಲಿ 'ಕರ್ನಾಟಕ ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿ' ಅಸ್ತಿತ್ವಕ್ಕೆ ತರಲು ಅನುಮೋದನೆ ನೀಡಲಾಗಿದೆ. ಸಚಿವ ಸಂಪುಟ ಸಭೆಯ ಬಳಿಕ ಸಚಿವ ಎಚ್. ಕೆ. ಪಾಟೀಲ ಅವರು ಕೃಷಿ ಅಭಿವೃದ್ಧಿ ಏಜೆನ್ಸಿಯ ವಿಶೇಷತೆಗಳ ಕುರಿತು ಸಹ ವಿವರಣೆಯನ್ನು ನೀಡಿದ್ದಾರೆ. ಈ ಏಜೆನ್ಸಿಗೆ ಅಗತ್ಯವಿರುವ ಮಾನವ ಸಂಪನ್ಮೂಲವನ್ನು ಸಹ ಹೊರಗುತ್ತಿಗೆ ಆಧಾರದ ಮೇಲೆ ಪಡೆಯಲಾಗುತ್ತದೆ.
ಬೀಜೋತ್ಪಾದನಾ ಕೇಂದ್ರಗಳು, ರೈತ ಸಂಪರ್ಕ ಕೇಂದ್ರಗಳು, ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳು ಮತ್ತು ಜೈವಿಕ ನಿಯಂತ್ರಣ/ ಪರತಂತ್ರ ಜೀವಿ ಪ್ರಯೋಗಾಲಯಗಳು, ಈ ನಾಲ್ಕು ಘಟಕಗಳನ್ನು ಒಂದೇ ಸೂರಿನಡಿ ತಂದು ಅವುಗಳಿಂದ ಬರುವ ಆದಾಯ ಹಾಗೂ ಸರ್ಕಾರದಿಂದ ನೀಡುವ ಅನುದಾನವನ್ನು ಜೊತೆಗೂಡಿಸಿ ಸದರಿ ಘಟಕಗಳನ್ನು ಅಭಿವೃದ್ಧಿಪಡಿಸಲು 'ಕರ್ನಾಟಕ ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿ' ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಸಚಿವ ಎಚ್.ಕೆ ಪಾಟೀಲ ಹೇಳಿದ್ದಾರೆ.

ಏಜೆನ್ಸಿಯ ದೈನಂದಿನ ಚಟುವಟಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಹಾಗೂ ಪ್ರಸ್ತಾಪಿತ ನಾಲ್ಕು ಘಕಟಗಳಿಗೆ ಅವಶ್ಯವಿರುವ ಉಪಕರಣ, ಪರಿಕರಗಳ ಖರೀದಿ, ದುರಸ್ತಿ, ನಿರ್ವಹಣೆ ಮತ್ತು ಆಸ್ತಿ ಸಂರಕ್ಷಿಸಲು ಅವಶ್ಯಕವಿರುವ ಸುರಕ್ಷಿತ ಕ್ರಮಗಳನ್ನು ಆಕರಣೆಯಾಗುವ ಸೇವಾ ಶುಲ್ಕದಿಂದ ಕೆ.ಟಿ.ಪಿ.ಪಿ ನಿಯಮಾವಳಿಯನ್ವಯ ಹಾಗೂ ಚಾಲ್ತಿಯಲ್ಲಿರುವ ಆರ್ಥಿಕ ಇಲಾಖೆಯ ನಿಯಮ/ ಸುತ್ತೋಲೆ ಗಳಿಗೊಳಪಟ್ಟು ಕೈಗೊಳ್ಳಲು ನಿರ್ಧರಿಸಿದೆ.
ಪ್ರಸ್ತಾಪಿತ ನಾಲ್ಕು ಘಟಕಗಳು ಮತ್ತು ಕರ್ನಾಟಕ ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿ ಘಟಕದ ಮೇರೆಗೆ ಪಡೆಯಲು ಹಾಗೂ ನಿರ್ವಹಣಾ ವೆಚ್ಚ ಭರಿಸಲು ತೀರ್ಮಾನಿಸಲಾಗಿದೆ. ಬೀಜೋತ್ಪಾದನಾ ಕೇಂದ್ರಗಳ ಜಮೀನನ್ನು ಅನಿವಾರ್ಯ ಸಂದರ್ಭಗಳಲ್ಲಿ ಇತರೆ ಇಲಾಖೆ/ ಸಂಸ್ಥೆಗೆ ನೀಡಬೇಕಾದಲ್ಲಿ ಸದರಿ ಜಮೀನಿನ ಬದಲು ಸಾಗುವಳಿ ಯೋಗ್ಯ ಸಮಾನ ಮೌಲ್ಯದ, ಆದ್ಯತೆ ಮೇರೆಗೆ ಅದೇ ತಾಲ್ಲೂಕಿನಲ್ಲಿ ಜಮೀನು ಮಂಜೂರು ಮಾಡುವ ಷರತ್ತಿಗೊಳಪಟ್ಟು ಕರ್ನಾಟಕ ರಾಜ್ಯ ಕೃಷಿ ಅಭಿವೃದ್ಧಿ ಏಜೆನ್ಸಿಯ ಸಹಮತಿಯನ್ನು ಪಡೆಯಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಕೊಡಲಾಗಿದೆ.
ವಿಶೇಷತೆಗಳು: 23 ಜಿಲ್ಲೆಗಳಲ್ಲಿ 45 ಬೀಜೋತ್ಪಾದನ ಕೇಂದ್ರಗಳು, ಒಟ್ಟು 893 ಹೆಕ್ಟೇರ್ ವಿಸ್ತೀರ್ಣದ ಭೂಮಿಯಲ್ಲಿ ಬಿತ್ತನೆ ಬೀಜಗಳನ್ನು ಉತ್ಪಾದಿಸುತ್ತಿವೆ. 742 ರೈತ ಸಂಪರ್ಕ ಕೇಂದ್ರಗಳು ಹೋಬಳಿಗೊಂದರಂತೆ ಕಾರ್ಯನಿರ್ವಹಿಸುತ್ತಿವೆ. ರಾಜ್ಯದಲ್ಲಿ ಮೊದಲ ಪರತಂತ್ರ ಜೀವಿ ಪ್ರಯೋಗಾಲಯವನ್ನು ಮಂಡ್ಯದಲ್ಲಿ ಪ್ರಾರಂಭಿಸಲಾಗಿದೆ. 6 ಜೈವಿಕ ನಿಯಂತ್ರಣ/ ಪರತಂತ್ರ ಜೀವಿ ಪ್ರಯೋಗಾಲಯಗಳು ಮಂಡ್ಯ, ಕಲಬುರಗಿ, ಗಂಗಾವತಿ, ದಾವಣಗೆರೆ, ಧಾರವಾಡ ಮತ್ತು ಬೈಲಹೊಂಗಲಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.
ಜೈವಿಕ ನಿಯಂತ್ರಣಕಾರಕ ಟ್ರೈಕೋಗ್ರಾಮ್ ಹಾಗೂ ಜೈವಿಕ ಪೀಡೆನಾಶಕಗಳಾದ ಟೈಕೋಡರ್ಮಾ, ಸುಡೊಮೊನಾಸ್ ಮತ್ತು ಮೆಟರೈಸಿಯಂ ಉತ್ಪಾದಿಸಿ ವಿತರಣೆ ಮಾಡಲಾಗುತ್ತಿದೆ. 23 ಕೃಷಿ ತರಬೇತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ರೈತ ಸಂಪರ್ಕ ಕೇಂದ್ರಗಳ ಸೇವಾಶುಲ್ಕ, ಬೀಜೋತ್ಪಾದನೆ ಕೇಂದ್ರಗಳು, ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳು ಮತ್ತು ಇತರ ಪ್ರಯೋಗಾಲಯಗಳಿಂದ ಬರುವ ಆದಾಯವನ್ನು ಒಗ್ಗೂಡಿಸಿ ಸರ್ಕಾರವು ನೀಡುವ ಅನುದಾನದ ಜೊತೆಗೆ ಸಮಗ್ರ ಅಭಿವೃದ್ಧಿಗೆ ಉಪಯೋಗಿಸಲು ಪ್ರಸ್ತಾಪಿಸಲಾಗಿದೆ.












Click it and Unblock the Notifications