ಮಾವಿನಹಣ್ಣಿಗೆ 2000 ರೂ. ಬೆಂಬಲ ಬೆಲೆ: ಸರ್ಕಾರದ ಚಿಂತನೆ
ಬೆಂಗಳೂರು, ಜುಲೈ 9: ಬೆಲೆ ಕುಸಿತದಿಂದ ಕಂಗಾಲಾಗಿರುವ ಮಾವು ಬೆಳೆಗಾರರಿಗೆ ಪ್ರತಿ ಟನ್ಗೆ 2,000 ರೂಪಾಯಿ ಬೆಂಬಲ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಈ ಬಾರಿ ಮಾವು ಫಸಲು ಚೆನ್ನಾಗಿ ಆಗಿದೆ. ಆದರೆ, ಬೇಡಿಕೆ ತಗ್ಗಿದೆ. ಜನರು ಯಾಕೋ ಮಾವಿನ ಹಣ್ಣಿನ ಬಗ್ಗೆ ಒಲವು ತೋರಿಸುತ್ತಿಲ್ಲ. ಅಲ್ಲದೆ ಮಳೆ ಹೆಚ್ಚಾಗಿದ್ದರಿಂದ ಬಹುತೇಕ ಕಡೆ ಹಣ್ಣುಗಳು ಬೇಗನೆ ಕೊಳೆತು ಹೋಗುತ್ತಿವೆ.
ಮಳೆ ಹೆಚ್ಚಾದ ಬಳಿಕ ಮಾವಿನ ಹಣ್ಣಿನಲ್ಲಿ ಹುಳ ಆಗುವ ಸಾಧ್ಯತೆ ಹೆಚ್ಚಿರುವುದರಿಂದ ಜನರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.
ಈ ಕಾರಣಗಳಿಂದ ಮಾವಿನ ಹಣ್ಣಿಗೆ ಬೇಡಿಕೆ ಕುಸಿದಿದೆ. ಮಾರಾಟವಾಗದೆ ವ್ಯರ್ಥವಾಗುತ್ತಿರುವ ಹಣ್ಣುಗಳನ್ನು ಜನರು ರಸ್ತೆ ಬದಿಯಲ್ಲಿ ಸುರಿಯುತ್ತಿದ್ದಾರೆ.

ಕೋಲಾರದ ವಿವಿಧೆಡೆ ರೈತರು ಮಾವಿನ ಹಣ್ಣಿನ ಬೆಲೆ ಕುಸಿತದಿಂದ ಆಕ್ರೋಶಗೊಂಡು ಮಾವಿನ ಹಣ್ಣುಗಳನ್ನು ಸುರಿದು ಅದಕ್ಕೆ ಹೂವಿನ ಹಾರ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಮಾವಿನಹಣ್ಣಿನ ನಗರ ಎಂದೇ ಖ್ಯಾತವಾಗಿರುವ ಕೋಲಾರದ ಶ್ರೀನಿವಾಸಪುರದಲ್ಲಿ ಪ್ರತಿಭಟನೆ ಕಾವು ಹೆಚ್ಚಿದ್ದು, ಪಟ್ಟಣ ಪ್ರದೇಶದಲ್ಲಿ ಬಂದ್ ಆಚರಿಸಲಾಗುತ್ತಿದೆ. ನಗರದ ಪ್ರಮುಖ ಸರ್ಕಲ್ಗಳಲ್ಲಿ ಟೈರ್ಗೆ ಬೆಂಕಿ ಹಚ್ಚಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾವಿನ ಹಣ್ಣಿಗೆ ಬೆಂಬಲ ಬೆಲೆ ನೀಡುವ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅಧಿಕಾರಗಳ ಜತೆ ಚರ್ಚೆ ನಡೆಸಿದ್ದಾರೆ.
ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರಗಳಲ್ಲಿ ಕರ್ನಾಟಕ ಮಾವಿನ ಹಣ್ಣುಗಳ ಖರೀದಿಗೆ ನಿರ್ಬಂಧ ವಿಧಿಸಲಾಗಿದೆ. ಇದನ್ನು ತೆರವುಗೊಳಿಸಿ ಹಣ್ಣ ಖರೀದಿ ಮಾಡುವಂತೆ ಕುಮಾರಸ್ವಾಮಿ ಅವರು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ.
ಮಾವು ಬೆಳೆಗಾರರಿಗೆ ತಕ್ಷಣಕ್ಕೆ ನೆರವಾಗಲು ಪ್ರತಿ ಟನ್ಗೆ 2,000 ರೂಪಾಯಿ ಬೆಂಬಲ ಬೆಲೆ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.












Click it and Unblock the Notifications