ಕರ್ನಾಟಕದಲ್ಲಿ MSP ಬೆಲೆಗೆ ಹೆಸರು ಮತ್ತು ಉದ್ದು ಖರೀದಿಗೆ ಅಸ್ತು
ಹೆಸರು ಕಾಳು ಮತ್ತು ಉದ್ದಿನ ಬೇಳೆಯನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಕೊಳ್ಳುವುದಕ್ಕೆ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಹಸಿರು ನಿಶಾನೆ ತೋರಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಪ್ರಕ್ರಿಯೆ ಆರಂಭವಾಗಲಿದೆ. ಇದರ ಪ್ರಕಾರ ಹೆಸರು ಕಾಳು 30,000 ಟನ್ ಮತ್ತು ಉದ್ದಿನ ಬೇಳೆ 10,000 ಟನ್ ಖರೀದಿ ಮಾಡಲಾಗುತ್ತದೆ.
ಉತ್ತರ ಕರ್ನಾಟಕ ಭಾಗದಲ್ಲೇ ಹೆಚ್ಚು ಬೆಳೆವ ಹೆಸರು ಮತ್ತು ಉದ್ದು ಖರೀದಿಸಲು ಜಿಲ್ಲೆಗಳಲ್ಲಿ ಕೇಂದ್ರಗಳನ್ನು ಸ್ಥಾಪಿಸಿದ ಕೂಡಲೇ ಈ ಪ್ರಕ್ರಿಯೆ ಆರಂಭವಾಗಲಿದೆ.

ಈ ತಿಂಗಳ ಆರಂಭದಿಂದಲೇ ಹೆಸರು ಕಾಳು ಕಟಾವು ನಡೆಯುತ್ತಿದೆ. ಆದರೆ ಎಲ್ಲಾ ಮಾರುಕಟ್ಟೆಗಳಲ್ಲಿ ಹೆಸರು ಕಾಳಿಗೆ ನಿಗದಿ ಮಾಡಿರುವ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ಇದೆ. (ಎಂ.ಎಸ್.ಪಿ-7275 ರೂ) ಗದಗ ಜಿಲ್ಲೆಯಲ್ಲಿ ಗುರುವಾರ 1384 ಟನ್ ಆವಕ 5995 ರೂಪಾಯಿಯಂತೆ ಖರೀದಿಯಾಯಿತು, ಇದು ಎಂ.ಎಸ್.ಪಿ ಗಿಂತ 1280 ರೂ ಕಡಿಮೆಗೆ ಮಾರಾಟವಾಗಿದೆ. ಇದರಿಂದ ಬೇಸತ್ತ ರೈತರು ತಂದ ಒತ್ತಡದಿಂಡ ಇದೀಗ ಸರ್ಕಾರ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ ಎಂ.ಎಸ್.ಪಿ ಗೆ ಕೊಳ್ಳುವ ವ್ಯವಸ್ಥೆ ಮಾಡುತ್ತಿದೆ.

ಮುಖ್ಯವಾಗಿ ಗದಗ, ಧಾರವಾಡ, ಹಾವೇರಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಕಲಬುರಗಿ, ಯಾದಗಿರಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಹೆಸರು ಕಾಳು ಬೆಳೆಯಲಾಗುತ್ತದೆ.
90 ದಿನಗಳ ಬೆಳೆಯಾದ ಉದ್ದು ಕಟಾವು ಇನ್ನೇನು ಕೆಲವೇ ವಾರಗಳಲ್ಲಿ ಆರಂಭವಾಗಲಿದೆ. ಇದಕ್ಕೆ ಎಂ.ಎಸ್.ಪಿ 6,300 ರೂ ನಿಗದಿಪಡಿಸಲಾಗಿದೆ. ಕರ್ನಾಟಕದ ಧಾರವಾಡ, ಯಾದಗಿರಿ, ಬೀದರ್, ಬೆಳಗಾವಿ, ಕಲ್ಬುರ್ಗಿ ಮತ್ತು ಮೈಸೂರು ಜಿಲ್ಲೆಗಳಲ್ಲಿ ಉದ್ದು ಮುಖ್ಯವಾಗಿ ಬೆಳೆಯಲಾಗುತ್ತದೆ.
ರಾಜ್ಯದಲ್ಲಿ ಈ ಮುಂಗಾರು ಹಂಗಾಮಿನಲ್ಲಿ 3.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹೆಸರುಕಾಳು ಬೆಳೆಯಲಾಗಿದೆ. ಉದ್ದು 0.83 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಬೆಳೆಯಲಾಗಿದೆ. ಕೃಷಿ ಇಲಾಖೆ ಅಂದಾಜಿಸಿರುವ ಪ್ರಕಾರ ಹೆಸರು 1.2 ಲಕ್ಷ ಟನ್ ಉತ್ಪಾದನೆ ಆಗುತ್ತದೆ. ಉದ್ದು 0.43 ಲಕ್ಷ ಟನ್. ಈ ಬೆಳೆಗಳ ಖರೀದಿಗಾಗಿ ಕೇಂದ್ರದಿಂದ NAFED ನೋಡಲ್ ಏಜೆನ್ಸಿ, ಕರ್ನಾಟಕದಲ್ಲಿ ಕರ್ನಾಟಕ ಸ್ಟೇಟ್ ಕೋಆಪರೇಟೀವ್ ಮಾರ್ಕೆಟಿಂಗ್ ಫೆಡರೇಶನ್ ಖರೀದಿಯ ಹೊಣೆಗಾರಿಕೆಯನ್ನು ಹೊತ್ತಿವೆ.












Click it and Unblock the Notifications